Advertisement

 ಸಿದ್ದರಾಮಯ್ಯ ಕಾಲದ ಶಿಕ್ಷಕರ ಅಕ್ರಮ ನೇಮಕಕ್ಕೆ ಮರುಜೀವ ಕೊಟ್ಟ ಬಿಜೆಪಿ

11:00 AM Oct 03, 2022 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣದ ತನಿಖೆಯನ್ನು ರಾಜ್ಯ ಸರಕಾರ ಈಗ ಚುರುಕುಗೊಳಿಸಿದ್ದು, ಅಕ್ರಮವಾಗಿ ಉದ್ಯೋಗ ಪಡೆದವರ ಸಂಖ್ಯೆ 12 ಅಲ್ಲ 80 ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

Advertisement

ಆರಂಭದಲ್ಲಿ ಎಂಟು ಜನರು ಈ ರೀತಿ ಉದ್ಯೋಗ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಬಳಿಕ ಶಿಕ್ಷಣ ಇಲಾಖೆಯಿಂದ 12 ಜನರು ಎಂಬ ಮಾಹಿತಿ ಹೊರಬಿತ್ತು. ಈಗ ಸಿಐಡಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅಕ್ರಮವಾಗಿ ಶಿಕ್ಷಕರ ಹುದ್ದೆ ಗಿಟ್ಟಿಸಿದವರ ಸಂಖ್ಯೆ 80 ಕ್ಕೂ ಹೆಚ್ಚು ಎಂಬ ಮಾಹಿತಿ ಲಭ್ಯವಾಗುತ್ತಿದೆ.

ಈ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ದೊಡ್ಡಮಟ್ಟದ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಈ ಸಂಖ್ಯೆ 100 ದಾಟುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಏನಿದು ಹಗರಣ?:

2014-15 ರಲ್ಲಿ ನಡೆದ ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಅಂದಿನ ಶಿಕ್ಷಣ ಇಲಾಖೆ ಅಧಿಕಾರಿಗಳೇ ನೇರವಾಗಿ ಭಾಗಿಯಾಗಿದ್ದಾರೆ. ರಾಜಕೀಯ ಒತ್ತಡ ಕಾರಣಕ್ಕೆ ಈ ರೀತಿ ನೇಮಕ ನಡೆದಿದೆ ಎಂಬ ಆರೋಪ ವ್ಯಕ್ತವಾಗಿತ್ತು.

Advertisement

ಮುಖ್ಯ ಪಟ್ಟಿಯನ್ನ ಬಿಟ್ಟು ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಅಕ್ರಮವಾಗಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು.

ಇದನ್ನೂ ಓದಿ:ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: ಅವಶೇಷಗಳಡಿ ಸಿಲುಕಿದ ಕಾರ್ಮಿಕರು, ರಕ್ಷಣಾ ತಂಡ ದೌಡು

ಸಿದ್ದರಾಮಯ್ಯ ಸರಕಾರದ ಕೊನೆ ಅವಧಿಯಲ್ಲಿ ಅಂದರೆ 2017-18 ರಲ್ಲಿ ನೇಮಕ ‌ಪ್ರಕ್ರಿಯೆ ಮುಕ್ತಾಯಗೊಂಡಿತ್ತು. ಆಗ ಅಕ್ರಮವಾಗಿ ನೇಮಕವಾದ ಶಿಕ್ಷಕರಿಗೆ ಆದೇಶ ಪತ್ರ ನೀಡಲಾಗಿತ್ತು. ಮುಖ್ಯ ಪಟ್ಟಿಯಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆಯಾಗಿದ್ದು ಒಬ್ಬರ ಹೆಸರು. ಆದರೆ ಹೆಚ್ಚುವರಿ ಪಟ್ಟಿಯಲ್ಲಿ ನೇಮಕವಾಗಿದ್ದು ಇನ್ನೊಬ್ಬರ ಹೆಸರು ಇದ್ದದ್ದು ಅನುಮಾನಕ್ಕೆ ಕಾರಣವಾಗಿತ್ತು. ನೇಮಕಾತಿಗೆ ನಿಗದಿ ಮಾಡಿದ್ದ ಕಟಾಫ್ ಅಂಕವನ್ನೇ ಕಡಿತ ಮಾಡಿ ಶಿಕ್ಷಕರ ನೇಮಕಾತಿ ಮಾಡಲಾಗಿತ್ತು. ಹೆಚ್ಚು ಅಂಕ ಬಂದಿರುವ ಅಭ್ಯರ್ಥಿ ಬದಲಾಗಿ ಕಡಿಮೆ ಅಂಕ ಬಂದಿರುವ ಅಭ್ಯರ್ಥಿಗಳ ಹೆಸರು ಮೆರಿಟ್ ಲಿಸ್ಟ್ ನಲ್ಲಿ ಸೇರಿಸಿ ಆಯ್ಕೆ ಮಾಡಲಾಗಿತ್ತು ಎಂಬುದು ಪ್ರಧಾನ ಆರೋಪವಾಗಿದ್ದು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲೇ ಈ ವಿಚಾರವನ್ನು ಅನಾವರಣಗೊಳಿಸಿದ್ದರು.

ಪರೀಕ್ಷೆ ಬರೆಯದೇ ಹೋದ ಅಭ್ಯರ್ಥಿಗೂ ಹೆಚ್ಚುವರಿ ಪಟ್ಟಿಯಲ್ಲಿ ಕೆಲಸ‌ ನೀಡಿದ್ದ ಅಂದಿನ ಸರ್ಕಾರ ಸಮಾಜಕ್ಕೆ ದೊಡ್ಡ ದ್ರೋಹ ಮಾಡಿದೆ ಎಂದು ಬಿಜೆಪಿ ಈಗ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next