ಘಾಜಿಪುರ: ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ರನ್ನು 2005ರಲ್ಲಿ ಅಪಹರಿಸಿ ಹತ್ಯೆ ಗೈದ ಕೇಸ್ ಗೆ ಸಂಬಂಧಿಸಿ ಉತ್ತರಪ್ರದೇಶದ ಘಾಜಿಪುರ ಕ್ಷೇತ್ರದ ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವನ್ನೂ ವಿಧಿಸಿ ಸಂಸದ-ಶಾಸಕ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿ ಸಹೋದರ ದರೋಡೆಕೋರ- ರಾಜಕಾರಣಿ ಮುಖ್ತಾರ್ ಅನ್ಸಾರಿ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದು,10 ವರ್ಷ ಜೈಲು ಶಿಕ್ಷೆ ವಿಧಿಸಿ 5 ಲಕ್ಷ ರೂ ದಂಡವನ್ನೂ ಹಾಕಿದೆ. ತೀರ್ಪಿನ ಹಿನ್ನೆಲೆಯಲ್ಲಿ ಘಾಜಿಪುರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿ, ಮುಖ್ತಾರ್ ಅನ್ಸಾರಿ ಮತ್ತು ಸೋದರ ಮಾವ ಎಜಾಜುಲ್ ಹಕ್ ವಿರುದ್ಧ 2007 ರಲ್ಲಿ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಎಜಾಜುಲ್ ಹಕ್ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 1 ರಂದು ಪೂರ್ಣಗೊಳಿಸಲಾಗಿತ್ತು. ಈ ಮೊದಲು ಈ ಪ್ರಕರಣದ ತೀರ್ಪು ಎ 15 ರಂದು ಬರಬೇಕಿತ್ತು, ಆದರೆ ನಂತರ ದಿನಾಂಕವನ್ನು 29 ಕ್ಕೆ ವಿಸ್ತರಿಸಲಾಗಿತ್ತು.
ನ್ಯಾಯಾಲಯದ ತೀರ್ಪಿನಿಂದಾಗಿ ಸಂಸದನಾಗಿರುವ ಅಫ್ಜಲ್ ಅನ್ಸಾರಿ ಲೋಕಸಭೆಯ ಸದಸ್ಯತ್ವ ಕಳೆದುಕೊಳ್ಳುವುದು ಖಚಿತವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡ್, ಯುಪಿಯ ರಾಮಪುರ ಶಾಸಕ ಅಜಮ್ಖಾನ್ , ಆತನ ಪುತ್ರ ಅಬ್ದುಲ್ಲಾ ಆಜಂ, ಬಿಜೆಪಿಯ ವಿಕ್ರಮ್ ಸೈನಿ ಖಟೌಲಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸಂಸತ್ ಮತ್ತು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.