ಬೆಂಗಳೂರು: ಮೊದಲು ಪಕ್ಷಕ್ಕಾಗಿ ದುಡಿಯಲು ಮುಂದಾಗಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆ ಈಗ ಬಿಜೆಪಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣ ಶಿಬಿರದಲ್ಲಿ ಸಂತೋಷ್ ಈ ಹೇಳಿಕೆ ನೀಡಿದ್ದಾರೆ. ಇದು ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದ್ದು, ಕೆಲವು ಸಚಿವರು ಮತ್ತು ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆಯೇ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕೆಲ ದಿನಗಳ ಹಿಂದೆ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಅವರು ಮಾಡಿದ್ದ ಒಂದು ಟ್ವೀಟ್ ಬಿಜೆಪಿಯಲ್ಲಿ ಅನೇಕ ಹಿರಿಯರಿಗೆ ತಲೆ ನೋವು ಸೃಷ್ಟಿಸಿತ್ತು. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅನೇಕ ಹಿರಿಯರು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ಕೊಡದೆ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಟಿಕೆಟ್ ಹಂಚಿಕೆ ಮಾಡಬೇಕೆಂದು ಲೆಹರ್ ಸಿಂಗ್ ಪ್ರತಿಪಾದಿಸಿದ್ದರು.
ಇದಕ್ಕೆ ಪುಷ್ಟಿ ನೀಡುವಂತೆ ಸಂತೋಷ್ ಕೂಡ ಟಿಕೆಟ್ ಬಗ್ಗೆ ಚಿಂತೆ ಬೇಡ ಎಂದಿರುವುದು ಐದಾರು ಬಾರಿ ಗೆದ್ದಿರುವವರಿಗೆ ಟಿಕೆಟ್ ಖಾತ್ರಿ ಇಲ್ಲ ಎಂಬ ಗುಸುಗುಸು ಹಬ್ಬುವಂತಾಗಿದೆ.
Related Articles
ಸತತವಾಗಿ ಆರು ಬಾರಿ, ಐದು ಬಾರಿ, ನಾಲ್ಕು ಬಾರಿ ಗೆದ್ದಿರುವವರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಅಂದರೆ ಎರಡು ಮತ್ತು 3ನೇ ಹಂತದ ಕಾರ್ಯಕರ್ತರನ್ನು ಕಣಕ್ಕಿಳಿಸಬೇಕೆಂಬ ಬೇಡಿಕೆ ಹೆಚ್ಚಾಗುತ್ತಲೇ ಇದೆ.
ಇದನ್ನೂ ಓದಿ:ಒಂದೇ ಓವರ್ ನಲ್ಲಿ 7 ಸಿಕ್ಸರ್ ಹೊಡೆದ ಋತುರಾಜ್ ಗಾಯಕ್ವಾಡ್: ದ್ವಿಶತಕದ ಸಾಧನೆ
ಈ ಹಿಂದೆ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಬಹುತೇಕ ಹಾಲಿ ಎಲ್ಲ ಸದಸ್ಯರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಪರಿಣಾಮ ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿದಿತ್ತು. ಈ ಪ್ರಯೋಗವನ್ನು ಕರ್ನಾಟಕದಲ್ಲೂ ಅನುಷ್ಠಾನ ಮಾಡಬೇಕೆಂದು ಬಿಜೆಪಿಯ ಒಂದು ಗುಂಪು ಬೇಡಿಕೆಯನ್ನು ಮುಂದಿಟ್ಟಿದೆ.
ಹಾಗೇನಾದರೂ ವರಿಷ್ಠರು ನಿರ್ಧಾರ ತೆಗೆದುಕೊಂಡರೆ ಅವೇಶನ ನಡೆಯುವ ವೇಳೆ ಮೊದಲ ಸಾಲಿನಲ್ಲಿ ಕೂರುವ ಬಹುತೇಕ ನಾಯಕರಿಗೆ ಮೊದಲನೇ ಮತ್ತು 2ನೇ ಸಾಲಿನಲ್ಲಿ ಕೂರುವವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.
ಒಂದಿಷ್ಟು ಹಳಬರಿಗೆ ಟಿಕೆಟ್ ಕೈ ತಪ್ಪಿಸಲು ದೆಹಲಿಯ ಪ್ರಭಾವಿ ನಾಯಕರು ಕೂಡ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಡಳಿತ ವಿರೋಧಿ ಅಲೆಯನ್ನು ಮೆಟ್ಟಬೇಕಾದರೆ ಹಳಬರಿಗೆ ಕೋಕ್ ನೀಡುವುದು ಅನಿವಾರ್ಯ ಎಂಬ ಮಾತು ಕೇಳಿಬರುತ್ತಿದೆ.
ಪ್ರತಿ ಚುನಾವಣೆಯಲ್ಲೂ ಹೊಸತನವನ್ನೇ ಪ್ರಯೋಗ ಮಾಡುವ ಬಿಜೆಪಿ ಕರ್ನಾಟಕದಲ್ಲಿ ಯಾವ ಮಾದರಿ ಅನುಸರಿಸುತ್ತದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.