Advertisement

ಸೋತ ಬಿಜೆಪಿ ನಾಯಕರನ್ನು ಕಣ್ಣೆತ್ತಿಯೂ ನೋಡದ ವರಿಷ್ಠರು; ಹೈಕಮಾಂಡ್‌ ನಡೆ ನಿಗೂಢ

03:02 PM Jun 15, 2023 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತು ತಿಂಗಳು ಕಳೆದರೂ ಕರ್ನಾಟಕದ ವಿದ್ಯಮಾನಗಳತ್ತ ಬಿಜೆಪಿಯ ದೆಹಲಿ ವರಿಷ್ಠರು ಕಣ್ಣೆತ್ತಿಯೂ ನೋಡುತ್ತಿಲ್ಲ. ಸೋಲಿಗೆ ಕಾರಣ ಹುಡುಕುವುದಕ್ಕಾಗಲಿ, ಭವಿಷ್ಯದ ನಿರ್ಮಾಣಕ್ಕಾಗಲಿ ಚರ್ಚೆ ನಡೆಸುವು ದಕ್ಕೂ ರಾಜ್ಯ ನಾಯಕರಿಗೆ ಆಹ್ವಾನ ಹಾಗೂ ಸಮಯ ನೀಡದೇ ಇರುವ ಮೂಲಕ ಬಿಜೆಪಿ ರಾಜ್ಯ ನಾಯಕರನ್ನು ಹೈಕಮಾಂಡ್‌ ಇದೀಗ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

Advertisement

ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ ಕುಮಾರ್‌ ಕಟೀಲ್‌ ಈಗಾಗಲೇ ನೈತಿಕ ಹೊಣೆ ಹೊತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮೌನಕ್ಕೆ ಶರಣಾಗಿದ್ದಾರೆ. ಆದರೆ ಕರ್ನಾಟಕದ ಸೋಲು ಈ ನಾಲ್ವರು ನಾಯಕರಿಗಿಂತಲೂ ಹೆಚ್ಚಾಗಿ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಇಮೇಜ್‌ಗೆ ಭಂಗ ತಂದಿದೆ. ವೈಯಕ್ತಿಕ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಪ್ರಚಾರ ನಡೆಸಿದರೂ ರಾಜ್ಯ ನಾಯಕರ “ಸ್ವಾರ್ಥ’ ಪಕ್ಷವನ್ನು ಸೋಲಿನ ಪ್ರಪಾತಕ್ಕೆ ನೂಕಿದೆ ಎಂದು ಪರಿಗಣಿಸಿರುವ ಬಿಜೆಪಿ ವರಿಷ್ಠರು ಆತ್ಮಾವಲೋಕನದ ನೆವಕ್ಕೂ ರಾಜ್ಯ ನಾಯಕರನ್ನು ಕರೆಸಿ ಚರ್ಚೆ ನಡೆಸಿಲ್ಲ.

ಚುನಾವಣಾ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್‌ ಅವರಿಂದ ಎಲ್ಲರ ಪಾತ್ರದ ಬಗ್ಗೆಯೂ ಸುದೀರ್ಘ‌ ವರದಿ ಪಡೆದಿರುವ ಬಿಜೆಪಿ ಹೈಕಮಾಂಡ್‌ ಕರ್ನಾಟಕದ ಘಟಾನುಘಟಿ ನಾಯಕರನ್ನು ಭವಿಷ್ಯದ ರಾಜಕಾರಣದಿಂದ ಹೊರಗಿಡುವುದೇ ಲೇಸು ಎಂಬ ಲೆಕ್ಕಾಚಾರದಲ್ಲಿದೆ. ಹೀಗಾಗಿ ಬೊಮ್ಮಾಯಿ ಸೇರಿದಂತೆ ಎಲ್ಲರಿಗೂ ಭೇಟಿ ಅವಕಾಶ ನಿರಾಕರಿಸಲಾಗಿದೆ. ಅಷ್ಟು ಮಾತ್ರವಲ್ಲ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲೂ ನಿರಾಸಕ್ತಿ ತೋರಿದೆ. ಬಿಜೆಪಿ ಆಂತರಿಕ ಮೂಲಗಳ ಪ್ರಕಾರ 6 ದಿನಗಳ ಹಿಂದೆ ದೆಹಲಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಿಲ್ಲಿ ವಿದ್ಯಮಾನಗಳ ಬಗ್ಗೆ ಪ್ರಾಸಂಗಿಕ ಚರ್ಚೆ ನಡೆದಿದೆ.

ಇಲ್ಲಿನ ಕೆಲ ಸಂಗತಿಗಳು ಸೋರಿಕೆಯಾಗುತ್ತಿದ್ದಂತೆ “ತಾವು ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಲ್ಲ’ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ವರಿಷ್ಠರು ಹೊಸಮುಖದ ತಲಾಶ್‌ ನಲ್ಲಿದ್ದಾರೆಂಬುದನ್ನು ಸ್ಪಷ್ಟಗೊಳಿಸಿದೆ.

ಯಾರು ರಾಜ್ಯಾಧ್ಯಕ್ಷರು?: ಮೂಲಗಳ ಪ್ರಕಾರ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ದೃಷ್ಟಿಯಿಂದ ಜೂನ್‌ ತಿಂಗಳು ಬಿಜೆಪಿಗೆ ತೀರಾ ಮಹತ್ವದ್ದಾಗಿದೆ. ಕೇಂದ್ರ ಸರ್ಕಾರದ ಆಯಕಟ್ಟಿನ ಸ್ಥಾನಗಳಲ್ಲಿ ಇದ್ದ ಅಧಿಕಾರಿ ವರ್ಗದಲ್ಲಿ ಎರಡು ದಿನಗಳ ಹಿಂದಷ್ಟೇ ಭಾರಿ ಬದಲಾವಣೆ ಮಾಡಲಾಗಿದೆ. ಸದ್ಯದಲ್ಲೇ ಕೇಂದ್ರ ಸಂಪುಟ ಪುನಾರ್ರಚನೆ ಸಾಧ್ಯತೆಯೂ ಇದೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ಕೆಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ. ಇದು ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಯಾರೆಂಬುದನ್ನು ನಿರ್ಧರಿಸಬಹುದು. ಒಂದು ಮೂಲದ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳು 21ರಂದು ವಿದೇಶಕ್ಕೆ ಪ್ರಯಾಣಿಸಲಿದ್ದು, ಅದಕ್ಕೆ ಮುನ್ನ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಕೆಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisement

ಪ್ರತಿಪಕ್ಷ ಸ್ಥಾನಕ್ಕೆ ಯತ್ನಾಳ್‌, ಬೆಲ್ಲದ್‌ ಹೆಸರು ಮುಂಚೂಣಿ: ಪ್ರತಿಪಕ್ಷ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಸೇರಿದವರಿಗೆ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಅರವಿಂದ ಬೆಲ್ಲದ್‌ ಹೆಸರು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಾತಿ ಸಮೀಕರಣ ಆಧರಿಸಿಯೇ ಹೆಸರನ್ನು ಅಂತಿಮಗೊಳಿಸಲು ವರಿಷ್ಠರು ನಿರ್ಧರಿಸಿದ್ದಾರೆ. ಆದರೆ ವರಿಷ್ಠರು ಆಯ್ಕೆ ಮಾಡಿದ ಕೆಲ ವ್ಯಕ್ತಿಗಳು ಈ ಜವಾಬ್ದಾರಿ ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಾನೇ ಅಧ್ಯಕ್ಷನಾಗುತ್ತೇನೆಂದು ಅತಿ ಉತ್ಸಾಹ ತೋರುವವರ ಬಗ್ಗೆ ವರಿಷ್ಠರಿಗೆ ಒಲವಿಲ್ಲವಾಗಿದೆ.

ಹಿಂದುಳಿದ-ಲಿಂಗಾಯತ ಸೂತ್ರ ಮುನ್ನೆಲೆಗೆ?

ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಲಭಿಸಿಲ್ಲ. ಹೀಗಾಗಿ ಒಕ್ಕಲಿಗರಿಗೆ ಮಣೆ ಹಾಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಉತ್ತರ ಭಾರತದ ರೀತಿಯಲ್ಲಿ ಹಿಂದುಳಿದ ವರ್ಗದ ಜತೆಗೆ ಇನ್ನೊಂದು ಪ್ರಬಲ ಸಮುದಾಯದ ಕಾಂಬಿನೇಷನ್‌ ವರಿಷ್ಠರ ದೃಷ್ಟಿಯಲ್ಲಿ ಕಾರ್ಯಸಾಧು ಯೋಜನೆಯಾಗಿ ಕಾಣುತ್ತಿದೆ. ಕರ್ನಾಟಕದಲ್ಲಿ ಕುರುಬ ಸಮುದಾಯವನ್ನು ಹೊರತುಪಡಿಸಿ ಇತರೆ ಹಿಂದುಳಿದ ವರ್ಗ ಬಿಜೆಪಿಯ ಜತೆಗೆ ಭದ್ರವಾಗಿ ನಿಂತಿದೆ. ಪ್ರತಿ ಕ್ಷೇತ್ರದಲ್ಲೂ ಸಂಖ್ಯಾ ದೃಷ್ಟಿಯಿಂದ ಸಣ್ಣದಾದರೂ ಫ‌ಲಿತಾಂಶದ ದೃಷ್ಟಿಯಿಂದ ಮಹತ್ವದ್ದೆನಿಸುವ ಈ ವರ್ಗವನ್ನು “ಏಕಛತ್ರದ’ ಅಡಿಯಲ್ಲಿ ಒಗ್ಗೂಡಿಸಬೇಕೆಂಬುದು ಹೈಕಮಾಂಡ್‌ ಲೆಕ್ಕಾಚಾರವಾಗಿದೆ.

ಈ ಹಿಂದೆ ಬ್ರಾಹ್ಮಣ- ಲಿಂಗಾಯತ ಪಕ್ಷ ಎಂದು ಬ್ರ್ಯಾಂಡ್‌ ಆಗಿದ್ದ ಬಿಜೆಪಿ ಜತೆಗೆ ಹಿಂದುಳಿದ ವರ್ಗದ ನಾಯಕರು ಕೈ ಜೋಡಿಸಿದ ಬಳಿಕವೇ ಮತಬ್ಯಾಂಕ್‌ ವಿಸ್ತಾರವಾಗಿದೆ. ಆದರೆ ಈಶ್ವರಪ್ಪ ಅವರನ್ನು ಹೊರತುಪಡಿಸಿದರೆ ಬಿಜೆಪಿಯಲ್ಲಿ ಹಿಂದುಳಿದ ವರ್ಗದ ನಾಯಕರಿಗೆ ಇದುವರೆಗೆ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನ ನೀಡಿಲ್ಲ. ಈ ವಿಚಾರವನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ವರಿಷ್ಠರು ಕಳೆದ ಚುನಾವಣೆಯಲ್ಲಿ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಟಿಕೆಟ್‌ ನೀಡಿದ್ದರು. ಮುಂದಿನ ಚುನಾವಣೆಗೆ ಪಕ್ಷ ಸಂಘಟಿಸುವುದಕ್ಕೂ “ಹಿಂದುಳಿದ-ಲಿಂಗಾಯತ’ ಸೂತ್ರವನ್ನು ಮುನ್ನೆಲೆಗೆ ತರಲು ಚಿಂತನೆ ನಡೆಯುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

 ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next