Advertisement

ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಬಿಪಿನ್ ರಾವತ್ ಹಂಬಲಿಸಿದ್ದರು: ಸಿಎಂ

12:14 PM Dec 09, 2021 | Team Udayavani |

ಬೆಂಗಳೂರು: ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲವಿದ್ದ ಬಿಪಿನ್ ರಾವತ್ ಅವರು ಸ್ಥಳೀಯವಾಗಿ ರಕ್ಷಣಾ ಉಪಕರಣಗಳ ತಯಾರಿಕೆಯನ್ನು ಪ್ರಾರಂಭಿಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಆರ್ ಡಿಓ ಹಾಗೂ ಹಲವಾರು ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಅವರ ಪ್ರೇರಣೆಯೂ ಇದೆ. ಹೊಸ ಆವಿಷ್ಕಾರ, ಉಪಕರಣಗಳನ್ನು ತಯಾರು ಮಾಡಿ ಸೇನೆಗಳಿಗೆ ಸರಬರಾಜು ಮಾಡುವುದಷ್ಟೇ ಅಲ್ಲ, ಖಾಸಗಿ ವಲಯದಲ್ಲಿಯೂ ಉತ್ಪಾದನೆ ಮಾಡಲು ಜ್ಞಾನವನ್ನು ವರ್ಗಾಯಿಸಿ ಬಹಳ ಪ್ರೋತ್ಸಾಹ ನೀಡಿದ್ದರು ಎಂದರು.

ಹೊಸ ವಿಧಾನಗಳ ಅನುಷ್ಠಾನ: ಮೂರು ಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅವರ ದುರ್ಮರಣದಿಂದ ಇಡೀ ದೇಶವೇ ದಿಗ್ಭ್ರಮೆಗೆ ಒಳಗಾಗಿದೆ. ಘಟನೆ ಹೇಗಾಯ್ತು ಎನ್ನುವುದು ಮುಖ್ಯವಾಗಿರುವುದರಿಂದ ವಾಯುಪಡೆ ತನಿಖೆಯನ್ನು ಕೈಗೊಂಡಿದೆ. ರಾವತ್ ಅವರು ಸೈನ್ಯವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು. ಯುದ್ಧಭೂಮಿಯಲ್ಲಿ ಹೊಸ ವಿಧಾನಗಳನ್ನು ಕಂಡುಕೊಂಡು ಅನುಷ್ಠಾನವನ್ನೂ ಮಾಡಿದರು ಎಂದು ಸ್ಮರಿಸಿದರು.

ಇದನ್ನೂ ಓದಿ:ವಿಡಿಯೋ: ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನದ ಕೊನೆಯ ಕ್ಷಣದ ದೃಶ್ಯ

ದಿಟ್ಟ ನಿಲುವು: ಭಾರತದ ಸುರಕ್ಷತೆಯ ಬಗ್ಗೆ ಹಿಂದೆಂದೂ ತೆಗೆದುಕೊಂಡಿರದ ಹಲವಾರು ದಿಟ್ಟ ನಿಲುವನ್ನು ಪ್ರದರ್ಶಿಸಿದ್ದ ಅವರು ಚೀನಾ, ಭಾರತದ ಗಡಿಯಲ್ಲಿ ನಡೆದ ಚಕಮಕಿಯಲ್ಲಿ ದೇಶವನ್ನು ಬಹಳ ಗಟ್ಟಿಯಾಗಿ ನಿಲ್ಲಿಸಿ, ಚೀನಾವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಅವರ ನಾಯಕತ್ವ ಮುಂದಿನ ದಿನಗಳಲ್ಲಿ ನಮಗೆ ಬಹಳ ಅವಶ್ಯಕವಾಗಿತ್ತು ಎಂದರು.

Advertisement

ಜೀವನ ಚರಿತ್ರೆ ಪ್ರೇರಣಾದಾಯಕ: ಅವರ ಸೇವೆಯನ್ನು ಗುರುತಿಸಿಯೇ ನಮ್ಮ ಪ್ರಧಾನ ಮಂತ್ರಿಗಳು ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದರು. ಇಡೀ ಭಾರತ ಒಬ್ಬ ನಾಯಕನನ್ನು ಕಳೆದುಕೊಂಡಿದೆ. ನಮ್ಮೆಲ್ಲರಿಗೂ ಅವರ ಜೀವನ ಚರಿತ್ರೆ ಪ್ರೇರಣಾದಾಯಕವಾಗಿದೆ. ಅವರ ತ್ಯಾಗ ಬಲಿದಾನಗಳ ಬಗ್ಗೆ ಮಕ್ಕಳಿಗೆ ತಿಳಿಸುವಂತಾಗಬೇಕು. ಮುಂದಿನ ಪೀಳಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರ ಕಾರ್ಯಕ್ರಮಗಳನ್ನು ಮುಂದುವರೆಸಿ ನಿಜವಾದ ಶ್ರದ್ದಾಂಜಲಿಯನ್ನು ಸಲ್ಲಿಸಬೇಕು ಎಂದರು.

ಕರ್ನಾಟಕದೊಂದಿಗೆ ಸಂಬಂಧ: ಕರ್ನಾಟಕದೊಂದಿಗೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಕೊಡಗಿನೊಂದಿಗೆ ವಿಶೇಷ ಸಂಬಂಧ ಅವರಿಗಿತ್ತು. ಜನರಲ್ ಕಾರಿಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಅಪಾರ ಗೌರವವಿತ್ತು. ಅವರ ಶೌರ್ಯವನ್ನು ಪದೇ ಪದೇ ಹೇಳುತ್ತಿದ್ದರು. ಇಲ್ಲಿನ ಜನರು ಹಾಗೂ ಸೈನಿಕರ ಬಗ್ಗೆ ಪ್ರೀತಿಯನ್ನು ಹೊಂದಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next