Advertisement

ಪಂಚಮಸಾಲಿ ಮೀಸಲಿಗೆ ಬಿ.ಎಸ್‌.ಯಡಿಯೂರಪ್ಪ ಅಡ್ಡಿ

05:47 PM Sep 21, 2022 | Team Udayavani |

ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನಸ್ಸಿದೆ. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಡ್ಡಗಾಲು ಹಾಕುತ್ತಿದ್ದಾರೆ. ನಮ್ಮ ಸಮಾಜದ ಮೇಲೆ ಯಡಿಯೂರಪ್ಪ ಅವರಿಗೆ ಯಾಕೆ ಸಿಟ್ಟು ಎಂಬುದು ಗೊತ್ತಾಗುತ್ತಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪನವರು ಏಕಾಏಕಿ ಇದೀಗ ಸಮಾಜದ ವಿರುದ್ಧ ತಿರುಗಿಬಿದ್ದಿರುವುದು ಅರ್ಥವಾಗುತ್ತಿಲ್ಲ. ಅವರು ಈ ಮನಸ್ಥಿತಿಯಿಂದ ಹೊರಬರುವುದು ಸೂಕ್ತ. ಒಂದು ವೇಳೆ ಇದು ಮುಂದುವರಿದರೆ ರಾಜ್ಯದ ಯಾವ ಮೂಲೆಗೆ
ಹೋದರೂ ಸಮಾಜದಿಂದ ಕಪ್ಪುಪಟ್ಟಿ ಪ್ರದರ್ಶಿಸುವ ಮೂಲಕ ಹಕ್ಕೊತ್ತಾಯ ಮಾಡಲಾಗುವುದು. ನಮ್ಮ ಸಮಾಜದೊಂದಿಗೆ ಕುರುಬರಿಗೆ ಎಸ್‌ಟಿ ಹಾಗೂ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಗೃಹ ಸಚಿವರಾಗಿದ್ದ ಸಂದರ್ಭ ಬಸವರಾಜ ಬೊಮ್ಮಾಯಿ ಅವರು ಸಮಾಜದ ಹೋರಾಟಕ್ಕೆ ಸಾಕಷ್ಟು ಬೆಂಬಲ ಹಾಗೂ ಕಾಳಜಿ ತೋರಿದ್ದರು. ಆದರೆ ಮುಖ್ಯಮಂತ್ರಿಯಾದ ನಂತರ ಆ ಕಾಳಜಿ ಮರೆತಿದ್ದಾರೆ. ಇಲ್ಲಿಯವರೆಗೆ ನಾಲ್ಕು ಬಾರಿ ನೀಡಿದ ಮಾತನ್ನು ಮುರಿದಿದ್ದಾರೆ. ಇದರ ಹಿಂದೆ ಯಡಿಯೂರಪ್ಪ ಅವರ ವಿರೋಧ ಇರುವುದಾಗಿ ಸಮಾಜದ ಮುಖಂಡರಾದ ಬಸವನಗೌಡ ಪಾಟೀಲ ಯತ್ನಾಳ ತಿಳಿಸಿದ ನಂತರ ಗೊತ್ತಾಗಿದೆ. ಏನೇ ವಿರೋಧಗಳಿದ್ದರೂ ಮುಖ್ಯಮಂತ್ರಿಗಳು ಸಮಾಜದ ಬೇಡಿಕೆ ಈಡೇರಿಸಬೇಕು. ಸಮಾಜದ ಋಣ ನಿಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದರು.

ಸರಕಾರಕ್ಕೆ ಅಂತಿಮ ಗಡುವು: ಪ್ರಸಕ್ತ ಅಧಿವೇಶನದೊಳಗೆ ಮೀಸಲಾತಿ ಘೋಷಿಸಬೇಕು. ಒಂದು ವೇಳೆ ಸಮಾಜದ ವಿರುದ್ಧ ಸರಕಾರ ನಡೆದುಕೊಂಡರೆ ಮುಂದಿನ ಎರಡು ತಿಂಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಾದ್ಯಂತ ರಥಯಾತ್ರೆ ಮೂಲಕ ಸಮಾಜ ಒಗ್ಗೂಡಿಸುವ ಕೆಲಸ ಮಾಡುತ್ತೇನೆ. ಸಮಾಜದ 25 ಲಕ್ಷ ಜನರೊಂದಿಗೆ ಮುತ್ತಿಗೆ ಹಾಕಲಾಗುವುದು. ಮೀಸಲಾತಿ ನೀಡುವುದಾಗಿ ಸಮಾಜದ ಸಚಿವರು ಹಾಗೂ ಶಾಸಕರ ಕೈಹಿಡಿದು ಪ್ರಮಾಣ ಮಾಡಿರುವುದನ್ನು ಮುಖ್ಯಮಂತ್ರಿಗಳು ಮರೆಯಬಾರದು ಎಂದರು.

ಸಿಎಂಗೆ ಹಕ್ಕೊತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೇಲಿರುವ ಸಮಾಜದ ಋಣ ನೆನಪಿಸಿಕೊಳ್ಳಬೇಕು. ತಮ್ಮ ಹಾಗೂ ತಮ್ಮ ತಂದೆಯವರ ರಾಜಕೀಯ ಜೀವನಕ್ಕೆ ಸಮಾಜದ ಕೊಡುಗೆ ಮರೆಯದೆ ಮೀಸಲಾತಿ ಘೋಷಣೆ ಮಾಡಬೇಕು. ಸಮಾಜದ ಮೇಲೆ ನಿಮಗೆ ಕಾಳಜಿಯಿದ್ದರೆ ಕೂಡಲೇ ದಿನಾಂಕ ನಿಗದಿ ಮಾಡಬೇಕು. ಒಂದು ವೇಳೆ ನಿಮಗೆ ಘೋಷಣೆ ಮಾಡಲು ಆಗದಿದ್ದರೆ ಬಹಿರಂಗವಾಗಿ ಸಾಧ್ಯವಿಲ್ಲ ಎಂದು ಘೋಷಿಸಲಿ. ಸಮಾಜದ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. ಮೀಸಲಾತಿ ನೀಡಿದರೆ ಯಾರಿಗೂ ನೀಡದ ಸನ್ಮಾನ ಗೌರವ ನಿಮಗೆ ನೀಡುತ್ತೇವೆ. ನಿಮ್ಮ ಋಣವನ್ನು ಸಮಾಜ ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಪೀಠದಲ್ಲಿ ನಿಮ್ಮ ಭಾವಚಿತ್ರವನ್ನು ನಿರಂತರವಾಗಿ ಹಾಕಲಾಗುವುದು ಎಂದು ಹಕ್ಕೊತ್ತಾಯ ಮಾಡಿದರು.

Advertisement

ಶೇ.2 ಲಿಂಗಾಯತರಿಂದ ಅನ್ಯಾಯ: ಎಲ್ಲರೂ ಲಿಂಗಾಯತರು ಎಂದು ನಂಬಿಸಿ ಪಂಚಮಸಾಲಿ ಸಮಾಜದಿಂದ ಎಲ್ಲ ಲಾಭ ಪಡೆದುಕೊಂಡರು. ಆದರೆ ಶೇ.2 ರಷ್ಟಿರುವ ಲಿಂಗಾಯತರು ಇಲ್ಲಿಯವರೆಗೂ ಪಂಚಮಸಾಲಿಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡರು. ಆದರೆ ಸಮಾಜಕ್ಕೆ ಬೇಕಾದ ಯಾವುದೇ ಸವಲತ್ತುಗಳನ್ನು ನೀಡಲಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲೂ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡರು.

ಶಿಕಾರಿಪುರದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರೂ ಸಮಾಜಕ್ಕೆ ಒಂದು ನಿವೇಶನ ಇಲ್ಲ. ಈ ಹೋರಾಟ ಸಮಾಜದ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಎಂಬುದನ್ನು ಮರೆಯಬಾರದು. ಸಮಾಜದ ತಾಳ್ಮೆಯನ್ನು ಇಷ್ಟೊಂದು ಪರೀಕ್ಷೆ ಮಾಡುವುದು ಯಾರಿಗೂ ಒಳ್ಳೆಯದಲ್ಲ ಎಂದು ಎಚ್ಚರಿಸಿದರು. ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎ.ಬಿ. ಪಾಟೀಲ, ಪಿ.ಸಿ. ಸಿದ್ದನಗೌಡರ, ಮುಖಂಡರಾದ ವಿಜಯಾನಂದ ಕಾಶಪ್ಪನವರ, ಸೋಮಣ್ಣ ಬೇವಿನಮರದ, ಎಚ್‌.ಎಸ್‌. ಶಿವಶಂಕರ, ಅಮ್ಮನಪುರ ಮಲ್ಲೇಶ, ಪ್ರೇಮಾ ಪಾಟೀಲ, ಬಸವರಾಜ ಹಾಲಪ್ಪ, ರಾಘವೇಂದ್ರ ಕಟಕೋಳ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next