ಕೈಕಂಬ: ಕುಮಟಾ – ಶಿರಸಿ ಹೆದ್ದಾರಿಯಲ್ಲಿ ಶಿರಸಿಯ ಬಂಡಲ್ ಬಳಿ ಡಿ. 8ರ ಬೆಳಗ್ಗೆ ನಡೆದ ಸರಕಾರಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಿನ್ನಿಕಂಬಳದ ಪಿ. ರಾಮಕೃಷ್ಣ ರಾವ್, ಪತ್ನಿ ವಿದ್ಯಾಲಕ್ಷ್ಮೀ ರಾವ್ ಹಾಗೂ ರಾಮಕೃಷ್ಣ ರಾವ್ ಅವರ ತಮ್ಮ ಗಣೇಶ್ ರಾವ್ ಮತ್ತು ಸರಸ್ವತಿಯವರ ಮಗ ಸುಹಾಸ್ ಅವರ ಅಂತ್ಯಕ್ರಿಯೆಯನ್ನು ಶನಿವಾರ ಮೂಡುಪೆರಾರ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಶುಕ್ರವಾರ ರಾತ್ರಿ ಸುರತ್ಕಲ್ ಖಾಸಗಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದ ಮೃತ ದೇಹಗಳನ್ನು ಬೆಳಗ್ಗೆ 10ಕ್ಕೆ ಕಿನ್ನಿಕಂಬಳದ ಅವರ ಮನೆಗೆ ತರಲಾಗಿದ್ದು ಅಲ್ಲಿ ವಿಧಿವಿಧಾನವನ್ನು ನೆರವೇರಿಸಲಾಯಿತು.
ಶಾಸಕ ಡಾ| ಭರತ್ ಶೆಟ್ಟಿ ವೈ., ಬಿಜೆಪಿಯ ತಿಲಕ್ ರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಸೋಹನ್ ಅತಿಕಾರಿ, ಕಾಂಗ್ರೆಸ್ ಮುಖಂಡ ಇನಾಯತ್ ಆಲಿ, ಆರ್.ಕೆ. ಪೃಥ್ವೀರಾಜ್, ಸುನಿಲ್ ಗಂಜಿಮಠ, ಪೊಂಪೈ ಚರ್ಚ್ನ ಧರ್ಮಗುರು ವಂ| ರುಡೋಲ್ಪ್ ರವಿ ಡೇಸಾ ಮುಂತಾದವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಆ ಬಳಿಕ ಮೃತದೇಹಗಳನ್ನು ಮೂಡುಪೆರಾರ ರುದ್ರಭೂಮಿಗೆ ಕೊಂಡ್ಯುಯಲಾಯಿತು. ಅಲ್ಲಿ ರಾಮಕೃಷ್ಣ ರಾವ್, ವಿದ್ಯಾ ಲಕ್ಷ್ಮಿ ರಾವ್ ಅವರ ಅಂತ್ಯಕ್ರಿಯೆಯನ್ನು ಒಟ್ಟಿಗೆ ಮಾಡಲಾಯಿತು, ಸುಹಾಸ್ ಅವರ ಅಂತ್ಯಕ್ರಿಯೆಯನ್ನು ಇನ್ನೊಂದರಲ್ಲಿ ನಡೆಸಲಾಯಿತು.
ಪಿ.ರಾಮಕೃಷ್ಣ ರಾವ್ ಅವರ ತಮ್ಮ ದಿ| ಮೋಹನ್ ರಾವ್ ಅವರ ಪತ್ನಿ ಪುಷ್ಪಾ ಎಂ.ರಾವ್ ಅವರ ಅಂತ್ಯಕ್ರಿಯೆ ರವಿವಾರ ನಡೆಯಲಿದೆ.ಅವರ ಪುತ್ರ ಶನಿವಾರ ರಾತ್ರಿ ಜಪಾನ್ನಿಂದ ಬರಲಿದ್ದಾರೆ. ಪುಷ್ಪಾ ಅವರ ಅಂತ್ಯಸಂಸ್ಕಾರವೂ ಮೂಡುಪೆರಾರದ ರುದ್ರಭೂಮಿಯಲ್ಲಿಯೇ ನಡೆಯಲಿದೆ.
ಅರವಿಂದಾಕ್ಷ ಅವರ ಅಂತ್ಯಕ್ರಿಯೆ ಕಾಟಿಪಳ್ಳದ ರುದ್ರಭೂಮಿಯಲ್ಲಿ ನಡೆಯಲಿದೆ.ಅವರ ತಂದೆ ತಾಯಿ ಭಾಸ್ಕರ್ ರಾವ್ ಮತ್ತು ಲತಾ ಅವರು ಶನಿವಾರ ಸಂಜೆ ವೇಳೆ ಚೆನ್ನೈಯಿಂದ ಬರಲಿದ್ದಾರೆ. ಆ ಬಳಿಕವೇ ಅಂತ್ಯ ಸಂಸ್ಕಾರ ನಡೆಯಲಿದೆ.