ನಿಪ್ಪಾಣಿ: ಟೈಮ್ ಪಾಸಿಗಾಗಿ ಬರೆದ ಪುಸ್ತಕಗಳು ಇಂದು ಗ್ರಂಥಗಳಾಗಿವೆ. ಆ ಗ್ರಂಥಗಳು ಇಂದು ನಮ್ಮನ್ನು ಆಳುವಂತಾಗಿದೆ. ಕೈ, ಕಾಲಿಗೆ ಬೇಡಿ ಹಾಕಿಲ್ಲ ಮೆದುಳಿಗೆ ಬೇಡಿ ಹಾಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ “ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಹಕ್ಕುಗಳನ್ನು ಪಡೆಯಬೇಕಾಗಿದ್ದು, ಆದಕಾರಣ ಈ ಹೋರಾಟ ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರು.
ಮನುಷ್ಯರಾಗಿ ಮನುಷ್ಯರನ್ನು ನೋಡುವುದು ಬಹಳ ಮುಖ್ಯ. ಅವನು ಆ ಜಾತಿ, ಈ ಜಾತಿ ಅಂತಾ ಮುಟ್ಟಿಸಿಕೊಳ್ಳುವುದಿಲ್ಲ. ಅನಿಷ್ಟ ಪದ್ಧತಿಗಳು ಹೋಗಬೇಕು, ಅದಕ್ಕೆ ನಮ್ಮ ಹೋರಾಟ. ದಲಿತ ನೀರು ಮುಟ್ಟಿದರೆ ಅಶುದ್ಧ ಅಂತಾರೆ. ಅದೇ ಒಂದು ಎಮ್ಮೆ ಬೆಳಗ್ಗೆಯಿಂದ ಸಂಜೆವರೆಗೂ ನೀರಲ್ಲೇ ಇರುತ್ತದೆ. ಇದರ ವಿರುದ್ಧ ನಮ್ಮ ಹೋರಾಟವಿದೆ. ಗುಡಿ ಕಟ್ಟುವವರೂ ನಾವು, ದೇಣಿಗೆ ಕೊಡುವವರೂ ನಾವು. ದೇಗುಲ ರೆಡಿಯಾದ ಮೇಲೆ ದಲಿತರಿಗೆ ಅಲ್ಲಿ ಪ್ರವೇಶ ಇಲ್ಲ. ದೇವಸ್ಥಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿ. ಶಿಕ್ಷಣ ಜ್ಞಾನ ಒಂದೇ ನಮ್ಮನ್ನ ಬದುಕಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಬರುವ ಜ್ಞಾನ ಬಹಳ ಮುಖ್ಯ ಎಂದರು.
ರಾಜಕೀಯ ಅಧಿಕಾರಕ್ಕಿಂತ ನಮಗೆ ಈ ಅಧಿಕಾರ ಬಹಳ ಮುಖ್ಯ. ಮನುಷ್ಯರಾಗಿ ಮನುಷ್ಯರನ್ನ ನೋಡುವುದು ಬಹಳ ಮುಖ್ಯ. ಅಧಿಕಾರ ಬರುತ್ತೆ ಅಧಿಕಾರ ಹೋಗುತ್ತದೆ. ಮಹಾತ್ಮಾ ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಸತ್ಯ ಶೋಧಕ ಸಂಸ್ಥೆಯಿಂದ ಅವರ ಇತಿಹಾಸ ಹೊರಗೆ ಬಂದಿದೆ. ಶಿವಾಜಿ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದ್ದರು. ವಿಶ್ವದಲ್ಲಿ ಶಿವಾಜಿ ಅವರ ಒಂದೇ ಪೇಂಟಿಂಗ್ ಇರುವುದು ಅದನ್ನು ಯಾರೋ ಕುಲಕರ್ಣಿ, ದೇಶಪಾಂಡೆ ಅವರು ತಯಾರಿಸಿಲ್ಲ. ಮೊಹಮ್ಮದ್ ಮದಾರಿ ಎನ್ನುವ ಚಿತ್ರಕಾರ ಆ ಪೇಂಟಿಂಗ್ ತಯಾರಿಸಿದ್ದರು ಎಂದು ತಿಳಿಸಿದ್ದಾರೆ.
Related Articles
ಇದನ್ನೂ ಓದಿ:ಕುನೋ: ಮೊದಲ ಬೇಟೆಯಾಡಿದ ನಮೀಬಿಯಾದಿಂದ ಬಂದ ಚೀತಾಗಳು
ಪ್ರತಾಪಗಡ್ ಕೋಟೆಯಲ್ಲಿ ಶಿವಾಜಿ ಮಸೀದಿ ನಿರ್ಮಾಣ ಮಾಡಿರುವ ಇತಿಹಾಸವಿದೆ. ಅವರ ಕಾಲದಲ್ಲಿ ಸಮಾನತೆಯಿತ್ತು. ಆದರೆ ಈಗ ಮರಾಠಾ, ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಜಗಳವಾಗುತ್ತಿವೆ. ಇತಿಹಾಸ ಬೇರೆ ಇದೆ. ನಮಗೆ ಬೇರೆ ಇತಿಹಾಸ ತೋರಿಸಲಾಗುತ್ತಿದೆ. ಬಸವಣ್ಣ, ಶಿವಾಜಿ, ಸಂತ ತುಕಾರಾಮ ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ಬೇರೆ ತೋರಿಸಲಾಗುತ್ತಿದೆ. ಬಸವಣ್ಣವರ ಕಾಲದಲ್ಲಿ ಸಾಕಷ್ಟು ಹತ್ಯೆಗಳು ನಡೆದವು ಅದನ್ನು ಮುಸ್ಲಿಮರು ಮಾಡಿದರಾ? ಒಂದು ಲಕ್ಷ ಜೈನರ ಹತ್ಯೆಗಳಾಗಿವೆ ಎಂದು ಜೈನ್ ಸ್ವಾಮೀಜಿ ಹೇಳಿದ್ದಾರೆ. ಜೈನರ ಹತ್ಯೆಯನ್ನು ಆದೀಲ್ ಶಾ ಮಾಡಿದರೆ? ಈ ಎಲ್ಲದರ ಕುರಿತು ಚರ್ಚೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಿಕ್ಚರ್ ಅಭಿ ಬಾಕಿ ಹೈ: ಸ್ಥಳೀಯರಿಗೆ ನಿಪ್ಪಾಣಿಯಲ್ಲಿ ಆದ್ಯತೆ ನೀಡಲಾಗುವುದು. ಅದಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಿಪ್ಪಾಣಿಯಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸಿ, ಜನ ಜಾಗೃತಿ ಮೂಡಿಸಲಾಗುತ್ತದೆ. ಇದು ಟ್ರೇಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ ಎಂದು ವಿರೋಧಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಅವರು ಎಚ್ಚರಿಕೆ ಸಂದೇಶವನ್ನು ರವಾನಿಸಿದರು.