Advertisement

ಡಿಎಂಕೆ ಮಾಜಿ ಕೌನ್ಸಿಲರ್ ನಿಂದ ಹಲ್ಲೆ: ಬಿಜೆಪಿ ಕಾರ್ಯಕರ್ತ ಸಾವು

07:18 PM Dec 31, 2021 | Team Udayavani |

ಈರೋಡ್ : ಡಿಎಂಕೆಗೆ ಸೇರಿದ ಮಾಜಿ ಕೌನ್ಸಿಲರ್ ಒಬ್ಬ ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು,ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರ ಪ್ರಕಾರ, ವೃತ್ತಿಯಲ್ಲಿ ಟೈಲರ್ ಆಗಿದ್ದ ವಡಿವೇಲ್ (50) ಡಿಎಂಕೆ ತೊರೆದು ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ್ದರು. ಇದು ಮಾಜಿ ಪಾಲಿಕೆ ಸದಸ್ಯ ಈಶ್ವರಮೂರ್ತಿ ಅವರನ್ನು ಕೆರಳಿಸಿದೆ ಎನ್ನಲಾಗಿದೆ. ಇಬ್ಬರ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ವಡಿವೇಲ್ ತನ್ನ ಸ್ನೇಹಿತರೊಂದಿಗೆ ಗುರುವಾರ ಇಲ್ಲಿನ ತಾಳವುಮಲೈನಲ್ಲಿ ನಿಂತಿದ್ದಾಗ ಈಶ್ವರಮೂರ್ತಿ ವಾಗ್ವಾದಕ್ಕಿಳಿದು ವಡಿವೇಲ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ವಡಿವೇಲ್‌ಗೆ ಗಾಯಗಳಾಗಿ ಕೆಳಗೆ ಬಿದ್ದಿದ್ದಾರೆ.  ಸ್ನೇಹಿತರು ವಡಿವೇಲರನ್ನು ರಕ್ಷಿಸಿ ನೀರು ಕೊಟ್ಟು ಮನೆಗೆ ಕರೆದೊಯ್ದಿದ್ದರು. ಮನೆಯಲ್ಲಿ ಮಲಗಿದ್ದವರು ಇಂದು ಬೆಳಗ್ಗೆ ಶವವಾಗಿ ಬಿದ್ದಿರುವುದನ್ನು ಅವರ ಪತ್ನಿ ಕಂಡಿದ್ದಾರೆ.

ಅವರು ಪೊಲೀಸರಿಗೆ ದೂರು ನೀಡಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ. ಸಾವಿನ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು ಈಶ್ವರಮೂರ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಮರಣೋತ್ತರ ಪರೀಕ್ಷೆ ವರದಿ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next