Advertisement

BJP ತಳಮಟ್ಟದ ನಾಗರಿಕರ ಸಮಸ್ಯೆ ತಿಳಿಯದೆ ದೇಶ ಆಳುತ್ತಿದೆ: ಸಚಿವ ವೆಂಕಟೇಶ್

07:57 PM Mar 30, 2024 | Team Udayavani |

ಹುಣಸೂರು: ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ತಳಮಟ್ಟದ ನಾಗರಿಕರ ಸಮಸ್ಯೆ ತಿಳಿಯದೆ ಧಾರ್ಮಿಕ ಭಾವನಾತ್ಮಕ ವಿಚಾರದಲ್ಲಿ ದೇಶ ಆಳುತ್ತಿದ್ದಾರೆ ಎಂದು ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ವೆಂಕಟೇಶ್ ಹೇಳಿದರು.

Advertisement

ಹುಣಸೂರು ನಗರದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ಮೋದಿ ದೇಶದ ನಾಗರಿಕರ ದುಖಃ ದುಮ್ಮಾನವನ್ನು ತಿಳಿಯುವ ಮನಸ್ಥಿತಿ ಇಲ್ಲದೆ ಆಡಳಿತ ನಡೆಸುತ್ತಿರುವ ಹೈಫೈ ಪ್ರಧಾನಿ. ದೆಹಲಿಯಲ್ಲಿ ಕಳೆದ ಒಂದುವರೆ ವರ್ಷದಿಂದ ಅನ್ನದಾತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಅವರೊಂದಿಗೆ ಮಾತುಕತೆ ನಡೆಸುವ ಮನಸ್ಥಿತಿ ಇಲ್ಲದ ವ್ಯಕ್ತಿಯಿಂದ ಅನ್ನದಾತ ಏನನ್ನು ನಿರೀಕ್ಷಿಸಲು ಸಾಧ್ಯ ಎಂದರು.

ಮೋದಿ ಸರ್ವಾಧಿಕಾರಿ ಧೋರಣೆಯಿಂದಾಗಿ ಸಂವಿಧಾನಾತ್ಮಕವಾಗಿ ನಾಗರಿಕರಿಗೆ ಸಿಕ್ಕ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ತಂತ್ರಗಾರಿಕೆ ನಡೆದಿದೆ. ಮಾದ್ಯಮದವರು ಮೋದಿ ಅವರನ್ನು ಓಲೈಕೆ ಮಾಡುತ್ತಿದ್ದು ನಿಜವಾದ ಪರಿಸ್ಥಿತಿ ಮತದಾರರಿಗೆ ಬಿತ್ತರಿಸುವಲ್ಲಿ ಸೋತ್ತಿದ್ದಾರೆ ಎಂದರು. ಮೋದಿ ವಿರುದ್ಧ ಧ್ವನಿ ಎತ್ತುವವರನ್ನು ಇ.ಡಿ, ಐ.ಟಿ ಇಲಾಖೆ ಚೂ ಬಿಟ್ಟು ಕತ್ತು ಹಿಸುಕುವ ಕೆಲಸ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂವಿಧಾನದಲ್ಲಿ ವ್ಯಕ್ತಿ ಪೂಜೆ ಇಲ್ಲ ಆದರೆ ಬಿಜೆಪಿ ವ್ಯಕ್ತಿ ಪೂಜೆ ಮಾಡುವ ಮೂಲಕ ಸರ್ವಾಧಿಕಾರಿ ಆಡಳಿತಕ್ಕೆ ನಾಂದಿ ಹಾಡಿದೆ ಎಂದರು. ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನದ ಮೇಲೆ ನಂಬಿಕೆ ಇರುವವರಿಗೆ ಅಧಿಕಾರ ಸಿಗಬೇಕು, ಬಿಜೆಪಿ ಜನರ ಪಕ್ಷವಲ್ಲ ಅದು ಕಾರ್ಪೋರೆಟ್ ಪಕ್ಷವಾಗಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಮುಖಂಡ ಯತೀಂದ್ರ ಸಿದ್ದರಾಮಯ್ಯ, ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದು, ಎಸಿ ಕೊಠಡಿಯಲ್ಲಿ ಕುಳಿತವರಿಗೆ ಮತ ನೀಡುವುದರಿಂದ ಶ್ರೀಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ಬೀದಿಯಲ್ಲಿ ನಿಂತು ಹೋರಾಟ ನಡೆಸುವವರಿಗೆ ಮತ ನೀಡುವುದರಿಂದ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ವ್ಯಕ್ತಿ ಲೋಕಸಭೆಯಲ್ಲೂ ಪ್ರತಿಧ್ವನಿಸಲು ಸಹಕಾರವಾಗಲಿದೆ ಎಂದರು.

Advertisement

ದೇಶದಲ್ಲಿ ಬಿಜೆಪಿ ಅತಿ ಹೆಚ್ಚಿನ ಸಂಖೆಯಲ್ಲಿ ಆಯ್ಕೆಗೊಂಡು ಮೂರನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಕೆಲವು ಮಾಧ್ಯಮಗಳು ಬಿತ್ತರಿಸುತ್ತಿದ್ದು, ಅದು ಸತ್ಯಕ್ಕೆ ದೂರ. ಮಾಧ್ಯಮಗಳು ಸತ್ಯ ಹೇಳುತ್ತಿಲ್ಲ ಎಂದರು.

ಕೇಂದ್ರ ಸರ್ಕಾರ ಚುನಾವಣ ಬಾಂಡ್ ಹಗರಣ ಅತ್ಯಂತ ದೊಡ್ಡ ಭ್ರಷ್ಟಾಚಾರದಿಂದ ಕೂಡಿದೆ. ಎಸ್.ಬಿ.ಐ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ವರದಿಯಿಂದ ಭಹಿರಂಗವಾಗಿದೆ. ಈ ಎಲ್ಲಾ ಕೋಲಾಹಲ ನಡೆದಿದ್ದರೂ ಮೋದಿ ಮೌನಿಯಾಗಿದ್ದಾರೆ. ಜನರಿಗೆ ಮಾತನಾಡದ ಪ್ರಧಾನಿ ನಮಗೆ ಬೇಕೆ ? ಎಂಬ ಚರ್ಚೆ ದೇಶದಾದ್ಯಂತ ಶುರುವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ತಿಮ್ಮಯ್ಯ, ಮುಖಂಡರಾದ ಪುಷ್ಪ ಅಮರನಾಥ್, ಎಚ್.ಪಿ.ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಸ್ಥಳಿಯ ಮುಖಂಡರಾದ ರಮೇಶ್, ಭಾಗ್ಯ ಸೋಮಶೇಖರ್, ಅರುಣ್, ರಾಮು,ಜಯರಾಂ. ಡಿ.ಕುನ್ನೇಗೌಡ,ಅಣ್ಣಯ್ಯ ನಾಯಕ, ಶಿರೇನಹಳ್ಳಿ ಬಸವರಾಜ್, ಪುಟ್ಟರಾಜ್ ಸೇರಿದಂತೆ ಹಲವು ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next