Advertisement

ಚುನಾವಣೆ ಬಳಿಕ ಬಿಎಸ್‌ವೈ ಸಿಎಂ

12:49 AM Apr 15, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಫ‌ಲಿತಾಂಶದ ನಂತರ ರಾಜ್ಯ ಮೈತ್ರಿ ಸರ್ಕಾರ ಪತನಗೊಳ್ಳಲಿದ್ದು, ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಭಾನುವಾರ ಹಮ್ಮಿಕೊಂಡಿದ್ದ ಮಾತು-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಸ್ಪರ ಅಪನಂಬಿಕೆ ಮತ್ತು ಸತತ ವೈಫ‌ಲ್ಯಗಳಲ್ಲೇ ಸಮ್ಮಿಶ್ರ ಸರ್ಕಾರ ಸಾಗಿದೆೆ. ಕಾಂಗ್ರೆಸ್‌-ಜೆಡಿಎಸ್‌ ಒಳಜಗಳದಿಂದಲೇ ಮೈತ್ರಿ ಸರ್ಕಾರ ಪತನವಾಗಲಿದೆ.

ಲೋಕಸಭಾ ಚುನಾವಣೆ ಫ‌ಲಿತಾಂಶದ ನಂತರ ವಿಧಾನಸಭೆ ಚುನಾವಣೆ ಮತ್ತೆ ನಡೆಯಬಹುದು ಅಥವಾ ಕಾಂಗ್ರೆಸ್‌ ಶಾಸಕರೇ ರಾಜೀನಾಮೆ ನೀಡಿ ಬಿಜೆಪಿ ಸೇರಬಹುದು. ಒಟ್ಟಾರೆ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಪ್ರಮುಖ ಹುದ್ದೆ ಅಥವಾ ಚುನಾವಣೆಯಲ್ಲಿ ಟಿಕೆಟ್‌ ನೀಡಬಾರದು ಎಂಬ ನಿಯಮವೇನೂ ಇಲ್ಲ. ಸಿದ್ಧಾಂತದ ಆಧಾರದಲ್ಲಿ ಅಂತಹ ಚರ್ಚೆ ನಡೆದಿದ್ದು, ಮೇಲ್ಮಟ್ಟದ ನಾಯಕರಿಂದಲೇ ಅನುಷ್ಠಾನವಾಗಬೇಕು ಎಂಬ ಉದ್ದೇಶದಿಂದ ಹಿರಿಯರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ್‌ ಜೋಷಿ ಮೊದಲಾದವರಿಗೆ ಟಿಕೆಟ್‌ ನೀಡದೇ ಇರಬಹುದು. ಆದರೆ, ಕರ್ನಾಟಕದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರೇ ನಮ್ಮ ನಾಯಕರು’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾಗಬಹುದು. ಅದುವರೆಗೂ ಯಡಿಯೂರಪ್ಪನವರೇ ಅಧ್ಯಕ್ಷರಾಗಿರುತ್ತಾರೆ. ಕೇಂದ್ರ ಸರ್ಕಾರದ ಹಾಗೂ ಸಂಸದರ ಸಾಧನೆ ಪುಸ್ತಕವನ್ನು ಮನೆ ಮನೆಗೆ ಹಂಚಿದ್ದೇವೆ. ಕಳೆದ ಐದು ವರ್ಷದಲ್ಲಿ ಕೇಂದ್ರದಿಂದ ದುಪ್ಪಟ್ಟು ಹಣ ರಾಜ್ಯಕ್ಕೆ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ದೇಶದಲ್ಲಿ ಮೋದಿ ಅಲೆಯಿದೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಆಡಳಿತ ವಿರೋಧಿ ಅಲೆಯಿದೆ. ಪಕ್ಷದ ಸಂಘಟನೆಯಿಂದ ಬಿಜೆಪಿ 22ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಸೀಟು ಹಂಚಿಕೆಯಿಂದ ಪ್ರಚಾರದವರೆಗೂ ದೋಸ್ತಿಗಳಲ್ಲಿ ಗೊಂದಲ ಇದೆ.

ಅವರಲ್ಲಿ ಯಾವುದೂ ಹೊಂದಾಣಿಕೆಯಿಂದ ನಡೆಯುತ್ತಿಲ್ಲ. ಜೆಡಿಎಸ್‌ ಅಭ್ಯರ್ಥಿ ಇರುವ ಕಡೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. ನಾಯಕರು ಮೈತ್ರಿಯಾಗಿದ್ದು, ಕಾರ್ಯಕರ್ತರು ಬೇರೆ ಬೇರೆಯಾಗಿದ್ದಾರೆ. ಇವರಿಬ್ಬರ ನಡುವಿನ ಗೊಂದಲದಿಂದ ನಮಗೆ ಅನುಕೂಲಗಲಿದೆ ಎಂದರು.

ಅಟಲ್‌ ಬಿಹಾರಿ ವಾಜಪೇಯಿ ಅವರ ಆಡಳಿತದ ಸಾಧನೆಗಳನ್ನು ಈ ಹಿಂದೆ ನಾವು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿಲ್ಲ. ಈ ಬಾರಿ ಆ ತಪ್ಪನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಮೈತ್ರಿ ಸರ್ಕಾರದ ಆಡಳಿತ ವೈಫ‌ಲ್ಯ, ದೋಸ್ತಿಗಳ ನಡುವಿನ ಗೊಂದಲವನ್ನು ಜನರಿಗೆ ತಿಳಿಸಲಾಗುವುದು. ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದು ಚುನಾವಣಾ ಕಾರ್ಯತಂತ್ರವನ್ನು ವಿವರಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸೀಟು ಹಂಚಿಕೆ ಮತ್ತು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿರುವುದನ್ನು ಒಂದೇ ದೃಷ್ಟಿಯಲ್ಲಿ ವಿಶ್ಲೇಷಿಸುವುದು ಸರಿಯಲ್ಲ. ಮಂಡ್ಯದ ಪರಿಸ್ಥಿತಿಗೆ ತಕ್ಕಂತೆ ಕೇಂದ್ರ ನಾಯಕರಿಗೆ ವರದಿ ನೀಡಿದ್ದೆವು. ಅವರ ಸೂಚನೆಯಂತೆ ಬೆಂಬಲ ನೀಡಲಾಗಿದೆ.
-ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next