Advertisement

ಬೌದ್ಧ ತಂತ್ರಗಳು: ವಜ್ರಯಾನ ಮತ್ತು ಕಾಲ ಚಕ್ರಯಾನ

10:30 AM Dec 17, 2017 | Harsha Rao |

ಬೌದ್ಧ ಧರ್ಮದಲ್ಲಿ ಮುಖ್ಯವಾಗಿ ಮೂರು ಕವಲುಗಳು ಇವೆ. ಅವುಗಳೆಂದರೆ ಹೀನಯಾನ, ಮಹಾಯಾನ ಮತ್ತು ವಜ್ರಯಾನ. ಇದರಲ್ಲಿ ಮೂರನೆಯದು ತಂತ್ರವಿದ್ಯೆಗೆ ಸಂಬಂಧಿಸಿದ್ದು. ಬೌದ್ಧರಲ್ಲಿ ಇದನ್ನು ಮಂತ್ರಯಾನ ಎಂದೂ ಕರೆಯುತ್ತಾರೆ. ಇದು ಬಹಳ ಗಂಭೀರವಾದ ದಾರಿ, ಇದನ್ನು ಯಾರು ಆಳವಾಗಿ, ಪ್ರಾಮಾಣಿಕವಾಗಿ, ನಿಸ್ವಾರ್ಥ ಭಾವದಿಂದ ಕಲಿಯುವುದಿಲ್ಲವೋ ಅವರಿಂದ ಸಮಾಜಕ್ಕೆ ಹಾನಿ ಉಂಟಾಗಬಹುದು. ಇದಕ್ಕೆ ಪ್ರಮುಖ ಕಾರಣ ಈ ತಂತ್ರದ ದಾರಿ ಬೆಂಕಿಯ ದಾರಿ. ಅದು ಸರಿಯಾಗಿ ಬಳಸದಿದ್ದರೆ ಹತ್ತಿರ ಬಂದವರನ್ನು ಸುಟ್ಟುಬಿಡುತ್ತದೆ. ತಂತ್ರದ ದಾರಿ ಬದುಕಿನ ವಿಕಾಸದ ಕ್ರಮ. ಅದು ಪುಸ್ತಕದ ಓದಿನ, ಭಾಷ್ಯ ಟೀಕೆಯ ಹಾದಿಯಲ್ಲ. ಗುರುವಿನಿಂದ ಶಿಷ್ಯನು ಬಾಳಿನ ಮರ್ಮ ಅರಿತು ಮುನ್ನುಗ್ಗುವ ದಾರಿ. ತಂತ್ರವನ್ನು-ಹಿಂದುಧರ್ಮವನ್ನು ಜೀವನ ವಿಧಾನ ಎಂದು ಕರೆಯಬಹುದು, ಆದರೆ ಹಿರಿಯ ತಾಂತ್ರಿಕ ಆಚಾರ್ಯ ಸತ್ಯಕಾಮರು ತಮ್ಮ ತಂತ್ರಯೋನಿ ಗ್ರಂಥದಲ್ಲಿ ತಂತ್ರ ದಾರಿಯಲ್ಲ, ಅದು ಬದುಕು ಎಂದಿ¨ªಾರೆ. ಬುದ್ಧನಿಗೂ ಈ ತಾಂತ್ರಿಕ ಮತ-ಮಾರ್ಗಕ್ಕೂ ನೇರ ಸಂಬಂಧವಿದೆ. ರಾಜಗೃಹದ ಹತ್ತಿರ ಒಂದು ಪರ್ವತ, ಅದರ ಹೆಸರು ಗೃಧ್ರಕೂಟ, ಆ ಪರ್ವತದ ಮೇಲೆ ಭಗವಾನ್‌ ಬುದ್ಧ ಜಿಜ್ಞಾಸುಗಳಿಗೆ ಪಾರಮಿತಾ ಎಂಬ ಅಧ್ಯಾತ್ಮಿಕ ಮಾರ್ಗವನ್ನು ಹೊರಗೆಡವಿದ್ದ. ಮುಂದೆ ಭಗವಾನ್‌ ಅದೇ ಪರ್ವತದ ಮೇಲೆ ದೇಹ ಬಿಟ್ಟಾಗ ಅವರ ದೇಹದಿಂದ ಹತ್ತು ದಿಕ್ಕುಗಳಿಂದ ತೇಜಸ್ಸು ಹೊಮ್ಮಿತ್ತು ಎನ್ನುತ್ತದೆ ಬೌದ್ಧ ಸಂಪ್ರದಾಯ. 

Advertisement

ಗುರು ದೇಹ ಬಿಡುವಾಗ ನಡೆಯುವ ಚಮತ್ಕಾರಗಳಲ್ಲಿ ಇದು ಒಂದು. ದೇಹ ಬಿಡುವುದು ನೇರ ಪ್ರಾಣಪಕ್ಷಿ ಹಾರಿಹೋಗುವುದು ಇರಬಹುದು, ಇಲ್ಲವೇ ಹಳೆಯ ಪೊರೆ ಕಳಚಿ ಶಿಷ್ಯ-ಜಿಜ್ಞಾಸುವೇ ಗುರುವಾಗಿ ಹೊಮ್ಮುವುದೂ ಇರಬಹುದು, ಒಟ್ಟಿನಲ್ಲಿ ಹಳೆಯ ಗೆದ್ದಲು ಕಟ್ಟಿದ ಮನೆ ಬೀಳಿಸಿ ಅಲ್ಲಿ ಬಯಲು ನಿರ್ಮಿಸುವುದೇ ಗುರು ತತ್ವ. ಜೈನ ಮಹಾವೀರರು ಹೀಗೆ ಪರಮ ಅರಿವು ಅಂದರೆ ಕೈವಲ್ಯ ಜ್ಞಾನ ಪಡೆದಾಗ ಅವರಿಂದಲೂ ಬೋಧೆ ಚಿಮ್ಮಿತ್ತು. ಬುದ್ಧನ ಈ ಪ್ರಕರಣದಲ್ಲಿ ಅದು ಗೃಧ್ರಕೂಟವಾದರೆ, ಅಲ್ಲಿ ಆ ಜಾಗಕ್ಕೆ ಸಮವಸರಣ ಮಂಟಪ ಎಂದು ಹೆಸರು. ಗುರು ಮೌನವಾಗಿ ಕುಳಿತಿರುತ್ತಾನೆ. ಅವನ ಘನ ಮೌನದಿಂದ, ಪ್ರಗಾಧ ಮೌನದಿಂದ ಅರಿವಿನ ತರಂಗಗಳು ಹೊಮ್ಮುತ್ತಿರುತ್ತವೆ, ಅದನ್ನು ಅರಿವು ಪಡೆಯಲು ಆಗ ಯೋಗ್ಯತೆ ಹೊಂದಿವರಿಗೆ ಅಲ್ಲÇÉೇ ಅರಿವಾಗುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದ ಒಂದು ಹಳೆಯ ಕತೆಯಿದೆ, ಹಿಂದೆ ಗುರುವನ್ನು ನೋಡಿ ಅರಿವು ಪಡೆಯಲು ಶಿಷ್ಯ ಹೋದ, ಒಂದಲ್ಲ ಮೂರು ಬಾರಿ ಹೋದ, “ನೀನು ದೊಡ್ಡ ಗುರುವಂತೆ, ನನಗೆ ಇಂಥ ಒಂದು ಸಂದೇಹವಿದೆ, ಅದನ್ನು ಪರಿಹರಿಸು’ ಎಂದು ಮೂರು ಸಲ ಬೇರೆ ಬೇರೆ ಸಲ ಕೇಳಿಕೊಂಡ. ಗುರು ಎರಡೂ ಸಲ ಸುಮ್ಮನಿದ್ದ. “ಮೂರನೆಯ ಸಲ ಕೂಡ ನೀನು ಹೇಳಿಕೊಡಲೇ ಇಲ್ಲ’ ಎಂದು ಬಿಟ್ಟ ಶಿಷ್ಯ. ಅದಕ್ಕೆ ಗುರು ನಿಧಾನ ಸ್ವರದಲ್ಲಿ, “ಎಷ್ಟು ಸಲ ಹೇಳುವುದು, ಆಗಲೇ ಮೂರು ಸಲ ಹೇಳಿದೆನಲ್ಲ !’ ಎಂಬ ಅಚ್ಚರಿಪಟ್ಟನಂತೆ.

ಇದು ಗುರುಗುಟ್ಟು, ಅಂದರೆ ಹೇಳಿದರೂ, ತೋರಿಸಿಕೊಟ್ಟರೂ ಅರ್ಥವೇ ಆಗುವುದಿಲ್ಲ, ಕಾಣಿಸುವುದೇ ಇಲ್ಲ. ಬೌದ್ಧ ಸಂಪ್ರದಾಯದ ತಂತ್ರ, ಜೆನ್‌ ಕೂಡ ಇದೇ ದಾರಿಯವು. ಇನ್ನೊಂದು ಬೌದ್ಧ ಕತೆಯಿದೆ; ಅದು ಜೆನ್‌ ಸಂಪ್ರದಾಯದ್ದು. ಒಬ್ಬ ಶಿಷ್ಯ ಗುರುವಿನ ಬಳಿ ಹೋದ, ಗುರು ಚಹಾ ಮಾಡುತ್ತಿದ್ದ, ಶಿಷ್ಯ ಹೋದವನೇ “ತನಗೆ ಇಂಥ ಪುಸ್ತಕ ಓದಿ ಗೊತ್ತು, ಇಂತಿಂಥ ಶಾಸ್ತ್ರ ವಿಷಯಗಳು ಗೊತ್ತು’ ಎಂದು ಹೇಳತೊಡಗಿದ. ಗುರು ಚಹಾ ಮಾಡಿ ಅದನ್ನು ಒಂದು ಲೋಟಕ್ಕೆ ಬಗ್ಗಿಸುತ್ತಿದ್ದ. ಲೋಟ ತುಂಬಿ, ಚಹಾ  ಹೊರಗೆ ಚೆಲ್ಲುತ್ತಿತ್ತು. ಶಿಷ್ಯ ಮಾತನಾಡುತ್ತಿದ್ದವನು ಅದನ್ನು ಕಂಡು, “ಅರೆ, ಚಹಾ ತುಂಬಿ ತುಳುಕುತ್ತಿದೆ’ ಎಂದ. ಅದಕ್ಕೆ ಗುರು ಹೇಳಿದ, “ಮೊದಲು ನಿನ್ನ ತಿಳಿವಳಿಕೆ ಖಾಲಿ ಮಾಡಿಕೊಂಡು ಬಾ’ ಎಂದ.

ಓದಿನ ದಾರಿಗಿಂತ ಭಿನ್ನವಾದ ಪಥ ತಂತ್ರಪಥ. ಮತ್ತೆ ಬುದ್ಧನ ದೇಹದ ವಿಷಯಕ್ಕೆ ಬರೋಣ. ಬುದ್ಧ ಗೃಧ್ರಕೂಟದ ಮೇಲೆ ಅಸು ಬಿಟ್ಟಾಗ ಇಡೀ ಪ್ರದೇಶ ಬೆಳಕಿನಿಂದ ಆವರಿಸಿತ್ತು. ಅವನ ತೆರೆದ ಬಾಯಿಯಿಂದ ಚಿನ್ನದ ಕಮಲಗಳು ಸಾವಿರಾರು ಹೊರಬಂದವಂತೆ. ಇದನ್ನು ನೇರವಾಗಿ ತೆಗೆದುಕೊಳ್ಳಬಾರದು. ಜ್ಞಾನವನ್ನು ಕಮಲಕ್ಕೆ ಹೋಲಿಸುತ್ತಾರೆ. ಅಷ್ಟೊಂದು ಬಗೆಯ, ಪ್ರಮಾಣದ ಜ್ಞಾನ ಹೊರಬಂತು ಎಂಬುದು ಅದರ ಅರ್ಥ. ಬೆಳಕು ಮತ್ತು ಜ್ಞಾನ ಮಾತ್ರವೇ ಬುದ್ಧ ಶರೀರದೊಳಗೆ ಇತ್ತು ಎಂಬುದನ್ನು ಈ ಕತೆ ಬರೆದವರಿಗೆ ಹೇಳಬೇಕಿತ್ತು. ಅವನ ದೇಹದ ಬಳಿ ಸುಳಿದವರಿಗೆ ಅನೇಕ ದುಃಖಗಳು ನಾಶವಾದವು. ಆಗ ಹೊಮ್ಮಿದ ಜ್ಞಾನವನ್ನು ಬೌದ್ಧರು ಬರೆದಿಟ್ಟಿ¨ªಾರೆ. ಅದಕ್ಕೆ ಮಹಾಪ್ರಜ್ಞಾ ಪಾರಮಿತ ಎಂದು ಹೆಸರು.

ಮಹಾಪ್ರಜ್ಞಾ ಪಾರಮಿತ ಎಂಬುದು ನಿಜವಾಗಿಯೂ ಮಹಾತಾಯಿಯಾದ ಮಹಾಮಾಯೆಯ ಹೆಸರು. ಆಕೆ ಬೌದ್ಧರ ದೃಷ್ಟಿಯಲ್ಲಿ ಜಗನ್ಮಾತೆ ಅಂದರೆ ಶಕ್ತಿ. ಶೂನ್ಯತೆ, ಕರುಣೆ, ಬೇರೆಯವರ ಸೇವೆ ಮಾಡುವುದು ಈ ವಿಷಯಗಳು ಈ ಗ್ರಂಥದ ತಿರುಳು. ಈ ಕೃತಿಗೆ ಅನೇಕ ಟೀಕೆ, ಅನುವಾದಗಳಿವೆ. ಮಹಾನ್‌ ದಾರ್ಶನಿಕ ನಾಗಾರ್ಜುನ ಕೂಡ  ಒಂದು ಟೀಕೆ ಬರೆದಿದ್ದ ಎಂದು ಹೇಳುತ್ತಾರೆ. ಚಂದ್ರನಿಗೂ ಅವನ ಬೆಳಕಿಗೂ ಅವಿನಾಭಾವದ ಸಂಬಂಧ, ಶಿವನಿಗೂ ಪಾರ್ವತಿಗೂ ಬಿಟ್ಟಿರಲಾರದ ಸಂಬಂಧ, ಇವೆಲ್ಲ ಸಂಕೇತಗಳು. ಅದೇ ರೀತಿ ಬುದ್ಧನಿಗೂ ಪ್ರಜ್ಞಾಪಾರಮಿತಕ್ಕೂ ಬಿಡಿಸಲಾಗದ ಸಂಬಂಧ, ಅಭೇದವಿದೆ.

Advertisement

ಈ ಕಾರಣದಿಂದ ಬೌದ್ಧರಲ್ಲಿ ತಂತ್ರಗಳು ಉಂಟು ಎಂದು ಹೇಳಲಾಗುತ್ತದೆ. ವಿಶ್ವದಲ್ಲಿ ಇರುವ ಅಪಾರ ಪ್ರಮಾಣದ ದುಃಖವನ್ನು ನಾಶಮಾಡಬೇಕಷ್ಟೆ. ಇದು ಬೋಧಿಸತ್ವರ ಕಾರ್ಯ, ಇಲ್ಲಿ ಒಂದು ಪ್ರಶ್ನೆ ಬರುತ್ತದೆ, ಈ ಬೋಧಿಸತ್ವರಿಗೆ ಲೋಕದ ಶೋಕನಾಶ ಮಾಡಲು ಪ್ರೇರಣೆ ಕೊಡುವವರು ಯಾರು ಅಥವಾ ಅಂಥ ಪ್ರೇರಣೆ ಎಲ್ಲಿಂದ ಬರುತ್ತದೆ? ಇದಕ್ಕೆ ಉತ್ತರ ಪ್ರಜ್ಞಾಪಾರಮಿತ ಜನನಿಯಿಂದ ಬರುತ್ತದೆ. ಈ ಜನನಿಯ ಪ್ರೇರಣೆ ಮತ್ತು ಸಾಮರ್ಥ್ಯದಿಂದ ಬೋಧಿಸತ್ವರು ಪ್ರಪಂಚದ ನೋವಿನ ನಿವಾರಣೆಗೆ ಪ್ರೇರಣೆ ಹೊಂದುತ್ತಾರೆ, ತಂತ್ರ ಅದೆಷ್ಟು ಅಹಿಂಸಾತ್ಮಕ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ತಂತ್ರದ ಕುರಿತು ಬೌದ್ಧ ಸಂಪ್ರದಾಯಕ್ಕೆ ಹಲವು ನೆನಪುಗಳು ಉಂಟು. ಮಹಾಯಾನ ಮತ್ತು ಬೌದ್ಧತಂತ್ರ ಅಥವಾ ಮಂತ್ರಯಾನ ಅನೇಕ ಸಮಾನ ಸಂಗತಿಗಳನ್ನು ಹಂಚಿಕೊಂಡಿವೆ. ಅಧ್ಯಾತ್ಮ ಸಾಧನೆಗೆ ಎರಡರಲ್ಲೂ ಪಾಲಿದೆ. ಮಾಧ್ಯಮಿಕಾ ದರ್ಶನ ಮತ್ತು ಇನ್ನೊಂದು ಬೌದ್ಧ ದರ್ಶನವೇ ಆದ ಯೋಗಾಚಾರ ದರ್ಶನಗಳಿಗೆ ಪಾರಮಿತಾ ಮಾರ್ಗದೊಡನೆ ಸಮ್ಮತಿ ಇದೆ. ಅಂದರೆ ಅವು ಮಂತ್ರ-ತಂತ್ರ ಒಪ್ಪಿವೆ. ದಕ್ಷಿಣಭಾರತದ ಆಂಧ್ರಪ್ರದೇಶದಲ್ಲಿ ಅಮರಾವತಿಯ ಬಳಿ ಶ್ರೀಧ್ಯಾನ ಕಟಕ ಎಂಬ ಪ್ರದೇಶವಿದೆ, ಇದು ಬೌದ್ಧ ತಂತ್ರಗಳ ಕೇಂದ್ರ. ಅಲ್ಲಮ, ಅಕ್ಕಮಹಾದೇವಿಯರ ಜೀವನದಲ್ಲಿ ಪಾತ್ರಪಡೆದಿರುವ ಶ್ರೀಶೈಲವೂ ಒಂದು ತಾಂತ್ರಿಕಪೀಠ. ಇದು ಶೈವ ಮತ್ತು ಬೌದ್ಧ ಸಂಪ್ರದಾಯಗಳ ತಾಂತ್ರಿಕ ಸಾಧಕರು ಸಾಧನೆ ಮಾಡಿದ ಸ್ಥಳ. ಶಿವನ ಹನ್ನೆರಡು ಜ್ಯೋತಿರ್ಲಿಂಗಳ ಪೈಕಿ ಒಂದು ಶಿವಲಿಂಗ ಇಲ್ಲಿದೆ.

ಮತ್ತೆ ಮೂರು ಯಾನಗಳು
ಒಟ್ಟಿನಲ್ಲಿ ಬೌದ್ಧರ ತಂತ್ರ ಮಾರ್ಗವು ಮಂತ್ರಯಾನ. ಅದು ಯೋಗಾಚಾರ ಮತ್ತು ಮಾಧ್ಯಮಿಕ ದರ್ಶನ ಎರಡನ್ನೂ ಪ್ರಭಾವಿಸಿದೆ. ಅದರಲ್ಲಿ ಕೆಲವು ಒಳಭೇದಗಳಿವೆ. ಅವುಗಳೆಂದರೆ- ವಜ್ರಯಾನ, ಕಾಲಚಕ್ರಯಾನ ಮತ್ತು ಸಹಜಯಾನ. ಮಂತ್ರ ಎಂಬುದು ಕಣ್ಣಿಗೆ ಕಾಣಿಸುವುದಿಲ್ಲ, ಆದರೆ ಅದೇ ಒಂದು ದೊಡ್ಡ ಲೋಕ. ನೀವು ಒಂದು ಮೂಲೆಯಲ್ಲಿ ತಣ್ಣಗೆ ಕುಳಿತು ಯಾವುದಾದರೂ ಒಂದು ದೇವರ ಹೆಸರನ್ನೋ ಅಥವಾ ಓಂಕಾರವನ್ನೋ 1008 ಸಲ ಹೇಳಿ ನೋಡಿ, ಆಗ ನಿಮ್ಮ ದೇಹದಲ್ಲಿ ಆಗುವ ಕಂಪನಗಳನ್ನು ಗಮನಿಸಿ. ಯಾರೂ ಹೀಗೆ ಮಾಡು ಎಂದು ನಿರ್ದಿಷ್ಟ ಉಪದೇಶ ಮಾಡದೆ ನೀವು ಸುಮ್ಮನೆ ಪ್ರಯೋಗ ಮಾಡಿದರೆ ಎಷ್ಟೊಂದು ಶಕ್ತಿ ನಿಮ್ಮಲ್ಲಿದೆ, ಈ ನಿಸರ್ಗದಲ್ಲಿದೆ ಎಂಬುದು ಗೊತ್ತಾಗುತ್ತದೆ. ಮನುಷ್ಯರ ಮಾಮೂಲಿ ಮಾತು ಮತ್ತು ಕಾವ್ಯಗಳ ಮಾತಿಗೆ ಒಂದು ಅರ್ಥವಿದೆ. ಆದರೆ, ಸಂಗೀತದ ನಾದಕ್ಕೆ, ಮಂತ್ರಗಳಲ್ಲಿ ಬಳಸುವ ಶಬ್ದಕ್ಕೆ ಅಂಥ ಯಾವ ಅರ್ಥಗಳೂ ಇರುವುದಿಲ್ಲ. ಆದರೆ ಅರ್ಥವಂತಿಕೆ ಇರುತ್ತದೆ. ಮೀನಿಂಗ್‌ ಇಲ್ಲ, ಮೀನಿಂಗ್‌ಫ‌ುಲ್‌ ಅನಿಸುತ್ತದೆ! ಇದಕ್ಕೆ ಕಾರಣ ಏನನ್ನೋ ತರ್ಕದ, ಸಂಧಿಸಮಾಸದ ಭಾಷೆಯಲ್ಲಿ ವಿವರಿಸಲು ತಂತ್ರ-ಮಂತ್ರವಿದ್ಯೆ ಹೆಣಗುವುದೇ ಇಲ್ಲ, ಅದು ಅರ್ಥಲೋಕ ಮೀರಿದ ಒಂದು ಆದ್ರìಲೋಕಕ್ಕೆ ಮನುಷ್ಯರನ್ನು ಕರೆದುಕೊಂಡು ಹೋಗುತ್ತದೆ. ಸಂಗೀತ ಅದರಲ್ಲೂ ಘನವಾದ ಸಂಗೀತ ಕೇಳುವಾಗ ತಾಯಿ ರಚ್ಚೆ ಹಿಡಿದ ಮಗುವನ್ನು ಸಂತೈಸುವಂತೆ ಇರುತ್ತದೆ. ತರ್ಕಭಾಷೆಯಲ್ಲಿ ಬಂಧಿತ ಮನುಷ್ಯನ ಸಂದಿಗ್ಧಗಳು ಕಳಚಲು ಅಸಂಧಿಗ್ಧವಾದ ಮಂತ್ರವೇ ಬೇಕು ಅಥವಾ ನಾದವೇ ಬೇಕು. ಹೀಗಾಗಿ ನಾದಲೋಕ ಮತ್ತು  ತಂತ್ರಲೋಕ ಎರಡಕ್ಕೂ ಮೂಲ ಅಡಿಪಾಯ ಒಂದೇ, ಅದು ಶಬ್ದಮುಗ್ಧ ಸ್ಥಿತಿ, ನಮ್ಮ ನರನಾಡಿಗಳಲ್ಲಿ ಇರುವ ಯಾವುದೋ ಸುರಸಂಗೀತದೊಡನೆ ಮಾಡುವ ಯಾನ. ವಜ್ರಯಾನವನ್ನು ಮಂತ್ರಯಾನ ಎಂದು ಹಿರಿಯಬೌದ್ಧರು ಕರೆದಿ¨ªಾರೆ. ಏಕೆಂದರೆ, ಗುರು ಉಪದೇಶಿಸುವ ಮಂತ್ರಕ್ಕೆ ಇಲ್ಲಿ ಪ್ರಾಶಸ್ತ್ಯ. ಕಾಲಚಕ್ರಯಾನದಲ್ಲೂ ಕೂಡ ಇದೇ ಆಗುವುದು. ಈ ಕಾಲ ಚಕ್ರಯಾನವನ್ನು ಗೌತಮಬುದ್ಧನಿಗೂ ಹಳಬನಾದ ದೀಪಂಕರನೆಂಬ ಬುದ್ಧ ಪ್ರವರ್ತನೆ ಮಾಡಿದ ಎನ್ನುತ್ತದೆ ಬೌದ್ಧರ ಸಂಪ್ರದಾಯ. ಮುಂದೆ ಅದು ಕೆಲವು ಕಾಲ ಜನರ ನೆನಪಿನಿಂದ ಮಾಸಿ ಹೋಗಿದ್ದೂ ನಿಜವೇ. ಏನೇ ಆದರೂ ಈ ಚಾರಿತ್ರಿಕ ಸಂಗತಿಗಳ ಆಚೆಗೂ ಈಗಲೂ ಪುಸ್ತಕ ಜ್ಞಾನ ಮೀರಿದ ಒಂದು ಬೌದ್ಧ ಸಾಧನಾ ಲೋಕವಿದೆ, ಅಲ್ಲಿ ತಂತ್ರಯಾನಕ್ಕೂ ಮಣೆ ಹಾಕಲಾಗಿದೆ ಎಂಬ ಸಂಗತಿ ನೆನಪಿಟ್ಟರೆ ಸಾಕು.

– ಜಿ. ಬಿ. ಹರೀಶ

Advertisement

Udayavani is now on Telegram. Click here to join our channel and stay updated with the latest news.

Next