Advertisement

BJP ಪ್ರತಿಭಟನೆ ಪ್ರಾಣಿ ಹಿಂಸೆಯ ವಿರುದ್ಧ ಕಟುಕರು ಪ್ರತಿಭಟಿಸಿದಂತೆ: ಸಿದ್ದರಾಮಯ್ಯ

08:03 PM Sep 12, 2024 | Team Udayavani |

ಬೆಂಗಳೂರು: ಮೀಸಲಾತಿ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆಯು ‘ಪ್ರಾಣಿ ಹಿಂಸೆಯ ವಿರುದ್ಧ ಕಟುಕರು ಪ್ರತಿಭಟಿಸಿದಂತೆ’ ಎಂದು ಸಿಎಂ ಸಿದ್ದರಾಮಯ್ಯ ಗುರುವಾರ(ಸೆ12 ) ಕಿಡಿ ಕಾರಿದ್ದಾರೆ.

Advertisement

ಸಿಎಂ ಕಚೇರಿ ಪತ್ರಿಕಾ ಹೇಳಿಕೆಯಲ್ಲಿ ” ರಾಹುಲ್ ಗಾಂಧಿ ಹೇಳಿಕೆಯನ್ನು ಅರ್ಥೈಸುವ ತಿಳುವಳಿಕೆ ಅಥವಾ ಬುದ್ಧಿವಂತಿಕೆ ಬಿಜೆಪಿ ನಾಯಕರಿಗೆ ಇಲ್ಲ. ಶಿಕ್ಷಣ, ಉದ್ಯೋಗ ಮತ್ತು ಸಂಪನ್ಮೂಲಗಳ ಪ್ರವೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಖಚಿತಪಡಿಸುವುದು ಮೀಸಲಾತಿಯ ಪ್ರಾಥಮಿಕ ಉದ್ದೇಶವಾಗಿದೆ. ಇದು ಕೇವಲ ರಾಹುಲ್ ಗಾಂಧಿ ಹೇಳುತ್ತಿರುವ ವಿಷಯವಲ್ಲ. ನಾನು ಕೂಡ ಇದಕ್ಕೆ ಬದ್ಧನಾಗಿದ್ದೇನೆ. ಇದನ್ನು ಮೀಸಲಾತಿ ವಿರೋಧಿ ಹೇಳಿಕೆ ಎಂದು ಹೇಗೆ ಅರ್ಥೈಸಬಹುದು? ಎಂದು ಸಿಎಂ ಪ್ರಶ್ನಿಸಿದರು.

“ಕರ್ನಾಟಕದಲ್ಲಿ, ಬಿಜೆಪಿ ಸ್ಥಳೀಯ ಸಂಸ್ಥೆಗಳ ಮೀಸಲಾತಿಯನ್ನು ವಿರೋಧಿಸಿತು, ದಿವಂಗತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಹ ಸಲ್ಲಿಸಿತು. ದೇಶದಾದ್ಯಂತ ಬಿಜೆಪಿ ಮೀಸಲಾತಿ ನೀತಿಗಳ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ ಎಂದು ಸಿಎಂ ಕಿಡಿ ಕಾರಿದ್ದಾರೆ.

‘ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರು ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿದಾಗ, ಬಿಜೆಪಿಯು ‘ಕಮಂಡಲ’ ಚಳವಳಿಯನ್ನು ಪ್ರಾರಂಭಿಸಿತು, ಜನರ ಮನಸ್ಸಿನಲ್ಲಿ ಧರ್ಮದ ಅಫೀಮನ್ನು ತುಂಬಲು ಪ್ರಯತ್ನಿಸಿತು’ ಎಂದು ಸಿಎಂ ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next