Advertisement

ದಾವಣಗೆರೆಯಲ್ಲಿಂದು ವಿಜಯಸಂಕಲ್ಪ ಯಾತ್ರೆ ಸಮಾರೋಪ

08:44 PM Mar 24, 2023 | Team Udayavani |

ದಾವಣಗೆರೆ: ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಭದ್ರಕೋಟೆ, ರಾಜಕೀಯ ಪಕ್ಷಗಳ ಅದೃಷ್ಟದ ಊರು, ಬೆಣ್ಣೆ ದೋಸೆ, ಖಾರಾ-ಮಂಡಕ್ಕಿ ಹೆಸರುವಾಸಿ ದಾವಣಗೆರೆ ಮಾ.25ರಂದು ನಡೆಯುವ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಮಹಾಸಂಗಮಕ್ಕೆ ಸಾಕ್ಷಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಆಗಮನ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

Advertisement

ನಗರದ ಹೊರ ಭಾಗದಲ್ಲಿರುವ ಜಿಎಂಐಟಿ ಪಕ್ಕದ 400 ಎಕರೆ ಜಾಗದಲ್ಲಿ 1000/600 ಅಡಿ ಸುತ್ತಳತೆಯ ಬೃಹತ್‌ ಪೆಂಡಾಲ್‌, ಪ್ರಮುಖ ವೇದಿಕೆ ಒಳಗೊಂಡಂತೆ ಇನ್ನೆರಡು ಸಮಾನಾಂತರ ವೇದಿಕೆ ಸಿದ್ಧಪಡಿಸಲಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ 100 ಜನರಿಗಾಗಿ ಮುಖ್ಯ ವೇದಿಕೆ, ಇತರೆ ಎರಡು ವೇದಿಕೆಯಲ್ಲಿ ಶಾಸಕರು, ಪದಾಧಿಕಾರಿಗಳು, ಮಾಜಿ ಶಾಸಕರು, 39 ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷರಿಗೆ ವ್ಯವಸ್ಥೆ ಮಾಡಲಾಗಿದೆ.

ಬೃಹತ್‌ ಪೆಂಡಾಲ್‌ನಲ್ಲಿ 2 ಲಕ್ಷಕ್ಕೂ ಅಧಿಕ ಆಸನ, 400 ಊಟದ ಕೌಂಟರ್‌, ನೀರು, ಮಜ್ಜಿಗೆ ವಿತರಣೆಗೆ 25ಕ್ಕೂ ಹೆಚ್ಚು ಮಳಿಗೆ, 500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಪಾರ್ಕಿಂಗ್‌ ವ್ಯವಸ್ಥೆ, ವೇದಿಕೆ ಸನಿಹದಲ್ಲೇ ಹೆಲಿಪ್ಯಾಡ್‌ಗಳ ನಿರ್ಮಾಣ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜತೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್‌, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎ. ನಾರಾಯಣಸ್ವಾಮಿ, ಭಗವಂತ್‌ ಖೂಬಾ, ಶೋಭಾ ಕರಂದ್ಲಾಜೆ, ರಾಜ್ಯ ಸಚಿವರು, ಪ್ರಮುಖ ನಾಯಕರು ಭಾಗವಹಿಸುವರು.

ಜನರ ಮಧ್ಯೆ ಮೋದಿ ಸಂಚಾರ
ಪ್ರಧಾನಿ ನರೇಂದ್ರ ಮೋದಿ ಸ್ವತಃ ಜನರ ಅತಿ ಸನಿಹಕ್ಕೆ ಬರಲು ಅಪೇಕ್ಷಿಸಿರುವುದರಿಂದ ಇದೇ ಮೊದಲ ಬಾರಿಗೆ ಪೆಂಡಾಲ್‌ನಲ್ಲೇ ರೋಡ್‌ ಶೋ ವ್ಯವಸ್ಥೆ ಮಾಡಲಾಗಿದೆ. ಮೂರು ವೇದಿಕೆಗಳ ಮಧ್ಯದಲ್ಲಿ ಮೋದಿ ಜನರ ಅತೀ ಸಮೀಪವೇ ತೆರೆದ ವಾಹನದಲ್ಲಿ ಆಗಮಿಸಲಿದ್ದಾರೆ. 30 ಅಡಿಗೂ ಹೆಚ್ಚು ಅಗಲದ ಸುವ್ಯವಸ್ಥಿತ ತಾತ್ಕಾಲಿಕ ರಸ್ತೆ ನಿರ್ಮಾಣದ ಕಾರ್ಯ ನಡೆದಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಪೆಂಡಾಲ್‌ ಒಳಗಡೆಯೇ ರೋಡ್‌ ಶೋ ನಡೆಸಲಾಗುತ್ತಿದೆ.

Advertisement

ಸಿದ್ದರಾಮೋತ್ಸವಕ್ಕೆ ಟಕ್ಕರ್‌
ಕಾಂಗ್ರೆಸ್‌ ನಾಯಕರೆಲ್ಲ ಸೇರಿ ಇದೇ ನೆಲದಲ್ಲಿ ಕಳೆದ ವರ್ಷ ಆ.3ರಂದು ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನೋತ್ಸವ ನಿಮಿತ್ತ ಸಿದ್ದರಾಮೋತ್ಸವ ಆಚರಿಸಿದ್ದರು. ಇದು ರಾಜ್ಯದಲ್ಲಿ ತಕ್ಕ ಮಟ್ಟಿಗೆ ಕಾಂಗ್ರೆಸ್‌ ಅಲೆ ಸೃಷ್ಟಿಗೆ ಕಾರಣವಾಗಿತ್ತು. ಈಗ ಇದೇ ನೆಲದಲ್ಲಿ ನಿಂತು ಮಹಾಸಂಗಮದ ಮೂಲಕ ಪ್ರಧಾನಿ ಮೋದಿ ರಾಜ್ಯದಲ್ಲಿ ಕಮಲ ತರಂಗಗಳನ್ನೆಬ್ಬಿಸಲು ಸಜ್ಜಾಗಿದ್ದಾರೆ. ಇದು ರಾಜಕೀಯವಾಗಿ ಕಾಂಗ್ರೆಸ್‌ನ ಸಿದ್ದರಾಮೋತ್ಸವಕ್ಕೆ ಬಿಜೆಪಿ ನೀಡುವ ಠಕ್ಕರ್‌ ಆಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next