Advertisement

ಬಿಜೆಪಿ ಬಲವರ್ಧನೆಗೆ ಎಲ್ಲರೂ ಕೈಜೋಡಿಸಿ

03:55 PM Nov 07, 2022 | Team Udayavani |

ಚಿಕ್ಕಬಳ್ಳಾಪುರ: ಬಿಜೆಪಿ ಮಹಾ ಸಮುದ್ರದಂತೆ, ಯಾರೇ ಪಕ್ಷಕ್ಕೆ ಬಂದರೂ ಆತ್ಮೀಯವಾಗಿ ಬರಮಾಡಿಕೊಳ್ಳಬೇಕು. ಸಮಾನ ಗೌರವ ನೀಡುವ ಮೂಲಕ ಪಕ್ಷ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Advertisement

ತಾಲೂಕಿನ ಗೊಲ್ಲಹಳ್ಳಿ ಗೇಟ್‌ ಬಳಿ ಭಾನುವಾರ ನಡೆದ ಸ್ಥಳೀಯ ಮುಖಂಡರ ಸಭೆಯಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ನಲ್ಲಗುಟ್ಟಪಾಳ್ಯ ಗ್ರಾಪಂ ಸದಸ್ಯೆ ಕಾಂತಮ್ಮ ತಿಪ್ಪಾರೆಡ್ಡಿ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಹೊಸಬರು ಬಂದ ಕಾರಣಕ್ಕೆ ಹಳಬರು ಎದೆಗುಂದಬೇಕಿಲ್ಲ. ಪಕ್ಷದಲ್ಲಿ ಹಿರಿಯ, ಕಿರಿಯ ಎಂಬ ಬೇಧವಿಲ್ಲ. ನದಿಯಲ್ಲಿ ಹಳೇ ನೀರು, ಹೊಸ ನೀರು ಬೆರೆತು ಒಟ್ಟಾಗಿ ಹರಿಯುವಂತೆ ವಲಸಿಗ ಮತ್ತು ಮೂಲ ಎಂಬ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಎಲ್ಲರೂ ಬೆರೆತು ನಡೆಯಬೇಕು. ಹರಿಯೋ ನದಿಯಲ್ಲಿ ನೀರೆಲ್ಲ ಒಂದೇ ಎಂಬ ಮಾತಿನಂತೆ ನಾವೆಲ್ಲ ಮುಂದೆ ಸಾಗೋಣ. ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸೋಣ. ಅಭಿವೃದ್ಧಿ ಪಥದಲ್ಲಿ ಕ್ಷೇತ್ರ ಉತ್ತಂಗ ತಲುಪಲು ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.

ಅಂಬೇಡ್ಕರ್‌ ಒಂದು ಜಾತಿಗೆ ಸೀಮಿತರಲ್ಲ: ಪ್ರಧಾನಿ ಮೋದಿ ಮಾತು ಕೇಳಲು ಇದೊಂದು ಸದಾವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ಅಂಬೇಡ್ಕರ್‌ ಅವರು ಒಂದು ಜಾತಿಗೆ ಸೀಮಿತರಲ್ಲ. ಅವರು ಈ ಸಮಾಜ ಮತ್ತು ದೇಶದ ಆಸ್ತಿ. ಅದೇ ರೀತಿಯಲ್ಲಿ ವಾಲ್ಮೀಕಿ ರಚನೆ ಮಾಡಿದ ರಾಮಾಯಣ ಒಂದು ಜಾತಿಗೆ ಸೀಮಿತವಾಗಿಲ್ಲ. ಮಾನವ ಕುಲಕ್ಕೆ ಸಮಾಜ ಸುಧಾರಣೆ ಬಯಸಿದ ಮಹನೀಯರೆಲ್ಲರೂ ಸಮಾಜದ ಆಸ್ತಿ ಎಂಬುದನ್ನು ಮರೆಯಬಾರದು ಎಂದರು.

ವಿಶ್ವ ಮಾನವರಾಗಿ: ಸಾವಿರಾರು ವರ್ಷಗಳ ಹಿಂದೆಯೇ ಇವರು ಸಮಾನತೆ ಸಾರಿದವರು, ಹಾಗಾಗಿಯೇ ಇವರು ಮಹನೀಯರಾಗಿದ್ದಾರೆ. ಇದೇ ಗುಂಪಿಗೆ ಸೇರಿದವರು ಕೆಂಪೇಗೌಡರು. ವಿಶ್ವ ಮಾನವರಾಗಿ ಸಾಯಬೇಕು ಎಂದಿದ್ದಾರೆ ಕುವೆಂಪು. ಸಮಾಜಕ್ಕೆ ನಮ್ಮ ಕೊಡುಗೆ ನೀಡಿದಾಗ ಮಾತ್ರ ನಾವು ವಿಶ್ವ ಮಾನವರಾಗಲು ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು. ನಿಸ್ವಾರ್ಥ ಸೇವೆ ಸಿದ್ಧಾಂತದಡಿ ಕೆರೆಗಳನ್ನು ಕಟ್ಟಿದರು ಕೆಂಪೇಗೌಡರು, ಆ ಕಾಲದಲ್ಲೇ ಪರಿಸರ ಸಂರಕ್ಷಣೆ ಮಾಡಿದವರು ಕೆಂಪೇಗೌಡರು. ಇಂತಹ ಮಹನೀಯರಿಗೆ ರಾಜ್ಯ ಸರ್ಕಾರ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ನಿಗಮದ ನಿರ್ದೇಶಕರಾಗಿ ರಾಜಣ್ಣ: ಕೆಂಪೇಗೌಡರ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನಿಗಮದ ಮೊದಲ ನಿರ್ದೇಶಕರಾಗಿ ಆವುಲಗುರ್ಕಿ ರಾಜಣ್ಣ ನೇಮಕವಾಗಿದ್ದಾರೆ. 56 ವರ್ಷಗಳ ಕಾಲ ಆಡಳಿತ ನಡೆಸಿದವರು ಕೇವಲ ಸ್ವಾರ್ಥಕ್ಕಾಗಿ ಅಧಿಕಾರ ಅನುಭವಿಸಿದರೆ, ಬಿಜೆಪಿ ಸರ್ಕಾರ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ವಿರೋಧ ಪಕ್ಷದವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿರುಚುತ್ತಾರೆ ಎಂದು ಆರೋಪಿಸಿದರು.

Advertisement

ಕಳೆದ 56 ವರ್ಷದಿಂದ ಸುಳ್ಳು ಹೇಳುತ್ತಲೇ ಬಲಹೀನ ವರ್ಗಗಳ ಮತ ಪಡೆದಿದ್ದಾರೆ. ಆದರೆ, ಅವರಿಗೆ ಮೀಸಲಾತಿ ನೀಡಲು ಸಾಧ್ಯವಾಗಲಿಲ್ಲ. 56 ವರ್ಷ ಅಧಿಕಾರ ನಡೆಸಿದವರು ನೀಡದ ಮೀಸಲಾತಿ ಬಿಜೆಪಿ ಸರ್ಕಾರ ನೀಡಿದೆ ಎಂದು ಹೇಳಿದರು.

ಗುರುವಂದನಾ ಕಾರ್ಯಕ್ರಮ: ಮೀಸಲಾತಿಗೆ ಹೋರಾಟ ಮಾಡಿದ ಶ್ರೀಪ್ರಸನ್ನಾನಂದ ಶ್ರೀಗಳಿಗೆ ಜಿಲ್ಲೆಯಲ್ಲಿ ಬೃಹತ್‌ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗುವುದು. ಇದೇ ಕಾರ್ಯಕ್ರಮದಲ್ಲಿ ಸಿಎಂಗೆ ಅಭಿನಂದನೆ ಸಲ್ಲಿಸಲಾಗುವುದು. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಮೀಸಲಾತಿ ಸರಿಪಡಿಸಲು ಸಿಎಂ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗವನ್ನು ಕೈಗಾರಿಕಾ ಪ್ರದೇಶ ಮಾಡಲಾಗುವುದು. ಇದಕ್ಕೆ ಅಗತ್ಯ ಭೂಮಿ ವಶಕ್ಕೆ ಪಡೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌, ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದರೆಡ್ಡಿ (ಬಾಬು), ಮುನಿರಾಜು, ಜೆ.ಕೆ.ರೆಡ್ಡಿ, ಆವುಲಕೊಂಡರಾಯಪ್ಪ, ರಾಜಣ್ಣ, ಮಿಲ್ಟನ್‌ ವೆಂಕಟೇಶ್‌, ರಾಮಣ್ಣ, ಮೂರ್ತಿ, ಜಾಲಪ್ಪ, ನರಸಿಂಹಯ್ಯ, ವೆಂಕಟ ರಮಣಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next