ನವದೆಹಲಿ : ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಎರಡೂ ರಾಜ್ಯಗಳ ತಲಾ ಮೂವರ 6 ಸಚಿವರ ಸಮಿತಿಯನ್ನು ರಚಿಸಲಾಗಿದೆ. ಇದಲ್ಲದೇ ಕಾನೂನನ್ನು ಖಚಿತಪಡಿಸಿಕೊಳ್ಳಲು ಹಿರಿಯ ಐಪಿಎಸ್ ಅಧಿಕಾರಿಯ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗುತ್ತಿದೆ.
ಉಭಯ ರಾಜ್ಯಗಳ ನಾಯಕರ ಜತೆ ಮಹತ್ವದ ಸಭೆಯ ಬಳಿಕ ಗೃಹ ಸಚಿವ ಅಮಿತ್ ಶಾ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ”ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ನಡೆಯುತ್ತಿರುವ ಗಡಿ ವಿವಾದಗಳ ಬಗ್ಗೆ ಸಕಾರಾತ್ಮಕ ಚರ್ಚೆ ನಡೆಸಿದ್ದೇವೆ. ಎರಡೂ ಕಡೆಯವರು ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಂಡಿದ್ದಾರೆ ಮತ್ತು ಗಡಿ ವಿವಾದಗಳನ್ನು ಬೀದಿಗಳಲ್ಲಿ ಪರಿಹರಿಸಲಾಗುವುದಿಲ್ಲ. ಸಾಂವಿಧಾನಿಕ ವಿಧಾನಗಳ ಮೂಲಕ ಮಾತ್ರ ಪರಿಹರಿಸಬಹುದು ಎಂದು ಸರ್ವಾನುಮತದಿಂದ ನಿರ್ಧರಿಸಲಾಯಿತು ಎಂದು ಹೇಳಿಕೆ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಎರಡು ರಾಜ್ಯಗಳ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆಗೆ ನಿರ್ಧರಿಸಲಾಗಿದೆ. ಅದೇ ರೀತಿ ನಕಲಿ ಟ್ವಿಟರ್ ಖಾತೆಯ ಮೂಲಕ ತಪ್ಪು ಸಂದೇಶ ರವಾನಿಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುವವರನ್ನು ನಿಯಂತ್ರಿಸಿ ಕ್ರಮವಹಿಸಲು ಸೂಚನೆ ನೀಡಲಾಗಿದೆ. ಜತೆಗೆ ವಿಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮರೆತು ಸಹಮತ ತೋರುವಂತೆ ಅಮಿತ್ ಶಾ ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರ ನಡುವೆ ಸೌಹಾರ್ದಯುತ ಸಂಬಂಧವಿದೆ, ಎರಡೂ ಕಡೆ ಶಾಂತಿ ಕದಡುವ ಯಾವುದೇ ಕೆಲಸ ಮಾಡಬಾರದು. ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಎರಡೂ ರಾಜ್ಯಗಳ ಸಚಿವರ ಸಮಿತಿಯನ್ನು ರಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದಿನ ಸಭೆಯು ಒಂದು ದೊಡ್ಡ ಉಪಕ್ರಮವಾಗಿದ್ದು, ಇದರಿಂದಾಗಿ ಎರಡೂ ರಾಜ್ಯಗಳಲ್ಲಿ ಶಾಂತಿ ಕಾಪಾಡಲಾಗುವುದು. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೆ ಎರಡೂ ರಾಜ್ಯಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.ಕರ್ನಾಟಕದಲ್ಲಿರುವ ಮರಾಠಿಗರನ್ನು ರಕ್ಷಿಸಬೇಕು ಎಂದು ನಾವು ಹೇಳಿದ್ದೇವೆ, ಕರ್ನಾಟಕ ಸಿಎಂ ನಮಗೆ ಆ ಭರವಸೆ ನೀಡಿದ್ದಾರೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.