Advertisement

ವಾರದೊಳಗೆ ಮಂತ್ರಿಗಿರಿ? ಮೋದಿ, ಅಮಿತ್‌ ಶಾ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

07:28 AM Jul 31, 2021 | Team Udayavani |

ಬೆಂಗಳೂರು : ಎಲ್ಲವೂ ಅಂದುಕೊಂಡಂತಾದರೆ ಇನ್ನು ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿ ಪ್ರವಾಸದಲ್ಲಿದ್ದು, ವರಿಷ್ಠರನ್ನು ಭೇಟಿಯಾಗಿ ಸಚಿವಾಕಾಂಕ್ಷಿಗಳ ಪಟ್ಟಿ ಕೊಟ್ಟು  ಸಂಪುಟ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ರಕ್ಷಣ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ನೂತನ ಮುಖ್ಯಮಂತ್ರಿಗೆ ಎಲ್ಲ ನಾಯಕರು ಶುಭ ಕೋರಿದ್ದು, ಕರ್ನಾಟಕದಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸಲು ಅವರ ಮುಂದಿರುವ ಸವಾಲುಗಳ ಬಗ್ಗೆ ಮನವರಿಕೆ ಮಾಡಿದರು.

Advertisement

ಹೈಕಮಾಂಡ್‌ನಿಂದ ಸಂಪುಟ ಪಟ್ಟಿ
ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿ ಮೂರು ದಿನ ಕಳೆದಿದ್ದು ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ಆದಷ್ಟು ಬೇಗ ಸಂಪುಟ ವಿಸ್ತರಣೆಗೆ ಅವಕಾಶ ನೀಡುವಂತೆ ಕೇಂದ್ರದ ವರಿಷ್ಠರಿಗೆ ಮನವಿ ಮಾಡಿದ್ದು, ತಮ್ಮದೇ ಆದ ಸಂಭಾವ್ಯರ ಒಂದು ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ನಡ್ಡಾ ಅವರು ಪಕ್ಷದ ವರಿಷ್ಠರ ಮಟ್ಟದಲ್ಲಿ ಯಾರನ್ನು ಸಂಪುಟಕ್ಕೆ ಸೇರಿಸಬೇಕೆಂಬ ಕುರಿತು ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ನೂತನ ಸಚಿವರ ಪಟ್ಟಿಯನ್ನು ಒಂದೆರಡು ದಿನಗಳಲ್ಲಿ ಕೇಂದ್ರದ ನಾಯಕರು ಒಪ್ಪಿಗೆ ನೀಡಿ ಒಂದು ವಾರದ ಒಳಗೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಹೈಕಮಾಂಡ್‌ ಶನಿವಾರ ನೂತನ ಸಚಿವರ ಪಟ್ಟಿಗೆ ಒಪ್ಪಿಗೆ ನೀಡಿದರೆ, ರವಿವಾರ ಅಥವಾ ಸೋಮವಾರವೇ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ದಿಲ್ಲಿಯಲ್ಲಿ ಶಾಸಕರ ಲಾಬಿ
ಬೊಮ್ಮಾಯಿ ಸಂಪುಟ ಸೇರಲು ಬಿಜೆಪಿ ಶಾಸಕರು ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ಮಾಡಲು ದಿಲ್ಲಿಗೆ ತೆರಳಿದ್ದಾರೆ. ಆರ್‌. ಅಶೋಕ್‌, ಉಮೇಶ್‌ ಕತ್ತಿ, ಸಿ.ಪಿ. ಯೋಗೇಶ್ವರ್‌, ಸಚಿವಾಕಾಂಕ್ಷಿಗಳಾದ ಅರವಿಂದ ಬೆಲ್ಲದ್‌, ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ರಮೇಶ್‌ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಹಾಗೂ ಪರಿಷತ್‌ ಸದಸ್ಯರು ದಿಲ್ಲಿಯಲ್ಲಿದ್ದಾರೆ.

Advertisement

ಈ ಬಗ್ಗೆ ಮಾತನಾಡಿರುವ ಬೊಮ್ಮಾಯಿ, ಇಲ್ಲಿಗೆ ಆಗಮಿಸಿರುವ ಶಾಸಕರು ನನ್ನ ಗೆಳೆಯರು. ಪ್ರವಾಹ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಇದ್ದು ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಸ್ವತ್ಛ , ದಕ್ಷ ಆಡಳಿತವೇ ಬದಲಾವಣೆ ಸೂಚನೆ
ನಾಯಕತ್ವ ಬದಲಾವಣೆ ಅಂದರೆ ಚುರುಕಾದ ಆಡಳಿತ ನೀಡುವುದು. ಸರಕಾರದ ಕಾರ್ಯಕ್ರಮ ನಿಗದಿತ ಅವಧಿಯಲ್ಲಿ ಫ‌ಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವುದು. ಜನಪರ, ಸ್ವತ್ಛ ಮತ್ತು ದಕ್ಷ ಆಡಳಿತ ನೀಡುವುದೇ ಬದಲಾವಣೆ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನನ್ನ ಮುಂದೆ ಹಲವಾರು ಸವಾಲುಗಳಿವೆ. ಆರ್ಥಿಕ ಸವಾಲುಗಳೂ ಇದ್ದು, ಕೋವಿಡ್‌ ನಿರ್ವಹಣೆಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ನನ್ನ ಅವಧಿಯಲ್ಲಿ ದಲಿತರು, ಮಹಿಳೆಯರು, ದೀನ ದಲಿತರ ತಲಾ ಆದಾಯ ಹೆಚ್ಚಳ ಮಾಡುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿದ್ದೇನೆ. ಶೇ. 55 ಈ ವರ್ಗದ ಜನರಿದ್ದಾರೆ. ಇವರಿಗೆ ಆರ್ಥಿಕ ಶಕ್ತಿ ತುಂಬಲು ಪ್ರಯತ್ನ ನಡೆಸಲಾಗುವುದು. ಮೊದಲ ಹಂತವಾಗಿ ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್‌ ನೀಡಲು ತೀರ್ಮಾನ ಮಾಡಿದ್ದೇವೆ. ಸರಕಾರಿ ವ್ಯವಸ್ಥೆಯಲ್ಲಿ ವಿಳಂಬ ಮಾಡಿದರೆ, ಭ್ರಷ್ಟಾಚಾರ ಹೆಚ್ಚಾಗುತ್ತದೆ. ಸಾಮಾನ್ಯ ಜನರು ಯಾವುದೇ ರೀತಿಯ ಅಲೆದಾಟ ಮಾಡುವುದನ್ನು ತಪ್ಪಿಸಿದರೆ ಭ್ರಷ್ಟಾಚಾರ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.

ರಾಜ್ಯದಲ್ಲೇ ವರ್ಕಿಂಗ್‌ ಗ್ರೂಪ್‌ ರಚನೆ
ರಾಷ್ಟ್ರೀಯ ನಾಯಕರ ಭೇಟಿಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ಕೇಂದ್ರ ಸರಕಾರದ ಮಟ್ಟದಲ್ಲಿ ರಾಜ್ಯದ ಯೋಜನೆಗಳಿಗೆ ವೇಗವಾಗಿ ಒಪ್ಪಿಗೆ ಪಡೆಯಲು ಎಸಿಎಸ್‌ ನೇತೃತ್ವದಲ್ಲಿ ರಾಜ್ಯದಲ್ಲಿಯೇ ವಿಶೇಷ ತಂಡ (ವರ್ಕಿಂಗ್‌ ಗ್ರೂಪ್‌) ರಚಿಸಲಾಗುವುದು ಎಂದು ಹೇಳಿದ್ದಾರೆ. ದಿಲ್ಲಿಯಲ್ಲಿರುವ ಕರ್ನಾಟಕದ ಅಧಿಕಾರಿಗಳು ಸಕ್ರಿಯರಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವರ್ಕಿಂಗ್‌ ಗ್ರೂಪ್‌ ಮಾಡಿ ಅವರ ಮೂಲಕ ಎಲ್ಲ ಮಾಹಿತಿ ಕಲೆ ಹಾಕಿ ದಿಲ್ಲಿ ಮಟ್ಟದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯದ ಸಂಸದರ ಮೂಲಕ ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಸಂಸದರ ಜತೆ ಚರ್ಚಿಸಿದ್ದೇನೆ. ಕರ್ನಾಟಕದ ನೆಲ, ಜಲ ಸಮಸ್ಯೆಗಳ ಕುರಿತು ಎಲ್ಲ ಸಂಸದ ರೊಂದಿಗೆ ಒಗ್ಗಟ್ಟಿನಿಂದ ಹೋಗಲು ತೀರ್ಮಾನಿಸಿದ್ದೇವೆ ಎಂದರು.

ಶನಿವಾರ ವಿತ್ತ ಸಚಿವರ ಭೇಟಿ
ರಾಜ್ಯದ ಹಣಕಾಸು ವಿಚಾರಗಳ ಕುರಿತು ಶನಿವಾರ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಲಿದ್ದೇನೆ. ಬೆಂಗಳೂರಿಗೆ ವಾಪಸಾದ ಬಳಿಕ ಚಿಕ್ಕಮಗಳೂರು, ಕೊಡಗು, ಮೈಸೂರು, ದಕ್ಷಿಣ ಕನ್ನಡ ಡಿಸಿ, ಎಸ್ಪಿ, ಡಿಎಚ್‌ಒಗಳ ಜತೆ ವೀಡಿಯೋ ಕಾನ್ಫರೆನ್ಸ್‌ ಮಾಡಿ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವೆ. ಉಳಿದ ಜಿಲ್ಲೆಗಳಲ್ಲಿ ಪ್ರವಾಹ ಪರಿಶೀಲನೆ ನಡೆಸುವೆ ಎಂದು ಹೇಳಿದರು.

ಪ್ರಧಾನಿಯವರು ರಾಜ್ಯದ ಬೇಡಿಕೆ ಗೆ ತಕ್ಕಷ್ಟು ಕೋವಿಡ್‌ ಲಸಿಕೆ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕೇಂದ್ರದ ಮುಂದೆ ಬೇಡಿಕೆಗಳು
– ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸಂಪುಟದಲ್ಲಿ ಒಪ್ಪಿಗೆ ನೀಡಿ
– ಎತ್ತಿನಹೊಳೆ ಯೋಜನೆಯ ವೆಚ್ಚ ಹೆಚ್ಚಾಗಿರುವುದರಿಂದ ಅದನ್ನೂ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ
– ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆಯ ಒಪ್ಪಿಗೆ ನೀಡುವಂತೆ ಮನವಿ

ಈ ಭೇಟಿಯಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಮಾಡಿಲ್ಲ. ಸಂಪುಟ ವಿಸ್ತರಣೆ ಸಲುವಾಗಿ ಮತ್ತೂಮ್ಮೆ ದಿಲ್ಲಿಗೆ ಬರಬಹುದು ಅಥವಾ ಬರದೇ ಇರಬಹುದು. ಹೈಕಮಾಂಡ್‌ನ‌ವರೇ ಮಾಹಿತಿ ಕಳುಹಿಸಬಹುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next