Advertisement

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

06:27 PM Jul 06, 2022 | Team Udayavani |

ಬಹು ಹಿಂದಿನಿಂದಲೂ ಕರ್ನಾಟಕ, ಕೇರಳ, ಮಹಾರಾಷ್ಟ್ರವನ್ನು ಒಳಗೊಂಡಂತೆ ಪಶ್ಚಿಮ ಘಟ್ಟ ಹಾದು ಹೋಗಿರುವ ರಾಜ್ಯಗಳಲ್ಲಿ ಕಸ್ತೂರಿರಂಗನ್‌ ವರದಿ ಜಾರಿ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ಈ ವರದಿ ಜಾರಿಯಾದಲ್ಲಿ ಇಡೀ ಪಶ್ಚಿಮ ಘಟ್ಟದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಮಾತುಗಳಿವೆ. ಅದರಂತೆಯೇ ಜೂ.3ರಂದು ಸುಪ್ರೀಂಕೋರ್ಟ್‌ ಇಡೀ ದೇಶಕ್ಕೆ ಅನ್ವಯವಾಗುವಂತೆ 1 ಕಿ.ಮೀ. ಬಫ‌ರ್‌ ಝೋನ್‌ ಸಂಬಂಧ ತೀರ್ಪು ನೀಡಿದ್ದು, ನಂತರ ಕೇರಳದಲ್ಲಿ ಮತ್ತೆ ಹೋರಾಟ ಶುರುವಾಗಿವೆ. ಹಾಗಾದರೆ, ಏನಿದು ತೀರ್ಪು? ಕರ್ನಾಟಕಕ್ಕೆ ಇದು ಅನ್ವಯವಾಗಲಿದೆಯೇ? ಇಲ್ಲಿದೆ ಮಾಹಿತಿ…

Advertisement

ಕೇಂದ್ರ ಸರಕಾರದ ಮಾರ್ಗಸೂಚಿಯೇನು?
ಕೇಂದ್ರ ಪರಿಸರ ಸಚಿವಾಲಯವು ಇಎಸ್‌ಜೆಡ್‌ನ‌ಲ್ಲಿ ಗಣಿಗಾರಿಕೆ, ಸಾ ಮಿಲ್‌ಗ‌ಳು, ಮಾಲಿನ್ಯಕಾರಕ ಕೈಗಾರಿಕೆಗಳು, ಫೈರ್‌ವುಡ್‌ಗಳ ವಾಣಿಜ್ಯ ಬಳಕೆ, ಮೆಗಾ ಹೈಡ್ರಲ್‌ ಪ್ರಾಜೆಕ್ಟ್ಗಳು, ಅಪಾಯಕಾರಿ ವಸ್ತುಗಳ ಉತ್ಪಾದನೆಯನ್ನು ನಿಷೇಧಿಸಿದೆ. ಇದರ ಜತೆಯÇÉೇ ನಿಬಂಧನೆ ಅಥವಾ ಷರತ್ತಿಗೆ ಒಳಪಟ್ಟು ಬಿದ್ದ ಮರಗಳನ್ನು ಕಡಿಯುವುದು(ಇಲಾಖೆಯ ಅನುಮತಿಯೊಂದಿಗೆ), ಒಪ್ಪಿಗೆಯಾದ ಮಾಸ್ಟರ್‌ ಪ್ಲಾನ್‌ಗಳೊಂದಿಗೆ ಹೋಟೆಲ್‌ಗ‌ಳು ಮತ್ತು ರೆಸಾರ್ಟ್‌ಗಳ ಸ್ಥಾಪನೆ, ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆ, ನೈಸರ್ಗಿಕ ಜಲ ಸಂಪನ್ಮೂಲಗಳ ವಾಣಿಜ್ಯ ಬಳಕೆ, ಅಂತರ್ಜಲ ಮರುಪೂರಣ, ಭೂಗತ ಕೇಬಲ್‌ ಅಳವಡಿಕೆ, ಕಟ್ಟಡಗಳ ಸುತ್ತ ಬೇಲಿ, ರಸ್ತೆಗಳ ಅಗಲೀಕರಣ, ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ನಿಷೇಧದಂಥ ನಿಯಮ ರೂಪಿಸಲಾಗಿದೆ. ಹಾಗೆಯೇ, ಕೃಷಿ ಮತ್ತು ತೋಟಗಾರಿಕೆಗೆ ಅನುಮತಿ, ಮಳೆ ನೀರು ಸಂಗ್ರಹ, ಸಾವಯವ ಕೃಷಿ, ಹಸಿರು ತಂತ್ರಜ್ಞಾನ ಅಳವಡಿಕೆಗೆ ಒಪ್ಪಿಗೆ ನೀಡಲಾಗಿದೆ.

ಕೇರಳದ ಮೇಲೇನು ಪರಿಣಾಮ?
ಸದ್ಯಕ್ಕೆ ಕೇರಳದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಖಚಿತವಾಗಿಲ್ಲ. ಆದರೆ, ಜನರಲ್ಲಿ ಮಾತ್ರ ಆತಂಕ ತುಂಬಿದೆ. ಇದರಿಂದಾಗಿಯೇ, ಇತ್ತೀಚೆಗಷ್ಟೇ ಕೇರಳದ ವಯನಾಡಿನ ಸಂಸದ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಕಚೇರಿಯನ್ನು ಹೋರಾಟಗಾರರು ಧ್ವಂಸ ಮಾಡಿದ್ದರು. ಇನ್ನು ಕೇರಳ ಸರಕಾರವೂ ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ, ಅದರ ಅಧ್ಯಯನಕ್ಕಾಗಿ ಕೇರಳ ರಾಜ್ಯ ರಿಮೋಟ್‌ ಸೆನ್ಸಿಂಗ್‌ ಆ್ಯಂಡ್‌ ಎನ್ವಿರಾನ್ಮೆಂಟ್‌ ಸೆಂಟರ್‌ಗೆ ಸೂಚನೆ ನೀಡಿದೆ. ಈ ಕುರಿತಂತೆ ಎಲ್ಲಾ ಮಾಹಿತಿ ಸಂಗ್ರಹ ಮಾಡುವಂತೆಯೂ ಹೇಳಿದೆ. ಆದರೂ, ಪ್ರತಿಪಕ್ಷ ಕಾಂಗ್ರೆಸ್‌ ಪ್ರಕಾರ, ಸುಮಾರು 1 ಲಕ್ಷ ಕುಟುಂಬಗಳು ಮತ್ತು 2.5 ಲಕ್ಷ ಎಕರೆ ಕೃಷಿ ಭೂಮಿ ಮತ್ತು ಎರಡು ಟೌನ್‌ಶಿಪ್‌ಗ್ಳ ಮೇಲೆ ಈ ತೀರ್ಪಿನಿಂದ ಅಡ್ಡಪರಿಣಾಮವುಂಟಾಗುತ್ತದೆ.

ನಾಳೆ ಬೆಂಗಳೂರಿನಲ್ಲಿ ಸಭೆ
ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಜು.7ರಂದು ರಾಜ್ಯ ಸರಕಾರ ಬೆಂಗಳೂರಿನಲ್ಲಿ ಸಭೆ ಕರೆದಿದೆ. ಅದರಲ್ಲಿ ಆದೇಶದ ಸಾಧಕ ಬಾಧಕಗಳ ಬಗ್ಗೆ ಪರಾಮರ್ಶೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ರಾಜ್ಯದ 38 ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳಲ್ಲಿ ಈಗಾಗಲೇ ಬಹುತೇಕ ಕಡೆಗಳಲ್ಲಿ ಒಂದು ಕಿ.ಲೋ ಮೀಟರ್‌ ವ್ಯಾಪ್ತಿಯಲ್ಲಿ ಬಫ‌ರ್‌ ಝೋನ್‌ ಕಾಯ್ದುಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯಿಂದ ಸಾರ್ವಜನಿಕರ ಚಟುವಟಿಕೆಗಳ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯೇ ಎನ್ನುವ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದು ಮುಖ್ಯ ವನ್ಯಜೀವಿ ಪರಿಪಾಲಕರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯಕುಮಾರ್‌ ಗೋಗಿ ತಿಳಿಸಿದ್ದಾರೆ.

ಹೋರಾಟಗಾರರು ಹೇಳುವುದೇನು?
ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಕೇರಳದಲ್ಲಿ ಬಹಳಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಇವರ ಪ್ರಮುಖ ಕಾರಣವೇ, 1 ಕಿ.ಮೀ. ಬಫ‌ರ್‌ ಝೋನ್‌ನಿಂದಾಗಿ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವವವರಿಗೆ ಭಾರೀ ಪ್ರಮಾಣದ ತೊಂದರೆಯಾಗುತ್ತದೆ. ಮನೆ ಮಠ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕವಿದೆ. ಆದ್ದರಿಂದ ಕೃಷಿಕರನ್ನು ಮತ್ತು ಈ ಭಾಗದಲ್ಲಿ ಮನೆ ಮಾಡಿಕೊಂಡಿರುವವರಿಗೆ ವಿನಾಯಿತಿ ನೀಡಬೇಕು ಎಂಬ ಆಗ್ರಹ ಕೃಷಿಕರು ಮತ್ತು ನಿವಾಸಿಗಳದ್ದು. ಕೇರಳದ ಸ್ವತಂತ್ರ ರೈತರ ಅಸೋಸಿಯೇಷನ್‌ ಅಧ್ಯಕ್ಷ ಅಲೆಕ್ಸ್‌ ಒಝುಕಾಯಿಲ್‌ ಪ್ರಕಾರ, ಸದ್ಯ ಕೇರಳದಲ್ಲಿ 8 ಲಕ್ಷ ಎಕರೆ ಭಾಗದಷ್ಟು ಅರಣ್ಯವಿದೆ. ಇದರಲ್ಲಿ 4 ಲಕ್ಷ ಎಕರೆಯಷ್ಟು ಜಾಗದಲ್ಲಿ ಮಾನವ ವಸತಿ ಮತ್ತು ಕೃಷಿ ಭೂಮಿಗಳೂ ಇವೆ. ಒಂದು ವೇಳೆ 1 ಕಿ.ಮೀ. ಇಎಸ್‌ಜೆಡ್‌ ಘೋಷಣೆಯಾದರೆ ಲಕ್ಷಾಂತರ ಮಂದಿ ರೈತರ ಗತಿಯೇನು ಎಂದು ಪ್ರಶ್ನಿಸುತ್ತಾರೆ. ವಿಚಿತ್ರವೆಂದರೆ, ಸದ್ಯ ಕೇರಳದಲ್ಲಿ ಆಡಳಿತದಲ್ಲಿರುವ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುುಡಿಎಫ್ ಹೋರಾಟ ನಡೆಸುತ್ತಿವೆ. ಈಗಾಗಲೇ ಕೇರಳ ಸರಕಾರ, ಕೇಂದ್ರ ಪರಿಸರ ಇಲಾಖೆ ಜತೆಗೂ ಮಾತುಕತೆ ನಡೆಸಿದ್ದು, ಜನವಸತಿ ಪ್ರದೇಶಗಳನ್ನು ಇಎಸ್‌ಜೆಡ್‌ನಿಂದ ಹೊರಗಿಡಬೇಕು ಎಂದಿದೆ.

Advertisement

ಕಸ್ತೂರಿ ರಂಗನ್‌ ವರದಿ ವಿವಾದ
ಪಶ್ಚಿಮ ಘಟ್ಟ ಹಾದುಹೋಗಿರುವ ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಇಂಥ ಪ್ರತಿಭಟನೆ ಹೊಸದೇನಲ್ಲ. ಈ ಹಿಂದೆಯೂ ಕಸ್ತೂರಿ ರಂಗನ್‌ ಅವರು ವರದಿ ನೀಡಿದಾಗಲೂ ಇಂಥದ್ದೇ ಹೋರಾಟಗಳು ನಡೆದಿವೆ. ಹೀಗಾಗಿ ಇದುವರೆಗೂ ಕಸ್ತೂರಿರಂಗನ್‌ ವರದಿ ಜಾರಿಯಾಗಿಲ್ಲ. ಈ ವರದಿ ಪ್ರಕಾರ, ಕೇರಳದ 12 ಜಿಲ್ಲೆಗಳು ಸೇರಿ ಬೇರೆ ಬೇರೆ ರಾಜ್ಯ ಗಳಲ್ಲಿನ ಜಿಲ್ಲೆಗಳ 60 ಸಾವಿರ ಕಿ.ಮೀ. ಪಶ್ಚಿಮ ಘಟ್ಟವನ್ನು ಪರಿಸರಾತ್ಮಕವಾಗಿ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ಈ ವರದಿ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲೂ ಪ್ರತಿಭಟನೆ ನಡೆದಿತ್ತು. 2021ರ ಡಿಸೆಂಬರ್‌ನಲ್ಲಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಪಶ್ಚಿಮ ಘಟ್ಟವನ್ನು ಪರಿಸರಾತ್ಮಕವಾಗಿ ಸೂಕ್ಷ¾ ಪ್ರದೇಶ ಎಂದು ಘೋಷಣೆ ಮಾಡುವುದಕ್ಕೆ ವಿರೋಧವಿದೆ ಎಂದಿದ್ದರು.

ಏನಿದು ಸುಪ್ರೀಂ ತೀರ್ಪು?
ಜೂ.3ರಂದು ಸುಪ್ರೀಂಕೋರ್ಟ್‌ನ ಮೂವರು ಸದಸ್ಯರ ಪೀಠವೊಂದು ನ್ಯಾಷನಲ್‌ ಪಾರ್ಕ್‌ಗಳು, ವನ್ಯಜೀವಿ ರಕ್ಷಣಾಧಾಮಗಳು, ಅಭಯಾರಣ್ಯಗಳ ಗಡಿಯಲ್ಲಿ ಒಂದು ಕಿ.ಮೀ.ನಷ್ಟು ಪರಿಸರ ಸೂಕ್ಷ್ಮ ವಲಯವನ್ನು ಘೋಷಣೆ ಮಾಡಬೇಕು ಎಂದು ತೀರ್ಪು ನೀಡಿದೆ. 2011ರ ಫೆ.9ರಂದು ಕೇಂದ್ರ ಸರಕಾರ ಹೊರಡಿಸಿದ್ದ ಮಾರ್ಗಸೂಚಿಯನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್‌)ದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಬೇಕೇ ಅಥವಾ ಬೇಡವೇ ಎಂಬ ನಿಯಮವನ್ನು ಹೊರಡಿಸದೇ ಇರುವುದನ್ನು ಪ್ರಸ್ತಾಪಿಸಿದೆ. ಕೇರಳದ ಮಲಪ್ಪುರಂನ ನಿಲಂಬೂರ್‌ನ ಟಿ.ಎನ್‌.ಗೋಧವರ್ಮನ್‌ ಎಂಬುವರು 1995ರಲ್ಲಿ ಕೇಂದ್ರದ ಮಾರ್ಗಸೂಚಿ ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನು ಸುಪ್ರೀಂಕೋರ್ಟ್‌ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾಡಿದೆ.

ಸೂಕ್ಷ್ಮ ವಲಯ ಎಂದರೇನು?
ಕೇಂದ್ರ ಪರಿಸರ ಇಲಾಖೆಯ ರಾಷ್ಟ್ರೀಯ ವನ್ಯ ಜೀವಿ ಕಾರ್ಯಪಡೆ ಯೋಜನೆ(2006-2016)ಯ ಮಾರ್ಗಸೂಚಿಯಂತೆ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ರಕ್ಷಿತಾರಣ್ಯಗಳ ಗಡಿಯಿಂದ 10 ಕಿ.ಮೀ. ಅನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸ ಬೇಕು. ಆದರೆ, ಈ ಬಗ್ಗೆ 2002ರಲ್ಲೇ ಕೇಂದ್ರ ಸರಕಾರ ರಾಜ್ಯಗಳಿಂದ ವರದಿ ಕೇಳಿದ್ದು, ಕೇರಳ ಸೇರಿದಂತೆ ಬಹುತೇಕ ರಾಜ್ಯಗಳು ಇನ್ನೂ ಮಾಹಿತಿ ನೀಡಿಲ್ಲ. ಅಲ್ಲದೆ, ಕೇರಳವೇ ಈಗಾಗಲೇ ಹಲವಾರು ಬಾರಿ ತನ್ನದೇ ಆದ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಶಿಫಾರಸು ಮಾಡಿದೆ. ಇನ್ನು ಪರಿಸರ ಸೂಕ್ಷ್ಮ ವಲಯ ವನ್ನು ಘೋಷಿಸುವ ಹಿಂದೆ ಅರಣ್ಯ ರಕ್ಷಣೆಯ ಉದ್ದೇಶವೂ ಇದೆ. ಅಂದರೆ, ಅರಣ್ಯದ ಹತ್ತಿರ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಬಾರದು ಎಂಬುದು ಇದರ ಪ್ರಮುಖ ಉದ್ದೇಶ. ಹೀಗಾಗಿಯೇ ಈ 10 ಕಿ.ಮೀ. ಅನ್ನು ಬಫ‌ರ್‌ ಝೋನ್‌ ಎಂದು ಗುರುತಿಸಲಾಗಿದೆ. ಆದರೆ, ಕೇರಳ ಸರಕಾರವೇ ಇದನ್ನು ಒಂದು ಕಿ.ಮೀ.ಗೆ ಇಳಿಕೆ ಮಾಡುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರಲ್ಲಿಯೂ ಕೆಲವೊಂದು ವಿನಾಯಿತಿ ಕೇಳಿದೆ. ಆದರೆ, ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next