Advertisement

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ…

02:08 PM Jun 09, 2024 | Team Udayavani |

ಸರಿ ಸುಮಾರು ಹತ್ತು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಒಂದು ಗ್ರಾಮದ ಮದುವೆ ವಯಸ್ಸಿಗೆ ಬಂದ ಯುವಕ ಹತ್ತಾರು ಕಡೆಗಳಲ್ಲಿ ಸ್ವಜಾತಿಯ ಕನ್ಯೆಯರನ್ನು ಹುಡುಕುತ್ತಾ ಹೋದಾಗ -“ಹುಡುಗ ಏನು ಮಾಡುತ್ತಾನೆ? ಸಾಫ್ಟ್ ವೇರ್‌ ಇಂಜಿನಿಯರಾ? ಹುಡುಗನಿಗೆ ಬೆಂಗಳೂರಲ್ಲಿ ಕೆಲಸ ಇದೆಯಾ? ಊರಲ್ಲಿ ಕೃಷಿ ಭೂಮಿ ಇದೆಯಾ? ಅಪ್ಪ ಅಮ್ಮ ಊರಲ್ಲೇ ಇರ್ತಾರಾ?’ ಎಂಬ ಅಗಣಿತ ಪ್ರಶ್ನೆಗಳ ಸುರಿಮಳೆ ಹುಡುಗಿಯ ಹೆತ್ತವರಿಂದ, ಹುಡುಗನ ಹೆತ್ತವರಿಗೆ ತೂರಿಬಂತು. ಅವರ ಹತ್ತಾರು ಪ್ರಶ್ನೆಗಳಲ್ಲಿ, ಕೃಷಿ ಭೂಮಿ ಇದೆಯಾ ಎಂಬುದಕ್ಕೆ ಮಾತ್ರ ಉತ್ತರವಿತ್ತು. ಹಾಗಾದ್ರೆ ನಮ್ಮ ಹುಡುಗಿ ಯನ್ನು ಕೊಡಲು ಆಗುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿದಾಗ ಹುಡುಗ ಮತ್ತು ಅವನ ಹೆತ್ತವರಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಹತ್ತಾರು ಕಡೆಗಳಲ್ಲಿ ಇದೇ ಪ್ರಶ್ನೆಗಳು ಎದುರಾದಾಗ ಹೆತ್ತವರಿಗೆ, ಹುಡುಗನಿಗೆ ಹೇಗಾಗಬೇಡ?

Advertisement

ಹವ್ಯಕ ಸಮಾಜದ ಹುಡುಗರಿಗೆ, ಹುಡುಗಿಯರು ಸಿಗದ ಈ ದುಸ್ಥಿತಿಯ ಸಂಗತಿ ಸಮಾಜದ ಸ್ವರ್ಣವಲ್ಲಿ ಶ್ರೀಗಳ ಗಮನಕ್ಕೆ ಬಂದಾಗ ಅವರೇ ಒಂದು ಯೋಜನೆ ರೂಪಿಸಿದರು. ಇದಕ್ಕೊಂದು ಪರ್ಯಾಯ ಮಾರ್ಗ ಕಂಡುಕೊಳ್ಳಲೇ­ಬೇಕೆಂದು ಸಲಹೆ ಇತ್ತರು. ಉತ್ತರ ಪ್ರದೇಶದ ಮಿರ್ಜಾಪುರ, ಬಲರಾಮಪುರ­ದಲ್ಲಿರುವ ಬ್ರಾಹ್ಮಣ ಸಮುದಾಯದ ಹುಡುಗಿಯರನ್ನು ಮದುವೆ ಮಾಡಿ ಮನೆ ತುಂಬಿಸಿಕೊಳ್ಳುವುದು ಎಂಬುದೇ ಆ ಸಲಹೆ. ಈ ಯೋಜನೆ ಹೆಚ್ಚು ಫ‌ಲಶ್ರುತಿ ನೀಡಿದ ಪರಿಣಾಮ, ಯಲ್ಲಾಪುರ ತಾಲೂಕು ಒಂದರಲ್ಲೇ 70-80 ಹುಡುಗಿಯರು ಉತ್ತರ ಪ್ರದೇಶದಿಂದ ಮದುವೆಯಾಗಿ ಯಲ್ಲಾಪುರಕ್ಕೆ ಬಂದಿದ್ದಾರೆ. ಮತ್ತೂ ಹಲವರಿಗೆ ಮದುವೆ ಮಾಡಿಸಿ ಕರೆ ತರುವ ಯೋಜನೆಗಳು ನಡೆಯುತ್ತಿವೆ.

ಮಾಡಿದ್ದುಣ್ಣೋ ಮಹಾರಾಯ

ಕೇವಲ 60-70 ವರ್ಷಗಳ ಹಿಂದೆ ವರದಕ್ಷಿಣೆ ಕೊಟ್ಟು ಮದುವೆ ಮಾಡಲು ಆಗುವುದಿಲ್ಲ ಎಂದು ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ, ವೆಂಗುರ್ಲಾ, ತರ್ಕಾಲಿ, ಅಂಬೋಲಿ ಮುಂತಾದ ಕಡೆಗಳಿಗೆ ಯಲ್ಲಾಪುರದ ಹುಡುಗಿಯರನ್ನು ಮದುವೆ ಮಾಡಿ ಕೊಡಲಾಗುತ್ತಿತ್ತು. ಈಗ ಕಾಲಚಕ್ರ ತಿರುಗಿದೆ. ಈಗ ಯಲ್ಲಾಪುರದಲ್ಲೇ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲ. ಹಾಗಾಗಿ ಉತ್ತರ ಪ್ರದೇಶದಿಂದ ಹುಡುಗಿಯರನ್ನು ಕರೆತರಲಾಗುತ್ತಿದೆ.

ವಧು ವಲಸೆಗೆ ಕಾರಣವೇನು?

Advertisement

2011ರ ಜನಗಣತಿ ಪ್ರಕಾರ ಮಿರ್ಜಾಪುರದ ಜನಸಂಖ್ಯೆ 24 ಲಕ್ಷ. ಬಲರಾಂಪುರದ ಜನಸಂಖ್ಯೆ 20 ಲಕ್ಷ. ಈ ಅತಿಯಾದ ಜನಸಂಖ್ಯೆಯೇ ಬಡತನಕ್ಕೆ ಕಾರಣ. ಒಂದು ಕುಟುಂಬದಲ್ಲಿ 2-3 ಜನ ಹುಡುಗಿಯರು ಇದ್ದರೆ, ಅವರನ್ನು ಮದುವೆ ಮಾಡಿ ಕೊಡುವುದು ಹೆತ್ತವರಿಗೆ ಅತ್ಯಂತ ತ್ರಾಸದಾಯಕ ಕೆಲಸ. ಕಾರಣ, ಅಲ್ಲಿ ಸಾಮಾನ್ಯ ಕೃಷಿ ಉದ್ಯೋಗ ಮಾಡಿಕೊಂಡಿರುವ ವರನಿಗೆ ಲಕ್ಷ ಲಕ್ಷ ದುಡ್ಡು, ಒಡವೆ, ಪಾತ್ರೆ, ಬೈಕ್‌, ಕಾರ್‌ ಇತ್ಯಾದಿಯನ್ನು ಹುಡುಗಿಯ ತಂದೆ ಕೊಡಬೇಕು. ಸರ್ಕಾರಿ ಉದ್ಯೋಗದಲ್ಲಿದ್ದರೆ ವರನ ಬೇಡಿಕೆಗಳು ಇಮ್ಮಡಿ, ಮೂರ್ಮಡಿ ಆಗುತ್ತವೆ ಎಂದು ಹೆಸರು ಹೇಳಲು ಬಯಸದ, ಮದುವೆಯಾಗಿ ಉತ್ತರಪ್ರದೇಶದಿಂದ ಯಲ್ಲಾಪುರಕ್ಕೆ ಬಂದ ಗೃಹಿಣಿಯೋರ್ವರು ಹೇಳುತ್ತಾರೆ.

ಬಂದವರ ಬವಣೆಗಳೇನು?

ಸಾವಿರಾರು ಕಿ.ಮೀ. ದೂರದಿಂದ ವಲಸೆ ಬಂದ ಮಹಿಳೆಗೆ ಎದುರಾಗುವ ಸವಾಲುಗಳು ನೂರಾರು. ಮೊಟ್ಟ ಮೊದಲಾಗಿ ಭಾಷೆಯ ಸಮಸ್ಯೆ, ಉತ್ತರ ಪ್ರದೇಶದಲ್ಲಿ ಅವಧ್‌ ಮತ್ತು ಹಿಂದಿ ಭಾಷೆಯನ್ನು ಮಾತನಾಡುವ ಮಹಿಳೆಯರು ಇಲ್ಲಿ ಬಂದ ಮೇಲೆ ಕನ್ನಡ ಅಥವಾ ಹವ್ಯಕ ಕನ್ನಡದಲ್ಲಿ ಮಾತನಾಡಬೇಕು. ಮದುವೆಯಾಗುವ ಹುಡುಗನಿಗೆ ಹಿಂದಿ ಬಂದರೆ, ಹುಡುಗನ ಮನೆಯವರಿಗೆ ಹಿಂದಿ ಬರುವುದಿಲ್ಲ. ಮಕ್ಕಳ ಶಾಲಾ ಶಿಕ್ಷಣಕ್ಕೂ ತೊಂದರೆ. ಗ್ರಾಮಾಂತರದಲ್ಲಿ ಆಂಗ್ಲ ಭಾಷೆಯ ಶಾಲೆಗಳಿಲ್ಲ. ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಹೆತ್ತಮ್ಮನಿಗೆ ಕನ್ನಡ ಬರುವುದಿಲ್ಲ. ಮಲೆನಾಡಿನ ಮನೆಗಳು ಕಾಡಂಚಿನಲ್ಲಿ, ನಗರದಿಂದ ದೂರದಲ್ಲಿರುವುದರಿಂದ ನಗರ ಸಂಪರ್ಕ ಇಲ್ಲದೆ ಇರುವುದು, ಜನವಸತಿಯಿಲ್ಲದ ನಿರ್ಜನ ಕಾಡಂಚಿನ ಮನೆಗಳಲ್ಲಿ ಜೀವನ ನಡೆಸುವುದು ಕಷ್ಟವೆಂದು ಕೆಲವರು ಹೇಳುತ್ತಾರೆ. ಹೆತ್ತವರ ಮನೆಯಲ್ಲಿ ವಿಶೇಷ ಸಮಾರಂಭಗಳು ಇ¨ªಾಗ, ಸಂಬಂಧಿಕರಿಗೆ ಏನಾದ್ರು ಅರೋಗ್ಯ ಸಮಸ್ಯೆಗಳಾದ ತಕ್ಷಣಕ್ಕೆ ಹೋಗಿ ಬರುವುದು ಉತ್ತರ ಪ್ರದೇಶದಿಂದ ಯಲ್ಲಾಪುರಕ್ಕೆ ಸೊಸೆಯಾಗಿ ಬಂದವರಿಗೆ ಕಷ್ಟ. ಮಕ್ಕಳು, ಪತಿ ಸೇರಿ ಎಲ್ಲರೂ ಪ್ರಯಾಣ ಬೆಳೆಸಬೇಕಾಗುತ್ತದೆ. ಪ್ರಯಾಣ ದುಬಾರಿ. ಹೀಗಾಗಿ ಕಷ್ಟ ಕಾಲದಲ್ಲಿ ತಾಯಿಯ ಮನೆಗೆ ಹೋಗಿ ಬರುವುದು ಕಷ್ಟದ ಕೆಲಸ.

ಕೊಟ್ಟ ಹೆಣ್ಣು ಕುಲಕ್ಕೆ ದೂರ

ಕೊಟ್ಟ ಹೆಣ್ಣು ಕುಲಕ್ಕೆ ದೂರ ಎನ್ನುವ ಹಿರಿಯರ ಮಾತು 21ನೇ ಶತಮಾನದಲ್ಲೂ ಆಚರಣೆಯಲ್ಲಿರುವುದು ಆಶ್ಚರ್ಯದ ಸಂಗತಿ. ಕಾಲ, ಜನ, ತಲೆಮಾರು ಬದಲಾದರೂ ವಿಚಿತ್ರ ಪದ್ಧತಿಗಳು ಮಾತ್ರ ಬದಲಾಗಿಲ್ಲ. ಉತ್ತರ ಪ್ರದೇಶದಲ್ಲಿ ಈಗಲೂ ಒಮ್ಮೆ ಮದುವೆ ಮಾಡಿಕೊಟ್ಟ ಮೇಲೆ ಮುಗಿಯಿತು. ಮತ್ತೆ ಮಗಳ ಮನೆಗೆ ಹೆತ್ತವರು ಹೋಗಲ್ಲ. ಹೋದರೂ ನೀರು ಸಹ ಕುಡಿಯುವುದಿಲ್ಲ. ಆಹಾರ ಸೇವಿಸುವುದು ದೂರದ ಮಾತು. ಆದರೆ, ದೂರದ ಯಲ್ಲಾಪುರಕ್ಕೆ ಮಗಳನ್ನು ಮದುವೆ ಮಾಡಿಕೊಟ್ಟ ಮೇಲೆ ಬರದೆ ಇರುವುದು ಆಗಲ್ಲ. ಬಂದರೂ ಆರಂಭದ ದಿನಗಳಲ್ಲಿ ಒಂದೆರಡು ದಿನಕ್ಕೆ ಮರಳಿ ಹೊರಟು ಬಿಡುತ್ತಿದ್ದರು. ನೀರು, ಆಹಾರ ಸೇವಿಸದೆ, ಮಗಳ ಮನೆಯಿಂದ ದೂರ ಉಳಿದು(ವಸತಿ ಗೃಹದಲ್ಲಿ)ಮಗಳನ್ನು ನೋಡಿಕೊಂಡು ಹೋಗುತ್ತಿದ್ದರು. ಆದರೆ, ಈಗ ಸ್ವಲ್ಪ ಪದ್ಧತಿಯನ್ನು.ಬದಲಾಯಿಸಿ­ಕೊಂಡಿದ್ದಾರೆ. ಬಂದು ಹೋಗಲು ಐದಾರು ದಿನಗಳು ತಗಲುವುದರಿಂದ ಮಗಳ ಮನೆಯಲ್ಲಿ ನಾಲ್ಕೈದು ದಿನವಾದರೂ ಉಳಿಯಬೇಕಾಗುತ್ತದೆ. ಹಾಗೆ ಉಳಿದು ಮರಳಿ ಊರಿಗೆ ಹೋಗುವಾಗ ಶಾಸ್ತ್ರದಂತೆ ಊಟ, ವಸತಿ ಪಡೆದಿದ್ದಕ್ಕೆ ಅಳಿಯನಿಗೆ ಸ್ವಲ್ಪ ಹಣ ಕೊಟ್ಟು ಹೋಗುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ಏನೇ ಆದರೂ ದೂರದ ಊರಿನಿಂದ ಬಂದು ಜನ, ಭಾಷೆ, ಆಹಾರ, ವಾತಾವರಣ ಭಿನ್ನವಿದ್ದರೂ ಉತ್ತರ ಪ್ರದೇಶದ ಹೆಣ್ಣುಮಕ್ಕಳು ಇಲ್ಲಿಗೆ ಬಂದು ಹೊಂದಾಣಿಕೆಯ ಜೀವನ ನಡೆಸುತ್ತಿರುವುದು ಶ್ಲಾಘನೀಯ.

ಬಂದವರು ಹೇಗಿದ್ದಾರೆ?:

ಉತ್ತರ ಪ್ರದೇಶದಿಂದ ಬಂದ ಮಹಿಳೆಯರಿಗೆ ಯಲ್ಲಾಪುರ ಒಂದು ರೀತಿಯ ಸ್ವರ್ಗ. ಅಲ್ಲಿಯ ಹಾಗೆ 50 ಡಿಗ್ರಿ ಬಿಸಿಲಿನ ತಾಪತ್ರಯ ಇಲ್ಲ. ಮೈನಸ್‌ ಡಿಗ್ರಿ ಚಳಿಯೂ ಇಲ್ಲ. ಯಾವಾಗ ಬೇಕಾದಾಗ ದಿಕ್ಕನ್ನು ಬದಲಿಸುವ ನದಿಗಳೂ ಇಲ್ಲಿಲ್ಲ. ಇಲ್ಲಿಯ ಸಮತೋಲನದ ವಾತಾವರಣ, ಹೊರಗಿನವರೆಂದು ಭಾವಿಸದೆ ಇವರು ನಮ್ಮವರು ಎಂದು ಬರಮಾಡಿಕೊಳ್ಳುವ ಸಮಾಜ ಬಾಂಧವರ ನಡೆ ಉತ್ತರ ಪ್ರದೇಶದ ವಧುಗಳಿಗೆ ಸಂತಸದ ಜೀವನ ನಡೆಸಲು ಸಹಕಾರಿಯಾಗಿದೆ. ಹಾಗಂತ ಮದುವೆಯಾಗಿ ಬಂದ ಎಲ್ಲರೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗುವುದಿಲ್ಲ. ಹೊಂದಾಣಿಕೆಯ ತೊಂದರೆ ಇರುವುದರಿಂದ ಸಣ್ಣಪುಟ್ಟ ಗೊಂದಲಗಳು ಇವೆ.

ಡಾ. ಗುರು ಬಾಗೇವಾಡಿ

ಸಹಾಯಕ ಪ್ರಾಧ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next