Advertisement

Birth Anniversary: ಡಿ.ದೇವರಾಜ ಅರಸುಗೆ ಭಾರತರತ್ನ ಶಿಫಾರಸು: ಸಿಎಂ ಸಿದ್ದರಾಮಯ್ಯ

10:15 PM Aug 20, 2024 | Team Udayavani |

ಬೆಂಗಳೂರು: ದಿವಂಗತ ಮಾಜಿ ಮುಖ್ಯಮಂತ್ರಿ ಡಾ. ಡಿ.ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

Advertisement

ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರಾಜ ಅರಸು ಸಾಮಾಜಿಕ ನ್ಯಾಯದ ಪರ ಇದ್ದವರು. ಬಡವರು, ದಲಿತರು, ರೈತರು, ಮಹಿಳೆಯರ ಪರ ಇದ್ದವರು. ಅವರ ಕೊಡುಗೆ ಅಪಾರವಾದದ್ದು. ಹೀಗಾಗಿ ಅವರಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದರು. ಅಷ್ಟೇ ಅಲ್ಲದೆ, ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಗೆ “ದೇವರಾಜ ಅರಸು ಎಲೆಕ್ಟ್ರಾನಿಕ್‌ ಸಿಟಿ’ ಎಂದು ಮರುನಾಮಕರಣವನ್ನೂ ಮಾಡುವುದಾಗಿ ಪ್ರಕಟಿಸಿದರು.

ನ.1ಕ್ಕೆ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಅನಾವರಣ:  
1973ರಲ್ಲಿ ದೇವರಾಜ ಅರಸು ಅವರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ಹಿನ್ನೆಲೆಯಲ್ಲಿಯೇ ನಾವು ಕರ್ನಾಟಕ ಸಂಭ್ರಮ ವರ್ಷಾಚರಣೆ ನಡೆಸುತ್ತಿದ್ದು ನವೆಂಬರ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ನವೆಂಬರ್‌ 1ರಂದು ಅನಾವರಣಗೊಳಿಸಲಾಗುವುದು. ಭುವನೇಶ್ವರಿ ಪ್ರತಿಮೆ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ವೇದಿಕೆಯಲ್ಲಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರಿಗೆ ಸೂಚಿಸಿದರು.

ಕೃಷಿ ಭೂಮಿ ಖರೀದಿಗೆ ನಿರ್ಬಂಧ:
ರೈತರಲ್ಲದವರು ಕೃಷಿ ಭೂಮಿ ಖರೀದಿ ಮಾಡುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಘೋಷಿಸಿರುವ ಸಿದ್ದರಾಮಯ್ಯ, ಅರಸು ಅವರು ಉಳುವವನೇ ಭೂಮಿಯೊಡೆಯ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಅಸಂಖ್ಯಾತ ಜನರಿಗೆ ಭೂಮಿಯ ಮಾಲೀಕತ್ವ ನೀಡಿದರು. ಆದರೆ ಇವತ್ತು ಉಳುಮೆ ಮಾಡದವನೂ ಕೃಷಿ ಭೂಮಿ ಪಡೆಯುತ್ತಾನೆ.

ಹಿಂದಿನ ಬಿಜೆಪಿ ಸರ್ಕಾರ ಈ ಆಶಯಕ್ಕೆ ಚ್ಯುತಿ ತಂದು ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಸೆಕ್ಷನ್‌ 79(ಎ) ಮತ್ತು 79(ಬಿ)ಗೆ ತಿದ್ದುಪಡಿ ತಂದು ಯಾರು ಬೇಕಾದರೂ ಜಮೀನು ಖರೀದಿಸಲು ಅವಕಾಶ ನೀಡಿದೆ. ನಮಗೆ ವಿಧಾನ ಪರಿಷತ್ತಿನಲ್ಲಿ ಬಹುಮತ ಬರುತ್ತಿದ್ದಂತೆಯೇ ಬಿಜೆಪಿ ಮಾಡಿದ ತಿದ್ದುಪಡಿಯನ್ನು ರದ್ದುಪಡಿಸುತ್ತೇವೆ ಎಂದು ಹೇಳಿದರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

ಸಾಮಾಜಿಕ ನ್ಯಾಯದಡಿ ಕೆಲಸ; ನನ್ನ ವಿರುದ್ಧ ಹುನ್ನಾರ
ನಾನು ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಬಡವರ ಪರ, ಸಾಮಾಜಿಕ ನ್ಯಾಯದ ಪರವಾಗಿ ಇದ್ದೇನೆ ಎಂದು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನ ಹೇಗಾದ್ರು ಮಾಡಿ ಮುಗಿಸಬೇಕು ಎಂದು ಹುನ್ನಾರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಯಾವ ತಪ್ಪೂ ಮಾಡಿದಿದ್ದರೂ ರಾಜೀನಾಮೆ ಕೊಡಿ ಎನ್ನುತ್ತಿದ್ದಾರೆ. ಅದಕ್ಕೆ ಕೆಲವರು ತಮಟೆ ಹೊಡೆಯುತ್ತಿದ್ದಾರೆ. ಇದು ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರ. ಇಂತಹ ಷಡ್ಯಂತ್ರಗಳನ್ನ ನಾವೆಲ್ಲ ಒಂದಾಗಿ ವಿರೋಧ ಮಾಡಬೇಕು. ಇಲ್ಲದೆ ಹೋದರೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.

ಕಾರ್ಮಿಕ ಮಂಡಳಿಗೆ 5 ಲಕ್ಷ ರೂ. ವಾಪಸ್‌: ಎಸ್‌.ಕೆ.ಕಾಂತಾ
2024-25ರ ಸಾಲಿನ ದೇವರಾಜ ಅರಸು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಎಸ್‌.ಕೆ.ಕಾಂತಾ, ನಾನು ಎಲ್ಲೋ ಮೂಲೆಯಲ್ಲಿದ್ದವನನ್ನು ಕರೆದು ಈ ಕಾಣಿಕೆಯನ್ನು ನೀಡಿದ್ದಾರೆ. ನಾನು ಇನ್ನು ಬಹಳಷ್ಟು ಕೆಲಸ ಮಾಡಬೇಕಿದೆ ಎಂದು ಹೇಳಿ ಪ್ರಶಸ್ತಿಯ ಜತೆಗೆ ನೀಡಲಾಗಿದ್ದ ಐದು ಲಕ್ಷ ರೂ. ನಗದನ್ನು ಕಾರ್ಮಿಕ ಮಂಡಳಿಗೆ ನೀಡುವುದಾಗಿ ಪ್ರಕಟಿಸಿದರು.

“ಹಿಂದುಳಿದವರ ಪರ ಮಾತನಾಡುವ ಬಹಳಷ್ಟು ಮಂದಿಗೆ ಹಿಂದುಳಿದವರು ಅಧಿಕಾರದಲ್ಲಿರುವುದು ಇಷ್ಟವಾಗುವುದಿಲ್ಲ. ಹಿಂದುಳಿದವರನ್ನು ಅಧಿಕಾರದಿಂದ ಕೆಳಗಿಳಿಸಲು ದೆಹಲಿಯಿಂದ ಹಿಡಿದು ರಾಜಭವನದವರೆಗೆ ಪಿತೂರಿ ನಡೆಯುತ್ತಿದೆ. ಇಂತಹ ಹುನ್ನಾರಗಳ ವಿರುದ್ದ ಹೋರಾಟ ನಡೆಸುವುದು ಅನಿವಾರ್ಯ.” -ಡಾ. ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next