Advertisement

ಸಂಘರ್ಷ ತ್ಯಜಿಸಿ ಸ್ನೇಹಯಾತ್ರೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ಕರೆ

02:14 AM Jul 04, 2022 | Team Udayavani |

ಹೈದರಾಬಾದ್‌: ಸಂಘರ್ಷವಲ್ಲ, ಇದು ಸ್ನೇಹ ಯಾತ್ರೆಯ ಸಮಯ. ದೇಶಾದ್ಯಂತ ಸ್ನೇಹ ಯಾತ್ರೆಗಳನ್ನು ಆಯೋಜಿಸಿ ಜನರೊಂದಿಗೆ ಸಂಪರ್ಕ ಹೆಚ್ಚಿಸಿಕೊಳ್ಳಿ…

Advertisement

ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯ ಕಾರಿಣಿಯ ಕೊನೆಯ ದಿನವಾದ ರವಿವಾರ ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳಿಗೆ ಪ್ರಧಾನಿ ಮೋದಿ ಅವರು ನೀಡಿರುವ ಕರೆಯಿದು.

ಈಗ ನಾವು ವಿಪಕ್ಷ ಸ್ಥಾನದಲ್ಲಿಲ್ಲ, ಆಡಳಿತ ಪಕ್ಷವಾಗಿದ್ದೇವೆ. ಹಾಗಾಗಿ ಇದು “ಸಂಘರ್ಷ ಯಾತ್ರೆ’ ನಡೆಸುವ ಸಮಯವಲ್ಲ, ಬದಲಾಗಿ ಈಗ ಸ್ನೇಹಯಾತ್ರೆ ನಡೆಸಿ ಸಮಾಜದ ಎಲ್ಲ ವರ್ಗ ಗಳನ್ನೂ ತಲುಪಬೇಕಾಗಿದೆ ಎಂದು ಮೋದಿ ಸಲಹೆ ನೀಡಿದ್ದಾರೆ.

ನಾವು ದೀರ್ಘ‌ಕಾಲ ವಿಪಕ್ಷ ಸ್ಥಾನದಲ್ಲಿದ್ದೆವು. ಹೋರಾಟ ಎನ್ನುವುದು ನಮ್ಮ ಸ್ವಭಾವದಲ್ಲೇ ಬಂದು ಬಿಟ್ಟಿದೆ. ಈಗ ಜನರು ನಮ್ಮ ಮೇಲೆ ವಿಶ್ವಾಸ ಇರಿಸಿದ್ದಾರೆ. ಅದನ್ನು ಉಳಿಸಿ ಕೊಂಡು ಮುಂದಡಿ ಇರಿಸಬೇಕು. ಇನ್ನು ನಮ್ಮ ಪ್ರಯತ್ನ ವೇನಿದ್ದರೂ ಜನರೊಂದಿಗೆ ಸಂಪರ್ಕ, ಸೇವೆ, ಸಮತೋಲನ, ಸಕಾರಾತ್ಮಕತೆ ಮತ್ತು ಸಮನ್ವಯವನ್ನು ಸಾಧಿಸುವುದು. ಈ ನಿಟ್ಟಿನಲ್ಲಿ ಸ್ನೇಹಯಾತ್ರೆ ಕೈಗೊಳ್ಳುವ ಕಾರ್ಯವನ್ನು ನಾವು ಮಾಡಬೇಕು ಎಂದು ಮೋದಿ ಹೇಳಿದ್ದಾರೆ. ಆದರೆ ಈ ಯಾತ್ರೆಯ ಕುರಿತು ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.

ಹಿಂದೂಗಳು ಮಾತ್ರವಲ್ಲದೆ ಇತರ ಸಮುದಾಯಗಳಲ್ಲಿ ಇರುವ ಬಡ, ತುಳಿತಕ್ಕೆ ಒಳಗಾದ ವರ್ಗಗಳನ್ನು ತಲುಪ ಬೇಕು, ಅವರಿಗಾಗಿ ಕೆಲಸ ಮಾಡಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ಉ.ಪ್ರದೇಶದ ಅಜಂಗಢ ಮತ್ತು ರಾಂಪುರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಈ ಮಾತುಗಳು ಮಹತ್ವ ಪಡೆದಿವೆ. ಇವೆರಡೂ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಾಗಿದ್ದು, ಬಿಜೆಪಿಯ ಗೆಲುವಿನಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸಿವೆ ಎನ್ನಲಾಗಿದೆ. ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದಿರುವ ಪಸ್ಮಂದಾ ಮುಸ್ಲಿಮರಂಥ ಸಮುದಾಯಗಳನ್ನು ಕೂಡ ತಲುಪಬೇಕು ಎನ್ನುವ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

Advertisement

ಕನ್ಹಯ್ಯಗೆ ಶ್ರದ್ಧಾಂಜಲಿ
ಕಾರ್ಯಕಾರಿಣಿಯ ವೇಳೆ ರಾಜಸ್ಥಾನದ ಉದಯಪುರದಲ್ಲಿ ಧರ್ಮಾಂಧರಿಂದ ಹತ್ಯೆಗೀಡಾದ ಟೈಲರ್‌ ಕನ್ಹಯ್ಯಲಾಲ್‌ ಮತ್ತು ಇತ್ತೀಚೆಗೆ ಪಂಜಾಬ್‌ನಲ್ಲಿ ಕೊಲೆಗೀಡಾದ ಗಾಯಕ ಸಿಧು ಮೂಸೆವಾಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅವನತಿಯತ್ತ ಸಾಗಿದ ಪಕ್ಷಗಳ ತಪ್ಪಿನಿಂದ ಕಲಿತುಕೊಳ್ಳಿ
ದೇಶವು ಕುಟುಂಬ ರಾಜಕಾರಣ ದಿಂದ ಬೇಸತ್ತಿದೆ. ಅಂಥ ಪಕ್ಷಗಳು ಹೆಚ್ಚು ಕಾಲ ಬದುಕಲಾರವು. ಹಲವು ದಶಕಗಳ ಕಾಲ ಅಧಿಕಾರ ದಲ್ಲಿದ್ದ ಕೆಲವು ಪಕ್ಷಗಳು ಈಗ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಅವನತಿಯತ್ತ ಸಾಗುತ್ತಿರುವ ಪಕ್ಷಗಳನ್ನು ನಾವು ನೋಡುತ್ತಿದ್ದೇವೆ. ನಾವು ಆ ಪಕ್ಷಗಳನ್ನು ಅಪಹಾಸ್ಯ ಮಾಡಬಾರದು. ಬದಲಾಗಿ ಅವರು ಮಾಡಿದ ತಪ್ಪುಗಳಿಂದ ಪಾಠ ಕಲಿತು, ಅಂತಹ ತಪ್ಪು ನಮ್ಮಿಂದ ಆಗದಂತೆ ನೋಡಿಕೊಳ್ಳಬೇಕು ಎಂದು ಯಾವುದೇ ಪಕ್ಷದ ಹೆಸರು ಎತ್ತದೆಯೇ ಪ್ರಧಾನಿ ಮೋದಿ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಭಾಗ್ಯನಗರ ಎಂದ ಮೋದಿ
ಹೈದರಾಬಾದನ್ನು ಪ್ರಧಾನಿ ತಮ್ಮ ಭಾಷಣದಲ್ಲಿ “ಭಾಗ್ಯನಗರ’ ಎಂದು ಕರೆದು ಅಚ್ಚರಿ ಮೂಡಿಸಿದ್ದಾರೆ. ಇದು ನಿಜವಾಗಿಯೂ ಭಾಗ್ಯನಗರ. ಇಲ್ಲಿಂದ ನಮಗೆಲ್ಲರಿಗೂ ಭಾಗ್ಯವಿದೆ. ಸರ್ದಾರ್‌ ಪಟೇಲ್‌ ಅವರು “ಏಕ ಭಾರತ’ ಎಂದು ಪರಿಕಲ್ಪನೆಯನ್ನು ನೀಡಿದ್ದು ಇದೇ ನೆಲದಿಂದ. ಜೆ.ಪಿ. ನಡ್ಡಾ ನೇತೃತ್ವದ ಬಿಜೆಪಿಯು ಈಗ ಇದನ್ನು “ಶ್ರೇಷ್ಠ ಭಾರತ’ವನ್ನಾಗಿ ರೂಪಿಸಬೇಕಿದೆ ಎಂದು ಮೋದಿ ಹೇಳಿರುವುದಾಗಿ ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ತಿಳಿಸಿ
ದ್ದಾರೆ. “ಹೈದರಾಬಾದ್‌ ಹೆಸರನ್ನು ಭಾಗ್ಯನಗರವೆಂದು ಬದಲಾಯಿಸಲಾಗು ವುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್‌, “ಇಲ್ಲಿ ನಮ್ಮ ಸರಕಾರ ರಚನೆ ಯಾದ ಬಳಿಕ ಮುಖ್ಯಮಂತ್ರಿ ಆ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ.

ಮೋದಿ ಮಾತಿನ ಝಲಕ್‌
1 ದೀರ್ಘ‌ಕಾಲ ದೇಶ ಆಳಿರುವ ಪಕ್ಷಗಳು ಈಗ ಅಸ್ತಿತ್ವ ಕ್ಕಾಗಿ ಹೋರಾಡುತ್ತಿವೆ. ಅವುಗಳ ತಪ್ಪುಗಳಿಂದ ನಾವು ಪಾಠ ಕಲಿಯಬೇಕು.
2 ನಾವೇನಿದ್ದರೂ ಪಿ2-ಜಿ2 (ಜನ-ಪರ ಮತ್ತು ಆಡಳಿತ-ಪರ) ಮಂತ್ರವನ್ನಷ್ಟೇ ಪಾಲಿಸಬೇಕು.
3 ನಮ್ಮದು ಓಲೈಕೆಯ ರಾಜಕಾರಣವಾಗಿರದೆ ಸಂತೃಪ್ತಿಯ ರಾಜಕಾರಣವಾಗಿರಬೇಕು.
4 ಇತರ ಸಮುದಾಯಗಳ ವಂಚಿತ – ತುಳಿತಕ್ಕೆ ಒಳಗಾದ ವರ್ಗಗಳಿಗಾಗಿ ಕೆಲಸ ಮಾಡಬೇಕು.
5 ಹೈದರಾಬಾದ್‌ ಎನ್ನುವುದು “ಭಾಗ್ಯನಗರ’. ಈ ನಗರದಿಂದಲೇ ಸರ್ದಾರ್‌ ಪಟೇಲ್‌ ಅವರು “ಏಕ ಭಾರತ’ದ ಪರಿಕಲ್ಪನೆಯನ್ನು ಘೋಷಿಸಿದರು. ಬಿಜೆಪಿ ಅದನ್ನೀಗ “ಶ್ರೇಷ್ಠ ಭಾರತ’ವನ್ನಾಗಿ ರೂಪಿಸಬೇಕು.

ಮುಂದಿನ 30-40 ವರ್ಷಗಳು ಬಿಜೆಪಿಯ ಯುಗವಾಗಿರಲಿವೆ. ಆಂಧ್ರ, ತಮಿಳುನಾಡು, ಕೇರಳ ಮತ್ತು ಒಡಿಶಾಗಳಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಏರಲಿದೆ. ಭಾರತವನ್ನು ಬಿಜೆಪಿಯು “ವಿಶ್ವಗುರು’ವನ್ನಾಗಿ ಬದಲಾಯಿಸಲಿದೆ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next