ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಸರಕಾರದ, ಅದರಲ್ಲೂ ವಿಶೇಷವಾಗಿ ಆಡಳಿತ ಪಕ್ಷ ಬಿಜೆಪಿ ನಾಯಕರ ದೂರದೃಷ್ಟಿ ಲಂಬಾಣಿ ಸಮುದಾಯದ ಮೇಲೆ ಬಿದ್ದಿದೆ.
ದಲಿತರು ಮತ್ತು ಲಂಬಾಣಿಗಳು ಕೇವಲ ಮತ ಬ್ಯಾಂಕ್ ಆಗಿ ಉಪಯೋಗವಾಗುತ್ತಿದ್ದಾರೆ ಎಂಬ ಸಾಕಷ್ಟು ಆರೋಪ ಮತ್ತು ಟೀಕೆಗಳ ನಡುವೆ ಈಗ ಬಿಜೆಪಿ ಸರಕಾರ ಈ ಸಮುದಾಯಕ್ಕೆ ಹಕ್ಕುಪತ್ರ ನೀಡಲು ಮುಂದಾಗಿರುವುದು ನಾನಾ ರಾಜಕೀಯ ವಿಶ್ಲೇಷಣೆಗೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಲಂಬಾಣಿ ಸಮುದಾಯದ ಜನರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಕಾರ್ಯತಂತ್ರ ರೂಪಿಸಿರುವ ಬಿಜೆಪಿ ಈ ಸಮುದಾಯದ 50 ಸಾವಿರ ಜನರಿಗೆ ಪ್ರಧಾನಿ ಮೋದಿ ಅವರ ಕೈಯಿಂದಲೇ ಹಕ್ಕುಪತ್ರ ಕೊಡಿಸುವ ಮೂಲಕ ಹೊಸ ರಾಜಕೀಯ ಲಾಭ -ನಷ್ಟದ ಲೆಕ್ಕಾಚಾರಕ್ಕೆ ಮುಂದಡಿ ಇಟ್ಟಿದೆ.
ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡಬಾರದು ಎಂಬ ಗುರಿಯೊಂದಿಗೆ ಬಿಜೆಪಿ ಈ ಬಾರಿ ಕಲ್ಯಾಣ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಮೇಲೆ ಹೆಚ್ಚು ಕಣ್ಣಿಟ್ಟಿದೆ. ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಜತೆಗೆ ಇದೇ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖಭಂಗ ಮಾಡಬೇಕು ಎಂಬುದು ಬಿಜೆಪಿ ಗುರಿ. ಇದೇ ಕಾರಣದಿಂದ ಸುಮಾರು 50 ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡಿರುವ ಲಂಬಾಣಿ ಜನಾಂಗದವರ ಮೇಲೆ ವಿಶೇಷ ಗಮನಹರಿಸಿದೆ. ಇದರಲ್ಲಿ 42 ವಿಧಾನಸಭಾ ಕ್ಷೇತ್ರಗಳು ಕಲ್ಯಾಣ ಕರ್ನಾಟಕದಲ್ಲಿರು ವುದು ಗಮನಿಸ ಬೇಕಾದ ಅಂಶ.
Related Articles
ಕಲ್ಯಾಣ ಕರ್ನಾಟಕದಲ್ಲೇ ಶೇ.90ರಷ್ಟು ತಾಂಡಾ: ರಾಜ್ಯದಲ್ಲಿರುವ ಒಟ್ಟಾರೆ ಲಂಬಾಣಿ ತಾಂಡಾಗಳಲ್ಲಿ ಶೇ.90ರಷ್ಟು ತಾಂಡಾಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ಅದರಲ್ಲೂ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 152 ತಾಂಡಾಗಳು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿವೆ. ಬೀದರ್ ಜಿಲ್ಲೆಯೊಂದರಲ್ಲೇ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 350ಕ್ಕೂ ಹೆಚ್ಚು ತಾಂಡಾಗಳಿವೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ 109 ತಾಂಡಾಗಳಿವೆ. ಈ ಎಲ್ಲ ತಾಂಡಾಗಳ ಮೇಲೆ ಈಗ ಬಿಜೆಪಿ ಸರಕಾರದ ಕೃಪಾಕಟಾಕ್ಷ ಬಿದ್ದಿರುವುದರ ಹಿಂದೆ ರಾಜಕೀಯ ಲಾಭದ ವಾಸನೆ ಬಡಿದಿದೆ.
1700 ತಾಂಡಾಗಳು: ರಾಜ್ಯದಲ್ಲಿ ಪ್ರಸ್ತುತ 1700 ಲಂಬಾಣಿ ತಾಂಡಾಗಳಿವೆ. ಈಗ 800 ತಾಂಡಾಗಳು ಕಂದಾಯ ಗ್ರಾಮಗಳಾಗಿ ಬದಲಾಗಲಿದ್ದು, ಈ ತಾಂಡಾಗಳ ಜನರಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಇದಲ್ಲದೆ ಇನ್ನೊಂದು ತಿಂಗಳಲ್ಲಿ ಬಹುತೇಕ 1500 ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಲಿವೆ. ಸುಮಾರು ಒಂಬತ್ತು ಲಕ್ಷ ಫಲಾನುಭವಿಗಳು ಇದರ ನೇರ ಪ್ರಯೋಜನ ಪಡೆಯಲಿದ್ದಾರೆ.
ಇನ್ನೊಂದು ಕಡೆ ರಾಜ್ಯದಲ್ಲಿ ಲಂಬಾಣಿಗಳ ಜನಸಂಖ್ಯೆ 22 ಲಕ್ಷಕ್ಕಿಂತ ಹೆಚ್ಚಿದೆ. ಇದರಲ್ಲಿ ವಲಸೆ ಹೋಗುವವರ ಸಂಖ್ಯೆಯೆ ಲಕ್ಷ ಲಕ್ಷದಷ್ಟಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಸುಮಾರು 7.5 ಲಕ್ಷ ಜನಸಂಖ್ಯೆ ಇರುವುದು ವಿಶೇಷ. ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈ ಸಮುದಾಯದ ಜನಸಂಖ್ಯೆ ಅಂದಾಜು 4.5 ಲಕ್ಷದಷ್ಟಿದೆ.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದು ಮತ್ತು ಈ ಜನರಿಗೆ ಹಕ್ಕುಪತ್ರ ಕೊಡುವುದು ಸುಲಭದ ಮಾತಲ್ಲ. ಕೇಂದ್ರದ ಸ್ವಾಮಿತ್ವ ಯೋಜನೆಯ ಮೂಲಕ ರಾಜ್ಯದಲ್ಲಿನ ತಾಂಡಾ ಗಳನ್ನು ಸಮೀಕ್ಷೆ ಮಾಡಿ ಅನಂತರ ಇವುಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸಾಧ್ಯವಾಗಿದೆ. ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಗಡಿ ತಾಂಡಾಗಳು ಸೇರಿದಂತೆ 50 ಸಾವಿರ ಕುಟುಂಬಗಳಿಗೆ ಪ್ರಧಾನಿ ಮೋದಿ ಅವರಿಂದ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ.
ಇದರಲ್ಲಿ ನಾವು ರಾಜಕೀಯ ನೋಡಿಲ್ಲ ಎಂಬುದು ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಅವರ ವಿಶ್ವಾಸ.
ಲಂಬಾಣಿ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಇದುವರೆಗೆ ತನ್ನ ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿ ಕೊಂಡು ಬಂದಿದೆ.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಮೂಲಕ ಬಿಜೆಪಿ ಸರಕಾರ ಐತಿಹಾಸಿಕ ಸಾಧನೆಗೆ ಮುಂದಾಗಿದೆ. ಇದರಿಂದ ಪಕ್ಷಕ್ಕೆ ರಾಜಕೀಯವಾಗಿ ಬಹಳ ಅನುಕೂಲವಾಗಲಿದೆ. ಇದಕ್ಕಿಂತ ಮುಖ್ಯವಾಗಿ ಈ ಸಮಾಜದ ಬಹಳ ವರ್ಷಗಳ ಬೇಡಿಕೆಗೆ ನಮ್ಮ ಸರಕಾರ ಸ್ಪಂದಿಸಿದ ತೃಪ್ತಿ ಇದೆ. ರಾಜಕೀಯ ಬೇರೆ. ಸಮಾಜಮುಖಿ ಕೆಲಸ ಬೇರೆ. ಈ ಕೆಲಸವನ್ನು ಕಾಂಗ್ರೆಸ್ ಯಾವತ್ತೂ ಮಾಡಲಿಲ್ಲ.
-ಪಿ.ರಾಜೀವ, ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ
-ಕೇಶವ ಆದಿ