Advertisement

ಭಟ್ಕಳ: ಉದಯಪುರ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

04:55 PM Jul 04, 2022 | Team Udayavani |

ಭಟ್ಕಳ: ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯಲಾಲ್ ಅವರನ್ನು ಹತ್ಯೆ ಮಾಡಿದ್ದನ್ನು ಖಂಡಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ಭಟ್ಕಳ ಮಂಡಳದ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳು,ಪ್ರಧಾನ ಮಂತ್ರಿಗಳು,ಕೇಂದ್ರ ಗ್ರಹ ಸಚಿವರು ಹಾಗೂ ರಾಜಸ್ಥಾನದ ರಾಜ್ಯಪಾಲರಿಗೆ ಬರೆದ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ. ಮಂಡಳದ ಅಧ್ಯಕ್ಷ ಸುಬ್ರಾಯ ದೇವಡಿಗ ಅವರು ಜಗತ್ತಿನ ಎಲ್ಲಾ ದೇಶಗಳಲ್ಲಿನ ಬಹುಸಂಖ್ಯಾತರು ಪ್ರಥಮ ದರ್ಜೆ ಪ್ರಜೆಗಳಾದರೆ ನಮ್ಮ ಭಾರತದಲ್ಲಿ ಅದು ನಮ್ಮಲ್ಲಿನ ಬಿಕ್ಕಟ್ಟಿನಿಂದಾಗಿ ಸಾಧ್ಯವಾಗಿಲ್ಲ. ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಕುರಿತು ತೀವ್ರ ವಾಗ್ದಾಳಿ ನಡೆಸಿದ ಅವರು ಈ ಹಿಂದೆ ಕಲ್ಲಂಗಡಿ ಹಣ್ಣನ್ನು ಒಡೆದಾಗ ಸರಣಿ ಟ್ವೀಟ್ ಮಾಡಿದ ಸಿದ್ಧರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಈಗೆಲ್ಲಿದ್ದಾರೆ, ತಮ್ಮ ಈ ನೆಡೆಯಿಂದಾಗಿಯೇ ದೇಶದಲ್ಲಿ ಒಂದರ ನಂತರ ಒಂದು ಘಟನೆಗಳಾಗುತ್ತಿವೆ ಎಂದೂ ದೂರಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶಿವಾನಿ ಶಾಂತಾರಾಮ್ ಮಾತನಾಡಿ ಓರ್ವ ಕನ್ನಯ್ಯಲಾಲ್‍ನ್ನು ಕೊಲೆ ಮಾಡಿದ ತಕ್ಷಣ ಉಳಿದವರೆಲ್ಲರೂ ಭಯಗೊಳ್ಳುತ್ತಾರೆಂದು ಭಾವಿಸದರೆ ಅದು ನಿಮ್ಮ ಮತಾಂಧತೆ. ನಿಮ್ಮ ಜೆಹಾದಿ ಮನಸ್ಥಿತಿಯು ಒಂದಲ್ಲ ಒಂದು ದಿನ ನಶಿಸಿ ಹೋಗಲಿದೆ, ಧರ್ಮವನ್ನು ಕಾಪಾಡಲು ಭಗವಂತ ಎಲ್ಲರಿಗೂ ಶಕ್ತಿ ಕೊಡುತ್ತಾನೆ ಎಂದರು.

ಶಿವಾಜಿ ಮಹಾರಾಜರ ಇತಿಹಾಸವನ್ನು ನೆನಪಿಸಿದ ಅವರು ಶಿವಾಜಿ ಮಹಾರಾಜದ ತಾಯಿ ನೀಡಿದ ಸಂಸ್ಕಾರದಂತೆ ಹಿಂದೂ ಮಾತೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಟ್ಟು ಧರ್ಮ ಕಾಪಾಡುತ್ತಾರೆ ಎಂದು ಗುಡುಗಿದರು.

ಕಳೆದ ಎಂಟು ವರ್ಷಗಳಿಂದ ದೇಶದಲ್ಲಿನ ಹಿಂದೂಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿ ಎಂದು ಎಚ್ಚರಿಕೆಯನ್ನು ನೀಡಿದರು. ಕಾಂಗ್ರೆಸ್ ಕುರಿತು ಕಟು ಮಾತುಗಳಲ್ಲಿ ಟೀಕಿಸಿದ ಅವರು ಕಾಂಗ್ರೆಸ್‍ನಲ್ಲಿರುವ ಹಿಂದೂಗಳೇ ನೀವು ಜಾಗೃತರಾಗದೇ ಇದ್ದಲ್ಲಿ ಮುಂದೊಂದು ದಿನ ನೀವು ಬೆಲೆ ತೆರಬೇಕಾಗುತ್ತದೆ. ಜೆಹಾದಿ ಮನಸ್ಥಿತಿಯವರು ನಿಮ್ಮ ಮನೆ ಬಾಗಿಲನ್ನೂ ತಟ್ಟಲಿದ್ದಾರೆ ಎಂದರು.

Advertisement

ವಿಶ್ವ ಹಿಂದೂ ಪರಿಷತ್ ಪ್ರಮುಖ ಶಂಕರ ಶೆಟ್ಟಿ, ಹಿಂದೂ ಜಾಗರಣಾ ವೇದಿಕೆ ಪ್ರಮುಖ ರಾಮಕೃಷ್ಣ ನಾಯ್ಕ, ಬಿಜೆಪಿ ಸೈನಿಕ ಪ್ರಕೋಷ್ಟದ ಶ್ರೀಕಾಂತ ನಾಯ್ಕ ಮಾತನಾಡಿದರು.

ಮನವಿಯನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಪಡೆದುಕೊಂಡು ಮೇಲಧಿಕಾರಿಗಳ ಮೂಲಕ ಕಳುಹಿಸುವ ಭರವಸೆಯನ್ನು ನೀಡಿದರು.

ಇದಕ್ಕೂ ಪೂರ್ವ ಪ್ರವಾಸಿ ಬಂಗಲೆಯಲ್ಲಿ ಸೇರಿದ ಕಾರ್ಯಕರ್ತರು ಮೆರವಣಿಗೆಯ ಮೂಲಕ ತಾಲೂಕಾ ಆಡಳಿತ ಸೌಧವನ್ನು ತಲುಪಿದರು. ಪ್ರತಿಭಟನೆಯಲ್ಲಿ ಬಿಜೆಪಿ.ಕಾರ್ಯದರ್ಶಿ ಮೋಹನ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ರಾಘು ನಾಯ್ಕ, ರವಿ ನಾಯ್ಕ ಜಾಲಿ, ಸುರೇಶ ನಾಯ್ಕ, ರಾಜೇಶ ನಾಯ್ಕ, ಶ್ರೇಯಾ ಮಹಾಲೆ, ಸುರೇಂದ್ರ ಭಟ್ಕಳ, ದೀಪಕ್ ನಾಯ್ಕ, ದಿನೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next