ಪಾಟ್ನಾ: ಮದುವೆ ಎನ್ನುವ ಬಂಧ ವಧು – ವರರ ಜೀವನದಲ್ಲಿ ಸದಾ ನೆನಪಾಗಿ ಉಳಿಯುವ ಸುಂದರ ಕ್ಷಣ. ಈ ಮದುವೆ ದಿನವೇ ಆಘಾತಕಾರಿ ಘಟನೆ ನಡೆದರೆ ಪರಿಸ್ಥಿತಿ ಹೇಗಿರಬಹುದು? ಇಂಥದ್ದೇ ಒಂದು ಘಟನೆ ಬಿಹಾರದ ಭಾಗಲ್ಪುರ್ ನಲ್ಲಿ ನಡೆದಿದೆ.
ಭಾಗಲ್ಪುರ ಜಿಲ್ಲೆಯ ನವಗಾಚಿಯಾ ಪ್ರದೇಶದ ನಾರಾಯಣಪುರ ಬ್ಲಾಕ್ನ ಹಳ್ಳಿಯಲ್ಲಿ ಇತ್ತೀಚೆಗೆ ನಂದಲಾಲ್ ಠಾಕೂರ್ ಅವರ ವಿವಾಹ ನೆರವೇರಿದೆ. ಮದುವೆ ವೇದಿಕೆಯಲ್ಲಿ ಸಂಭ್ರಮದಲ್ಲಿ ಅತಿಥಿಗಳಿಂದ ಶುಭಾಶಯವನ್ನು ಪಡೆಯುವುದರಲ್ಲಿ ನವದಂಪತಿಗಳು ನಿರತರಾಗಿದ್ದರು. ಆದರೆ ಇದು ಕ್ಷಣಕಾಲದ ಸಂತಸ ಎನ್ನುವುದು ಆ ಸಮಯದಲ್ಲಿ ವರ ನಂದಲಾಲ್ ಠಾಕೂರ್ ಅವರಿಗೆ ತಿಳಿದಿರಲಿಲ್ಲ.
ಮೇ.21 ರಂದು ಮದುವೆ ನಡೆದು, ಮೇ.22 ರಂದು ವಧು ತನ್ನ ಪತಿಯೊಂದಿಗೆ ಅತ್ತೆ ಮನೆಗೆ ಬಂದಿದ್ದಾರೆ. ಮೇ.22 ರಂದು ಮಧ್ಯರಾತ್ರಿಯ ವೇಳೆಗೆ ವಧು ತಾನು ಉಟ್ಟಿದ್ದ ಚಿನ್ನಾಭರಣ, ಗಂಡನ ಮನೆಯಿಂದ ಬಂದ ಹಣ ಇದೆಲ್ಲವನ್ನು ಹಿಡಿದುಕೊಂಡು ರಾತ್ರೋ ರಾತ್ರಿ ಪರಾರಿಯಾಗಿದ್ದಾಳೆ.!
ಇದನ್ನೂ ಓದಿ: “ನಾನೇ ದೊಡ್ಡ ಸ್ಟಾರ್ ಎಂದು ತಿಳಿದುಕೊಂಡಿದ್ದಾನೆ” ಪೃಥ್ವಿ ಶಾ ವಿರುದ್ಧ ಗಿಲ್ ಕೋಚ್ ಟೀಕೆ
Related Articles
ಈ ಸಂಬಂಧ ಭವಾನಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪತ್ನಿ 1.40 ಲಕ್ಷ ರೂ. ಹಾಗೂ ಭಾರೀ ಪ್ರಮಾಣದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ಪತಿ ದೂರು ನೀಡಿದ್ದಾರೆ.
ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಕಾರಿನಲ್ಲಿ ವಧು ವ್ಯಕ್ತಿಯೊಬ್ಬನೊಂದಿಗೆ ಓಡಿ ಹೋಗುತ್ತಿರುವುದನ್ನು ಸಿಸಿಟಿವಿಯಲ್ಲಿ ನೋಡಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜೀವ್ ಕುಮಾರ್ ಯಾದವ್ ಅವರು, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಗುರುವಾರ ಮಾನ್ಸಿಯ ಗ್ರಾಮದಿಂದ ನವವಿವಾಹಿತೆಯೊಂದಿಗೆ ಓಡಿಹೋಗಲು ಬಳಸಿದ ಕ್ರೆಟಾ ಕಾರನ್ನು ವಶಪಡಿಸಿಕೊಂಡಿದ್ದೇವೆ ಹಾಗೂ ನವವಿವಾಹಿತೆಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದಿದ್ದಾರೆ.
ನವವಿವಾಹಿತೆ ತಾನು ತನ್ನ ಪ್ರಿಯಕರನೊಂದಿಗೆ ಜೀವಿಸಲು ಇಷ್ಟಪಡುತ್ತೇನೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾಳೆ.
ಆಕೆಗೆ ಪ್ರಿಯಕರ ಇದ್ದಾನೆ ಎಂದು ಮೊದಲೇ ಗೊತ್ತಾಗಿದ್ದರೆ ನಾನು ಮದುವೆ ಆಗುತ್ತಿರಲಿಲ್ಲ. ನನ್ನ ತಾಯಿ ಹಾಗೂ ಮಧ್ಯವರ್ತಿ ಅವಳ ಬಳಿ ಆಗಾಗ ಮಾತನಾಡುತ್ತಿದ್ದರು. ಆಕೆಯನ್ನು ನಾನು ಮದುವೆಗಿಂತ ಮುಂಚೆ ಎಲ್ಲೂ ಭೇಟಿಯಾಗಿಲ್ಲ. ಆಕೆ ಚೆನ್ನಾಗಿ ಮಾತನಾಡುತ್ತಿದ್ದಳು. ಆ ಕಾರಣದಿಂದ ಇದು ಮೋಸವೆನ್ನುವುದು ಗೊತ್ತಾಗಿಲ್ಲ ಎಂದು ವರ ನಂದಲಾಲ್ ಠಾಕೂರ್ ಹೇಳಿದ್ದಾರೆ.
ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ತಾನು ಯಾವುದೇ ಹಣ ಹಾಗೂ ಚಿನ್ನಾಭರಣವನ್ನು ತೆಗೆದುಕೊಂಡಿಲ್ಲ ಎಂದು ಮಹಿಳೆ ಹೇಳಿದ್ದಾಳೆ.