ಹಾವೇರಿ: ಬಿಜೆಪಿ ದುಷ್ಟ ನೀತಿಯಿಂದ ಹಾಲು ಉತ್ಪಾದನೆ ಕಡಿಮೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ, ಎಲ್ಲದಕ್ಕೂ ರಾಜಕಾರಣ ತಂದು ರೈತರಿಗೆ ಅಪಮಾನ ಮಾಡುತ್ತಾರೆ. ನೀವು ನೋಡುವ ದೃಷ್ಟಿ ದುಷ್ಟವಾಗಿದೆ, ನಮ್ಮ ನೀತಿಯಲ್ಲ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಪರೋಪಕ್ಷಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ ಯುಹಚ್ ಟಿ ಹಾಲು ಸಂಸ್ಕರಣ ಘಟಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ಒಕ್ಕೂಟಗಳು ತುಂಬಾ ಕ್ಷೀಣ ಪರಿಸ್ಥಿತಿ ಇತ್ತು.ದಕ್ಷಿಣ ಕರ್ನಾಟಕ ಒಕ್ಕೂಟಗಳು ಗ್ರ್ಯಾಂಟ್ ನಲ್ಲಿ ಸ್ಥಾಪನೆ ಆಯಿತು.ಅಲ್ಲಿ ಗ್ರ್ಯಾಂಟ್ ನಲ್ಲಿ ಈ ಭಾಗದಲ್ಲಿ ಸಾಲದಲ್ಲಿ ಸ್ಥಾಪನೆಯಾಯಿತು. 2010-11 ರಲ್ಲಿ ಈ ಭಾಗದ ಒಕ್ಕೂಟದ ಅಧ್ಯಕ್ಷರು ನನ್ನ ಭೇಟಿಯಾಗಿದ್ದರು. ಆಗ ಉತ್ತರ ಕರ್ನಾಟಕದ ಒಕ್ಕೂಟಗಳ ಸಾಲಮನ್ನಾ ಮಾಡಿದೆ. ಈಗ ಒಕ್ಕೂಟಗಳು ಚೇತರಿಕೆ ಆಗಿವೆ. ನಮ್ಮ ನೀತಿ ಬಗ್ಗೆ ಹೇಳುತ್ತಾರೆ, ಅವರ ನೀತಿ ಏನಾಗಿತ್ತು.ಎಲ್ಲಾ ಒಕ್ಕೂಟಗಳು ದೀವಾಳಿ ಆಗಿತ್ತು. ಆರು ತಿಂಗಳಾದರು ರೈತರಿಗೆ ಪೇಮೆಂಟ್ ಆಗ್ತಿರಲಿಲ್ಲ. ಇವತ್ತು 15 ದಿನಗಳಲ್ಲಿ ಪೇಮೆಂಟ್ ಆಗುತ್ತಿದೆ ಎಂದು ಹೇಳಿದರು.
ಡಾ ಕುರಿಯನ್ ಅವರಿಗೆ ನನ್ನ ಮೊದಲ ನಮನಗಳನ್ನು ಸಲ್ಲಿಸುತ್ತೇನೆ. ಹಾಲು ಉತ್ಪಾದಕ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಗುಜರಾತಿನಲ್ಲಿ ಅಮೂಲ್ ಹಾಲು ಉತ್ಪಾದಕರ ಕಾಮಧೇನು ಆಗಿದ್ದರೆ, ಕರ್ನಾಟಕದಲ್ಲಿ ನಂದಿನಿ ಹಾಲು ಉತ್ಪಾದಕರಿಗೆ ಕಾಮಧೇನುವಾಗಿದೆ ಎಂದರು.
2013 ರಿಂದ ಹಾವೇರಿ ಹಾಲು ಒಕ್ಕೂಟಕ್ಕಾಗಿ ಹೋರಾಟ ಮಾಡಿದ್ದೇವೆ. ಯುಎಚ್ ಟಿ ಪ್ಲ್ಯಾಂಟ್ ಇವತ್ತು ಲೋಕಾರ್ಪಣೆಗೊಂಡಿದೆ. ಆರು ತಿಂಗಳು ಹಾಲು ಕೆಡದಂತೆ ಸಂರಕ್ಷಣೆ ಮಾಡುವ ಯುನಿಟ್ ಇದು. ರಾಜ್ಯದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಯುನಿಟ್ ಇದು. ಹಾವೇರಿಯಲ್ಲಿ ಕ್ಷೀರಕ್ರಾಂತಿ ಮಾಡಬೇಕು ಎಂದು ಆದೇಶ ನೀಡುತ್ತೇನೆ.ಧಾರವಾಡ ಹಾಲು ಒಕ್ಕೂಟಕ್ಕು ಅನುದಾನ ನೀಡುತ್ತೇನೆ. ಹಾಲು ಉತ್ಪಾದನೆ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿದೆ. ಚರ್ಮಗಂಟು ರೋಗದಿಂದಾಗಿ ಹಾಲು ಉತ್ಪಾದನೆ ಯಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಿದರು.
Related Articles
ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಮಾಡಲು ತೀರ್ಮಾನ ಮಾಡಿದ್ದೇವೆ. ನನ್ನ ಹುಟ್ಟುಹಬ್ಬದಲ್ಲಿ 11 ಗೋವುಗಳನ್ನ ತಂದು ನಿಲ್ಲಿಸಿದ್ದರು. ಆಗ ರಾಜ್ಯಕ್ಕೆ ಗೋವುಗಳನ್ನ ದತ್ತು ತೆಗೆದುಕೊಳ್ಳುವ ವ್ಯವಸ್ಥೆ ಮಾಡಿದೆ. ಇನ್ನೊಂದು ವಾರದಲ್ಲಿ ಗೋಶಾಲೆಗಳಿಗೆ 30 ಕೋಟಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಸಹಕಾರಿ ಸಚಿವ ಎಸ್. ಟಿ.ಸೋಮಶೇಖರ್ ಮಾತನಾಡಿ, ಶಾಸಕರಾಗಿ,ಮಂತ್ರಿಯಾಗಿ ನಂತರ ಸಿಎಂ ಆದ ಮೇಲೆ ನುಡಿದಂತೆ ನಡೆಯುವ ರಾಜಕಾರಣಿ ಬಸವರಾಜ ಬೊಮ್ಮಾಯಿ. ಏಳೆಂಟು ತಿಂಗಳ ಹಿಂದೆ ನಮ್ಮನ್ನು ಕರೆದು ಹಾವೇರಿ ಜಿಲ್ಲೆಗೆ ಮಿಲ್ಕ್ ಯುನಿಯನ್ ಮಾಡಬೇಕು ಸೂಚನೆ ನೀಡಿದರು. ಎಲ್ಲಾ ಅಧಿಕಾರಿಗಳನ್ನು ಕರೆಸಿ ಮಾಡಿದರು. ಸಂಸ್ಕರಣಾ ಘಟಕದ ನಿರ್ಮಾಣಕ್ಕೂ ಇಂದು ಚಾಲನೆ ನೀಡಿದ್ದಾರೆ. ನಂದಿನಿ ಕ್ಷೀರ ಸಮೃದ್ದಿ ಬ್ಯಾಂಕ್ ಗೂ ಚಾಲನೆ ನೀಡಿದರು. 30 ಲಕ್ಷ ರೈತರಿಗೆ ಝೀರೋ ಪರ್ಸೆಂಟ್ ದರದಲ್ಲಿ ಸಾಲ ಕೊಡಲಾಗುತ್ತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಕೆಎಂಎಫ್ ಎಂಡಿ ಸತೀಶ ಇತರರು ಇದ್ದರು.