Advertisement

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

11:40 AM Sep 12, 2022 | Team Udayavani |

ಪುಣೆ: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಮಾನತೆಯ ಸಾರವನ್ನು ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ್ವ- ಆದರ್ಶಗಳನ್ನು ಇಂದು ಎಲ್ಲ ಜಾತಿಗಳ ಬಾಂಧವರು ಸ್ವೀಕರಿಸಿದ್ದಾರೆ. ಮನುಷ್ಯ ಜನ್ಮವೇ ದೊಡ್ಡದು. ಅದುವೇ ಎಲ್ಲ ಭಾರತೀಯರ ಜಾತಿ.  ಉತ್ತಮ ಸೇವಾ ಕಾರ್ಯಗಳಿಗೆ ಸಮಾಜ ಸೇವಕರು, ದಾನಿಗಳು ಬೆನ್ನೆಲುಬಾಗಿ ನಿಲ್ಲುತ್ತಾರೆ. ಬಿಲ್ಲವರ ಘನತೆ, ಗೌರವ, ಅಭಿಮಾನ ಯಾವತ್ತೂ ಕಡಿಮೆಯಾಗದಂತೆ ಸಮಾ ಜದೊಂದಿಗೆ ಹೊಂದಿಕೊಂಡು ಹೋಗುವ ಜಾಯಮಾನ ನಮ್ಮದಾ ಗಿರಲಿ. ಅದಕ್ಕಾಗಿ ನಮ್ಮವರೊಂದಿಗೆ ನಾವು ಶಕ್ತಿಯಾಗಿ ಒಂದಾಗಿ ನಿಲ್ಲೋಣ ಎಂದು ಭಾರತ್‌ ಬ್ಯಾಂಕ್‌ನ ನಿರ್ದೇಶಕ, ಶಿವ ಸಾಗರ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ನ ಆಡಳಿತ ನಿರ್ದೇಶಕ, ಸಮಾಜ ಸೇವಕ ಎನ್‌. ಟಿ. ಪೂಜಾರಿ ತಿಳಿಸಿದರು.

Advertisement

ಅಂಬೆಗಾಂವ್‌ ಕಾತ್ರಜ್‌ ಮುಂಬಯಿ ಬೈಪಾಸ್‌ನ ಆರೋಹಾ ಗಾರ್ಡನ್‌ನಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಪುಣೆ ವತಿಯಿಂದ ಸೆ. 10ರಂದು ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾರಾಯಣಗುರು ಜಯಂತಿಯ ಈ ಶುಭ ಸಂದರ್ಭದಲ್ಲಿ  ಪುಣೆ ಬಿಲ್ಲವ ಸಂಘದ ಗೌರವಾಧ್ಯಕ್ಷನನ್ನಾಗಿ ಮಾಡಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದೀರಿ. ವಿಶ್ವನಾಥ್‌ ಪೂಜಾರಿ ಕಡ್ತಲರಂಥ ಚುರುಕಿನ ನಾಯಕತ್ವದಲ್ಲಿ  ಮತ್ತು ಅವರೊಂದಿಗಿರುವ ಪುಣೆಯ ಸಮಸ್ತ ಬಿಲ್ಲವರ ಬೆಂಬಲದಿಂದ ಪುಣೆ ಬಿಲ್ಲವ ಸಂಘಕ್ಕೆ ಖರೀದಿಸಿದ ಜಾಗದಲ್ಲಿ ಗುರು ಮಂದಿರ, ವಿದ್ಯಾ ಮಂದಿರ, ಭವನ ನಿರ್ಮಾಣ ಕಾರ್ಯಗಳು ನೆರವೇರಲಿವೆ. ಅದೇ ರೀತಿ ಸ್ತ್ರೀ ಶಕ್ತಿ ಕೂಡ ಇಲ್ಲಿ ಹೆಚ್ಚಿನ ಬಲ ತಂದುಕೊಟ್ಟಿದೆ. ಸಂಘದ ಮುಂದಿನ ಯೋಜನೆಗಳಿಗೆ ಸಂಘದ ಗೌರವಾಧ್ಯಕ್ಷನಾಗಿ ಸೇವೆ ನೀಡುತ್ತಾ ಸದಾ ನಿಮ್ಮೊಂದಿಗಿರುತ್ತೇನೆ ಎಂದರು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 8ರಿಂದ ಕೇಶವ ಶಾಂತಿ ಮತ್ತು ಯಶ ವಂತ ಶಾಂತಿ ಅವರ ಪೌರೋಹಿತ್ಯದಲ್ಲಿ ಕಲಶ ಮಹೂರ್ತ, ಗುರುಪೂಜೆ ಜರಗಿತು. ಬಿಲ್ಲವ ಸಂಘದ ಸದಸ್ಯ, ಸದಸ್ಯೆಯರಿಂದ ಭಜನ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಿತು. ಗುರುಪೂಜೆ ಬಳಿಕ ನಡೆದ ಧಾರ್ಮಿಕ ಸಭೆಯು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗೌರವ ಅತಿಥಿಗಳಾಗಿ ಖ್ಯಾತ ಬಹು ಭಾಷಾ ಚಲನಚಿತ್ರ ನಟ ಡಾ| ಸುಮನ್‌ ತಲ್ವಾರ್‌, ಖ್ಯಾತ ಸಾಹಿತಿ, ತುಳು ಇತಿಹಾಸ ತಜ್ಞ ಬನ್ನಂಜೆ ಬಾಬು ಅಮೀನ್‌, ಚೆಫ್‌ ಟಾಕ್‌ ಫುಡ್‌ ಹಾಸ್ಪಿಟಾಲಿಟಿ ಸರ್ವಿಸಸ್‌ ಪ್ರೈ. ಲಿ.ನ ಆಡಳಿತ ನಿರ್ದೇಶಕ, ಸಮಾಜ ಸೇವಕ ಗೋವಿಂದ್‌ ಬಾಬು ಪೂಜಾರಿ, ಭಾರತ್‌ ಕೋ – ಆಪರೇಟಿವ್‌ ಬ್ಯಾಂಕ್‌ನ ಆಡಳಿತ ನಿರ್ದೇಶಕ ಎಲ್‌. ವಿ. ಅಮೀನ್‌, ಯಶೋದಾ ಎನ್‌. ಟಿ. ಪೂಜಾರಿ ಉಪಸ್ಥಿತರಿದ್ದರು. ಪುಣೆ ಬಿಲ್ಲವ ಸಂಘದ ಉಪಾಧ್ಯಕ್ಷ, ಕಟ್ಟಡ ಸಮಿತಿಯ ಅಧ್ಯಕ್ಷ ಸಂದೇಶ್‌ ಪೂಜಾರಿ, ಪಿಂಪ್ರಿ ಶ್ರೀ ಗುರುನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ನವೀನ್‌ ಕೋಟ್ಯಾನ್‌, ಮಹಿಳಾ ವಿಭಾಗದ ಅಧ್ಯಕ್ಷೆ ಭವಂತಿ ಪೂಜಾರಿ, ಪುಣೆ ಬಿಲ್ಲವ ಸಂಘದ ಮಹಿಳಾ ವಿಭಾಗ ಅಧ್ಯಕ್ಷೆ ಉಮಾ ಕೆ. ಪೂಜಾರಿ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್‌ ಪೂಜಾರಿ ಭಾಗವಹಿಸಿದ್ದರು.

ಅತಿಥಿಗಳು ದೀಪ ಪ್ರಜ್ವಲಿಸಿ, ಹಿಂಗಾರ ಅರಳಿಸಿ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವನೀತಾ ಬಿ. ಪೂಜಾರಿ ಸ್ವಾಗತಿಸಿದರು. ಪುಣೆ ಬಿಲ್ಲವ ಸಂಘದ ವತಿಯಿಂದ ಪ್ರತೀವರ್ಷ ಪ್ರತಿಭಾವಂತ ಮಕ್ಕಳಿಗೆ ನೀಡಲ್ಪಡುವ ಪ್ರತಿಭಾ ಪುರಸ್ಕಾರವನ್ನು ಅತಿಥಿಗಳು ನೀಡಿ ಹಾರೈಸಿದರು. ಬಿಲ್ಲವ ಸಮಾಜದ ಸಾಧಕರಾದ ಕುಟ್ಟಿ ಪೂಜಾರಿ ಹಾಗೂ ಉಮಾ ಪೂಜಾರಿ ದಂಪತಿಯನ್ನು ಸಂಘದ ಪರವಾಗಿ ಅತಿಥಿಗಳು ಸಮ್ಮಾನಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಇದೆ ವೇಳೆ ನಾರಾಯಣಗುರುಗಳ ಭಾವಚಿತ್ರದ ಸ್ಟಿಕ್ಕರ್‌ ಅನ್ನು ಎನ್‌. ಟಿ. ಪೂಜಾರಿ ಬಿಡುಗಡೆಗೊಳಿಸಿದರು.

Advertisement

ಅಧ್ಯಕ್ಷ ವಿಶ್ವನಾಥ್‌ ಪೂಜಾರಿಯ ವರು ಮುಖ್ಯ ಅತಿಥಿ ಎನ್‌. ಟಿ. ಪೂಜಾರಿಯವರನ್ನು ಪುಣೆ ಬಿಲ್ಲವ ಸಂಘದ ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಭೆಯಲ್ಲಿ ಘೋಷಿಸಿ ಅವರನ್ನು ಪುಣೇರಿ ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನಪತ್ರ ನೀಡಿ ಗೌರವಿಸಿದರು. ಅತಿಥಿಗಳನ್ನು ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಮತ್ತು ಪದಾಧಿಕಾರಿಗಳು ಸಮ್ಮಾನಿಸಿದರು. ಸಮ್ಮಾನಪತ್ರವನ್ನು  ಪ್ರಕಾಶ್‌ ಪೂಜಾರಿ ಬೈಲೂರು, ಸುದೀಪ್‌ ಪೂಜಾರಿ ಎಳ್ಳಾರೆ, ವನಿತಾ ಬಿ. ಪೂಜಾರಿ, ಹರೀಶ್‌ ಪೂಜಾರಿ, ದೀಪಿಕಾ ಪೂಜಾರಿ ವಾಚಿಸಿದರು. ಗಣೇಶ್‌ ಪೂಜಾರಿ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಜರಗಿತು.

ಪುಣೆ ಬಿಲ್ಲವ ಸಂಘದ ಪ್ರಮುಖರಾದ ಜಯ ಪೂಜಾರಿ, ಗೀತಾ ಪೂಜಾರಿ, ಸುದರ್ಶನ ಸುವರ್ಣ, ಗುರುರಾಜ್‌ ಪೂಜಾರಿ, ತೃಪ್ತಿ ಪೂಜಾರಿ, ಗಿರೀಶ್‌ ಪೂಜಾರಿ, ನವೀನ್‌ ಪೂಜಾರಿ, ಚೇತನ್‌ ಪೂಜಾರಿ ಕಲ್ಯಾ, ಭಾಸ್ಕರ್‌ ಎ. ಪೂಜಾರಿ, ಪ್ರದೀಪ್‌ ಪೂಜಾರಿ, ರಾಜೇಶ್‌ ಪೂಜಾರಿ, ಸುದೀಪ್‌ ಪೂಜಾರಿ ಎಳ್ಳಾರೆ, ನವಿತಾ ಎಸ್‌. ಪೂಜಾರಿ, ಜಯಶ್ರೀ ಸಿ. ಪೂಜಾರಿ, ಧನಂಜಯ್‌ ಪೂಜಾರಿ, ಶಿವಪ್ರಸಾದ್‌ ಪೂಜಾರಿ, ರವಿ ಪೂಜಾರಿ, ಪ್ರಕಾಶ್‌ ಪೂಜಾರಿ ಬೈಲೂರು, ಯಾದವ್‌ ಸುವರ್ಣ, ರಾಜೇಶ್‌ ಸುವರ್ಣ, ಸುದೀಪ್‌ ಎನ್‌. ಪೂಜಾರಿ ಮೂಡಿಗೆರೆ, ಶಿವರಾಮ್‌ ಪೂಜಾರಿ, ಸತೀಶ್‌ ಪೂಜಾರಿ, ಸೂರ್ಯ ಪೂಜಾರಿ, ದಯಾನಂದ ಪೂಜಾರಿ, ಶಂಕರ್‌ ಪೂಜಾರಿ, ಜಯ ಪೂಜಾರಿ ರೆಂಜಾಳ, ದಯಾನಂದ್‌ ಪೂಜಾರಿ, ಉಮೇಶ್‌ ಪೂಜಾರಿ ಮತ್ತಿತರರು ಸಹಕರಿಸಿದರು.

ನಮ್ಮ ಬಿಲ್ಲವ ಸಂಘಕ್ಕೆ ಈಗಾಗಲೇ ಖರೀದಿಸಿದ ಜಾಗವನ್ನು ನೋಡಿ ಗಣ್ಯರು ಸಂತಸ ವ್ಯಕ್ತಪಡಿಸಿ ನಮ್ಮ ಯೋಜನೆಗಳಿಗೆ ಸಹಕರಿಸುವ ಭರವಸೆ ನೀಡಿದ್ದಾರೆ. ಕೋಟಿ-ಚೆನ್ನಯರ ಅಭಯ, ನಾರಾಯಣಗುರುಗಳ ಕೃಪಾಶಿರ್ವಾದ, ನಮ್ಮ ಸಮಾಜದ ಗಣ್ಯರ ಸಹಕಾರ, ಸಲಹೆ ಸೂಚನೆಗಳು ಇದ್ದರೆ ನಮ್ಮ ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ.  ಪುಣೆ ಬಿಲ್ಲವ ಸಂಘ  ಅತ್ಯಂತ ಮಹತ್ವದ ಮತ್ತು ದೊಡ್ಡ ಮಟ್ಟದ ಕಾರ್ಯಕ್ಕೆ ಇಳಿದಿದೆ. ಎನ್‌. ಟಿ. ಪೂಜಾರಿ ಅವರು ನಮ್ಮ ಸಂಘದ ಗೌರವಾಧ್ಯಕ್ಷರಾಗಿ ಬಲ ತುಂಬಿದ್ದಾರೆ. ಪುಣೆಯ ಬಿಲ್ಲವ ಸಂಘ ಸದಾ ಸಮಾಜ ಬಾಂಧವರೊಂದಿಗೆ ಇದೆ ಎಂಬುವುದನ್ನು ತೋರಿಸಿದ್ದೇವೆ. ಇನ್ನು ಮುಂದೆಯೂ ಎಲ್ಲರನ್ನೂ ಸೇರಿಸಿಕೊಂಡು ದಾನಿಗಳ ಸಹಕಾರದಿಂದ ನಮ್ಮ ಯೋಜನೆಗಳನ್ನು ಸಾಕಾರಗೊಳಿಸಿ ಸಮಾಜಕ್ಕೆ ಅರ್ಪಿಸಲಿದ್ದೇವೆ. –ವಿಶ್ವನಾಥ್‌ ಪೂಜಾರಿ ಕಡ್ತಲ,ಅಧ್ಯಕ್ಷ, ಪುಣೆ ಬಿಲ್ಲವ ಸೇವಾ ಸಂಘ

ಮಾತು ಸಾಧನೆಯಾಗಬಾರದು, ಸಾಧನೆ ಮಾತಾಗಬೇಕು. ಮನುಷ್ಯನಲ್ಲಿರುವ ಯೋಗ್ಯತೆಗೆ ಮಾನ್ಯತೆ ಇರುತ್ತದೆ. ಅಂತಹ ವ್ಯಕ್ತಿಗಳಿಗೆ ಶಕ್ತಿ ತುಂಬುವ ಕಾರ್ಯ ಆಗಬೇಕಿದೆ. ಬಿಲ್ಲವ ಸಂಘಕ್ಕೆ ಶಾಶ್ವತವಾದಂತಹ ಗುಡಿ, ಮಂದಿರ ಭವನ ನಿರ್ಮಾಣದ ಸಂಕಲ್ಪವನ್ನು ವಿಶ್ವನಾಥ್‌ ಪೂಜಾರಿ ಮತ್ತು ಪುಣೆಯ ಬಿಲ್ಲವರು ಮಾಡಿದ್ದಾರೆ. ಈ ಕಾರ್ಯಕ್ಕೆ ಗುರುಕೃಪೆ ಇರಲಿ. ಅಭಿವೃದ್ಧಿ ಚಿಂತನೆಯೊಂದಿಗೆ ಸಮಾಜದ ಹಿತಕ್ಕಾಗಿ ಅರ್ಪಣೆ ಮಾಡುವ ಯೋಜನೆಗಳಿಗೆ ತಂದೆ-ತಾಯಿಗೆ ನೀಡುವ ಸೇವೆಯೆಂದೇ ಪರಿಗಣಿಸಿ ಸಹಕಾರ ನೀಡಿ. ಸಂಘ ಒಳ್ಳೆಯ ರೀತಿಯಲ್ಲಿ ಬೆಳಗಲಿ.-ಬನ್ನಂಜೆ ಬಾಬು ಅಮೀನ್‌, ಹಿರಿಯ ಸಾಹಿತಿ

ನಮ್ಮ ದೇಶ – ಸಮಾಜವನ್ನು ಕಟ್ಟುವ ಮೂಲಕ ನಮ್ಮ ಶ್ರೇಷ್ಠತೆ ತೋರಿಸಿಕೊಳ್ಳ ಬೇಕಾಗಿದೆ. ಗುರು ದೇವರಲ್ಲಿ ಭಕ್ತಿ, ಹಿರಿಯ ರಿಗೆ ನೀಡುವ ಗೌರವ, ನಮ್ಮ ಕಲೆ ಸಂಸ್ಕೃತಿಯ ಜತೆಯಲ್ಲಿ ಮುನ್ನಡೆಯುವ ಜೀವನ ಶೈಲಿ ಯೊಂದಿಗೆ ಸಮಾಜದಲ್ಲಿ ಬೆರೆತಾಗ ಒಗ್ಗಟ್ಟು ಮೂಡಿ ಬರುತ್ತದೆ. ಇದು ಸಂಘಟನೆಗೆ ಪ್ರೇರಣೆ ಯಾಗುತ್ತದೆ. ಯುವ ಶಕ್ತಿಯನ್ನು ಬೆಂಬಲಿಸಿ ಪ್ರೋತ್ಸಾಹ ನೀಡಿದಾಗ ಪೂರ್ವ ನಿರ್ಧರಿತ ಕಾರ್ಯ ಯೋಜನೆಗಳು ಸಾಕರಗೊಳ್ಳುತ್ತವೆ. ಸಂಘ ಅಥವಾ ಸಂಘಟನೆ ವೇಗವಾಗಿ ಪ್ರಗತಿ ಹೊಂದಲು ಉತ್ತಮ ತಳಪಾಯ ಮತ್ತು ಘನ ಸಂಘಟಕರು ಮುಖ್ಯ ಎಂಬುವುದಕ್ಕೆ ಪುಣೆ ಬಿಲ್ಲವ ಸಂಘದ ಸಾಧನೆಯೇ ನಿದರ್ಶನ.-ಸುಮನ್‌ ತಲ್ವಾರ್‌, ಖ್ಯಾತ ಬಹು ಬಾಷಾ ಚಿತ್ರನಟ

ತನ್ನ ಸಾಮರ್ಥ್ಯದ ಅರಿವು ಇದ್ದಾಗ ಮುಂದೆ ಹೋಗುವ ಹಿಂಜರಿಕೆ ಇರಬಾರದು. ಕೈ ಹಿಡಿಯುವ ಹತ್ತು ಮನಸ್ಸುಗಳು ಒಂದಾದಾಗ ಸಂಘಟನೆ ಬಲಗೊಳ್ಳುತ್ತದೆ. ಮುಕ್ತ ಮನಸ್ಸಿನಿಂದ ಸಮಾಜಮುಖೀ ಸೇವೆ ಮಾಡಿದಾಗ ಸಿಗುವ ತೃಪ್ತಿ ಹಾಗೂ ಗೌರವಕ್ಕೆ ಬೆಲೆಯಿದೆ. ವಿಶ್ವನಾಥ್‌ ಪೂಜಾರಿ ಮತ್ತು ಸಂಗಡಿಗರ ಕಾರ್ಯ ಯೋಜನೆಗಳಿಗೆ ನಾವೆಲ್ಲರೂ ಕೈ ಜೋಡಿಸಬೇಕು. ಇಂದಿನ ಸಮ್ಮಾನದಿಂದ ಹೃದಯತುಂಬಿ ಬಂದಿದೆ. ನಾನು ಸದಾ ನಿಮ್ಮೊಂದಿಗಿದ್ದೇನೆ.-ಗೋವಿಂದ್‌ ಬಾಬು ಪೂಜಾರಿ, ಆಡಳಿತ ನಿರ್ದೇಶಕ, ಚೆಫ್‌ ಟಾಕ್‌ ಫುಡ್‌ ಹಾಸ್ಪಿಟಾಲಿಟಿ ಸರ್ವಿಸಸ್‌ ಪ್ರೈ. ಲಿ.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ್ವಾರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಸಂಘರ್ಷ ಮುಕ್ತವಾದ ಸಮಾಜ ನಿರ್ಮಾಣವಾಗುತ್ತದೆ.  ಸಮಾಜದ ಸಂಘಟನೆಗೆ ಮಹತ್ವ ನೀಡಿ, ಸಮಾಜಕ್ಕಾಗಿ ಸಂಘವನ್ನು ಕಟ್ಟಿ ಕೂಡಿ ದುಡಿದರೆ ಉತ್ತಮ ಫಲವಿದೆ. ಸಂಘದ ಮುಂದಿನ ಪ್ರಗತಿ ಮತ್ತು ಯೋಜನೆಗಳು ಬಿಲ್ಲವ ಸಮಾಜ ಬಾಂಧವರಿಗೆ ಅರ್ಪಣೆಯಾಗಲಿವೆ. ಪುಣೆ ಬಿಲ್ಲವ ಸಂಘದ ಯೋಜನೆಗಳ ಜಮೀನು ಉತ್ತಮವಾಗಿದ್ದು, ಇಲ್ಲಿ ಯೋಜಿತ ಭವನಗಳು ನಿರ್ಮಾಣವಾಗಿ ಸಮಸ್ತ ಬಿಲ್ಲವರು ಹೆಮ್ಮೆ ಪಡುವಂತಾಗಲಿದೆ.-ಎಲ್. ವಿ. ಅಮೀನ್‌, ಅಧ್ಯಕ್ಷ, ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ

-ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next