Advertisement

ಬಿಜೆಪಿ ನಾಯಕರೇ ನಿಜವಾದ ತಾಲಿಬಾನಿಗಳು:ಸಚಿವ ರಾಮಲಿಂಗಾರೆಡ್ಡಿ

07:00 AM Feb 04, 2018 | |

ಬೆಂಗಳೂರು:ಕರ್ನಾಟಕವನ್ನು ತಾಲಿಬಾನ್‌ ಸಂಸ್ಕೃತಿಗೆ ಹೊಲಿಸಿದ ಬಿಜೆಪಿ ನಾಯಕರೇ ನಿಜವಾದ ತಾಲಿಬಾನಿಗಳು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಶನಿವಾರ ಕಾಡುಗೊಂಡನಹಳ್ಳಿ ನೂತನ ಪೊಲೀಸ್‌ ಠಾಣೆ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಕಂಕಣ ತೊಟ್ಟು ಇಲ್ಲ ಸಲ್ಲದ ಆರೋಪ ಮಾಡಿ ಜಾತಿ ಜಾತಿ ನಡುವೆ ಸಂಘರ್ಷ ಮೂಡಿಸುತ್ತಿದ್ದಾರೆ. ಹೀಗಾಗಿ, ಬಿಜೆಪಿಯವರೇ ನಿಜವಾದ ತಾಲಿಬಾನಿಗಳು ಎಂದು ಟೀಕಿಸಿದರು.

ಸಂಸದ ಪ್ರತಾಪ್‌ ಸಿಂಹ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು  ಅಮಿತ್‌ ಶಾ ಹೊಸ ಕೆಲಸ ಕೊಟ್ಟಂತಿದೆ. ಸಂಸದ ಪ್ರತಾಪ್‌ ಸಿಂಹ ಕರ್ನಾಟಕವನ್ನು ತಾಲಿಬಾನ್‌ಗೆ ಹೊಲಿಸಿದ್ದಾರೆ.ರಾಜ್ಯದಲ್ಲಿ ದಂಗೆ ಮಾಡಲು ಅಮಿತ್‌ ಶಾ ಹೇಳಿದ್ದಾರೆಂದು ಸ್ವತಃ ಸಂಸದರೇ ಸಾಮಾಜಿಕ ಜಾಲತಾಲಣಗಳಲ್ಲಿ ಹೇಳಿಕೊಂಡಿದ್ದಾರೆ. ಹುಣಸೂರಿನಲ್ಲಿ ಹನುಮ ಜಯಂತಿಯ ನಾಟಕವಾಡಿ ದಂಗೆ ಎಬ್ಬಿಸುವ ವಿಫ‌ಲ ಯತ್ನ ನಡೆಸಿದರು. ಪ್ರಮಾಣಿಕ ಮತ್ತು ದಕ್ಷ ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿರುವುದು ಇವರ ತಾಲಿಬಾನ್‌ ಸಂಸ್ಕೃತಿ ತೋರಿಸಿಕೊಟ್ಟಿದೆ ಎಂದರು.

ಮಂಗಳೂರು ಚಲೋ, ಬೈಕ್‌ ರ್ಯಾಲಿ ನಡೆಸಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಗಲಭೆ ನಡೆಸುವ ಬಿಜೆಪಿ ಹುನ್ನಾರವನ್ನು ಸರ್ಕಾರ ವಿಫ‌ಲಗೊಳಿಸಿದೆ. ಈ ಎಲ್ಲ ವಿಫ‌ಲ ಯತ್ನಗಳಿಂದ ಪ್ರತಾಪ್‌ ಸಿಂಹ ಹತಾಶರಾಗಿದ್ದಾರೆ. “ಐ ಸಪೋರ್ಟ್‌ ಪ್ರತಾಪ್‌ ಸಿಂಹ’ ಯುವ ಮೋರ್ಚಾ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರತಾಪ್‌ ಸಿಂಹ ಬೆಂಬಲಿಗರು ರಾಜ್ಯದ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬ್ಬವ್ವ ಕುರಿತು ಅವಾಚ್ಯ ಶಬ್ಧಗಳಿಂದ ನಿಂದಿಸಿ ಇವರ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ ಎಂದು ದೂರಿದರು.

ಬೆಂಕಿ ಹಚ್ಚುವುದು, ದಂಗೆ ಎಬ್ಬಿಸುವುದು ನಿಮ್ಮ ಉದ್ಯೋಗ, ಸದಾ ಬೆಂಕಿ ಉಗುಳುವ “ಸಿಂಹ’ಗೆ ಕಾಡೇ ಪ್ರಶಸ್ತವಾದ ತಾಣ ಎಂದು ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು.

Advertisement

ತಿರುಗೇಟು
ಬಿಜೆಪಿ ನಾಯಕರು ಸಂತೋಷ್‌ ಕೊಲೆಯಲ್ಲಿ ರಾಜಕೀಯ ಮಾಡುತ್ತಾರೆ. ಅಸಲಿಗೆ ಸಂತೋಷ್‌ ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ಪರೇಶ್‌ ಮೆಸ್ತಾ ಸಾವಲ್ಲೂ ಬಿಜೆಪಿಯವರು ಇದೇ ರೀತಿ ರಾಜಕೀಯ ಮಾಡಿದ್ದರು. ಶೋಭಾ ಕರಂದ್ಲಾಜೆ ನಮ್ಮ ಪಕ್ಷದ ಕಾರ್ಯಕರ್ತ ಎಂದು ಮರಣೋತ್ತರ ಸದಸ್ಯತ್ವ ಕೊಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯವರು ಚಿಕ್ಕಬಳ್ಳಾಪುರದ ಪರಿವರ್ತನಾ ರ್ಯಾಲಿಯಲ್ಲಿ ಬೆಲ್ಲಿ ಡ್ಯಾನ್ಸ್‌ ಮಾಡುತ್ತಾರೆ. ಇಂತಹ ನಾಯಕರು ವಿರೋಧ ಪಕ್ಷದಲ್ಲೂ ಕೂರಲು ನಾಲಾಯಕ್‌. ಗೌರಿ ಲಂಕೇಶ್‌ ಮೃತಪಟ್ಟಾಗ ಯಡಿಯೂರಪ್ಪ ಸಮೇತ ಯಾರು ಹೋಗಲಿಲ್ಲ. ದಾನಮ್ಮ ಮತ್ತು ಧನ್ಯಶ್ರೀ ಸಾವಿಗೆ ಬೆಲೆ ಇಲ್ವಾ. ಅವರ ಸಾವಿನ ಕುರಿತು ಯಾಕೆ ಪ್ರತಿಭಟನೆ ಮಾಡಲಿಲ್ಲ. ಹರೀಶ್‌ ಪೂಜಾರಿ, ವಿನಾಯಕ್‌ ಬಾಳಿಗ ಕೊಲೆಗೆಲ್ಲ ಪ್ರತಿಭಟನೆ ಮಾಡಲ್ಲ. ಅವರನ್ನು ಕೊಲೆಗೈದವರು ಬಿಜೆಪಿ ಬೆಂಬಲಿಗರೇ. ಅದಕ್ಕೆ ಅವರ ಹತ್ಯೆ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.

ರಾವ್‌ ಯಾರು?
ಬಿಜೆಪಿ ರಾಜ್ಯ  ಉಸ್ತುವಾರಿ ಮುರಳೀಧರ್‌ರಾವ್‌ ಯಾರು? ರಾಜ್ಯದ ಬಗ್ಗೆ ಅವರಿಗೇನು ಗೊತ್ತು. ಕಾಂಗ್ರೆಸ್‌ ಪಿಎಫ್ಐ, ಎಸ್‌ಡಿಪಿಐ ಸಂಘಟನೆ ಜತೆ ಒಳಒಪ್ಪಂದ ಮಾಡಿಕೊಂಡಿರುವ ಬಗ್ಗೆ ಬೆಜೆಪಿ ಸ್ಪಷ್ಟನೆ ನೀಡಲಿ. ಕಾಂಗ್ರೆಸ್‌ ಯಾವ ಪಕ್ಷದೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ ಪರೋಕ್ಷವಾಗಿ ಒವೈಸಿ ಜತೆ ನಿರಂತರ ಸಂಪರ್ಕದಲ್ಲಿದೆ.
– ರಾಮಲಿಂಗಾರೆಡ್ಡಿ

ಅಪರಾಧ ಸಂಖ್ಯೆ ಕಡಿಮೆಯಾಗಿದೆ
ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಪೊಲೀಸ್‌ ಇಲಾಖೆಯಲ್ಲಿ 20ಸಾವಿರಕ್ಕೂ ಅಧಿಕ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೇವೆ. ಅಲ್ಲದೇ 11 ಸಾವಿರ ಪೊಲೀಸ್‌ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದೇವೆ. ಪೊಲೀಸ್‌ ಕಲ್ಯಾಣಕ್ಕಾಗಿ ಸರ್ಕಾರ 2 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next