Advertisement

ಮಿನಿ ವಿಧಾನಸೌಧದಲ್ಲಿ ಸೌಕರ್ಯಗಳ ಮರೀಚಿಕೆ!

11:40 AM May 17, 2022 | Team Udayavani |

ಹುಮನಾಬಾದ: ವಿವಿಧ ಕೆಲಸ ಕಾರ್ಯಗಳಿಗೆ ಪಟ್ಟಣದ ಮಿನಿ ವಿಧಾನಸೌಧಕ್ಕೆ ಹೋಗಬೇಕಾದರೆ ಮನೆಯಿಂದಲೇ ನೀರಿನ ಬಾಟಲ್ ತೆಗೆದುಕೊಂಡು ಹೋಗಬೇಕು. ಇಲ್ಲವೇ ಬಾಯಾರಿಕೆಯಿಂದ ಪರದಾಡುವುದು ಖಚಿತ. ಇನ್ನೂ ಇಲ್ಲಿ ಶೌಚಾಲಯ ಹೋಗಬೇಕೆಂದೆನಿಸಿದರೆ ಸುತ್ತಲಿನ ಮರ, ಸಂದಿಗೊಂದಿ ಹುಡುಕುವುದು ಅನಿವಾರ್ಯವಾಗಿದೆ.

Advertisement

ಪಟ್ಟಣದ ಮಿನಿ ವಿಧಾನಸೌಧಕ್ಕೆ ಪ್ರತಿ ದಿನ ತಾಲೂಕಿನ ನೂರಾರು ಜನರು ನಾನಾ ಕೆಲಸದ ನಿಮಿತ್ತ ಬರುತ್ತಾರೆ. ಆದರೆ ಇಲ್ಲಿಗೆ ಬರುವ ಜನರಿಗೆ ತಾಲೂಕಾಡಳಿತ ನೀರಿನ ವ್ಯವಸ್ಥೆ ಬಗ್ಗೆ ತಲೆಕಡೆಸಿಕೊಂಡಿಲ್ಲ. ಅಧಿಕಾರಿಗಳು ಬದಲಾದರೂ ಕೂಡ ವ್ಯವಸ್ಥೆಗಳು ಮಾತ್ರ ಬದಲಾಗುತ್ತಿಲ್ಲ.

ನೀರಿನ ಘಟಕ ಸ್ಥಗಿತ: ಕಳೆದ ಕೆಲ ವರ್ಷಗಳ ಹಿಂದೆ ಉದಯವಾಣಿ ಪತ್ರಿಕೆಯಲ್ಲಿ ಮಿನಿ ವಿಧಾನಸೌಧದ ಮೂಲ ಸೌಕರ್ಯಗಳ ಕೊರತೆ ಕುರಿತು ಸುದ್ದಿ ಪ್ರಕಟಗೊಂಡ ಬಳಿಕ ಮಿನಿ ವಿಧಾನಸೌಧ ಹೊರ ಪ್ರದೇಶದಲ್ಲಿ ಕುಡಿಯುವ ನೀರಿನ ಕಟ್ಟೆ ನಿರ್ಮಿಸಿ ಟ್ಯಾಂಕರ್ ಅಳವಡಿಸಲಾಗಿತ್ತು. ಕೆಲ ತಿಂಗಳು ಜನರಿಗೆ ಕುಡಿಯುವ ನೀರು ಕೂಡ ಪೂರೈಕೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಇದೀಗ ನೀರನ ಘಟಕದಲ್ಲಿ ನೀರಿನ ಟ್ಯಾಂಕರ್ ಕೂಡ ಕಂಡುಬರುತ್ತಿಲ್ಲ. ಈ ಹಿಂದಿನ ತಹಶೀಲ್ದಾರರು ಕುಡಿಯುವ ನೀರಿಗಾಗಿ ಕಚೇರಿ ಆವರಣದಲ್ಲಿ ನೀರಿನ ಟ್ಯಾಂಕ್ ಒಂದು ಅಳವಡಿಸಿದ್ದರು. ಇದೀಗ ಅದು ಕೂಡ ದುರಸ್ತಿಗೆ ಬಂದಿದೆ. ವಿವಿಧ ಕಚೇರಿಗೆ ಬರುವ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ಬಾಗಿಲು ತೆರೆಯದ ಶೌಚಾಲಯ

ಕಚೇರಿಗೆ ಬರುವ ಜನರ ಶೌಚಾಲಯದ ಸಮಸ್ಯೆ ಹೇಳತೀರದು. ಪುರುಷರು ಬಯಲಲ್ಲಿ ಶೌಚ ಮಾಡುತ್ತಾರೆ. ಮಹಿಳೆಯರು ಶೌಚಕ್ಕೆ ಹೋಗಲು ಪರದಾಡುವಂತಾಗಿದೆ. ಈ ಬಗ್ಗೆ ಯಾವ ಅಧಿಕಾರಿಗಳು ಕೂಡ ಗಮನಹರಿಸುತ್ತಿಲ್ಲ ಎಂದು ಮಹಿಳೆಯರು ದೂರುತ್ತಿದ್ದಾರೆ.

Advertisement

ಮಿನಿ ವಿಧಾನಸೌದ ತಹಶೀಲ್ದಾರ ಕಚೇರಿ, ಭೂ ಸರ್ವೇ ಇಲಾಖೆ, ಭೂಮಿ ಕೇಂದ್ರ, ಖಜಾನೆ ಇಲಾಖೆ, ಉಪ ನೋಂದಣೆ ಇಲಾಖೆ, ದಾಖಲೆಗಳ ಇಲಾಖೆ, ಚುನಾವಣಾ ಕಚೇರಿಗಳಿಗೆ ಪ್ರತಿನಿತ್ಯ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದ ಜನರು ಇಲ್ಲಿಗೆ ಬರುತ್ತಾರೆ. ಕುಡಿಯುವ ನೀರಿನ ಸಮಸ್ಯೆ ಜತೆಗೆ ಶೌಚಾಲಯ ಸಮಸ್ಯೆ ಹೆಚ್ಚಿದೆ. ಕಚೇರಿ ಹಿಂದುಗಡೆ ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಅನೇಕ ಬಾರಿ ಬಣ್ಣ ಹಚ್ಚುವ ಕೆಲಸ ಮಾಡಿ ಅನುದಾನ ಖರ್ಚು ಮಾಡಲಾಗಿದೆ. ಆದರೆ ಇಂದಿಗೂ ಕೂಡ ಬಾಗಿಲು ತೆರೆಯದೆ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದ್ದು, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

ಜನರಿಗೆ ಮೂಲ ಸೌಕರ್ಯ ಕಲ್ಪಿಸಿ

ವಿವಿಧ ಕೆಲಸಕಾರ್ಯಗಳಿಗೆ ತಾಲೂಕು ಕಚೇರಿಗೆ ಬರುವ ಜನರಿಗೆ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು. ದೇಶದ ಪ್ರಧಾನಿಗಳು ಶೌಚಾಲಯದ ಕುರಿತು ಅಭಿಯಾನಗಳು ನಡೆಸುತ್ತಿದ್ದರೂ ಕೂಡ ಅಧಿಕಾರಿಗಳು ಮಾತ್ರ ಸಾರ್ವಜನಿಕರ ಶೌಚಾಲಯದ ಕಡೆಗೆ ಗಮನಹರಿಸದಿರುವುದು ಬೇಸರ ಮೂಡಿಸಿದೆ. ಕೂಡಲೇ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮಿನಿವಿಧಾನಸೌಧ ಎದುರಿಗೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು.ಅವಿನಾಶ ಧುಮಾಳೆ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಉಪಾಧ್ಯಕ್ಷರು.

-ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next