Advertisement

ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ : ಸ್ನೇಹ-ಸಮ್ಮಿಲನ

12:00 PM Jul 17, 2018 | Team Udayavani |

ನವಿ ಮುಂಬಯಿ: ಬಿಲ್ಲವ ಸಮಾಜ ಬಾಂಧವರು ಒಗ್ಗೂಡಿದರೆ ಯಾವುದೇ ಕಠಿನ ಕೆಲಸವನ್ನು ಸುಲಭವಾಗಿ ಮಾಡಬಹುದು ಎಂಬುವುದಕ್ಕೆ ಇಂದಿನ ಕಾರ್ಯಕ್ರಮ ನಿದರ್ಶನವಾಗಿದೆ. ಯಾವುದೇ ಸಮಾಜಪರ ಕಾರ್ಯಕ್ರಮಗಳು ಸಾಕಾರಗೊಳ್ಳಲು ಒಗ್ಗಟ್ಟು ಬಹಳ ಮುಖ್ಯ. ನಮ್ಮ ಸಮಾಜದಲ್ಲಿ ಒಗ್ಗಟ್ಟಿದೆ. ಆದ್ದರಿಂದ ಸಮುದಾಯ ಭವನ, ಗುರು ಮಂದಿರ ನಿರ್ಮಾಣಕ್ಕಾಗಿ ತಗಲುವ ಅಂದಾಜು 3 ಕೋ. ರೂ. ಸಂಗ್ರಹಕ್ಕೆ ನಮಗೇನೂ ಕಷ್ಟವಾಗದು. ಗುರುದೇವರ ಅನುಗ್ರಹ, ಆಶೀರ್ವಾದದಿಂದ ನಾವು ಹಮ್ಮಿಕೊಂಡಿರುವ ಸಮಾಜೋದ್ಧಾರದ ಎಲ್ಲಾ ಕಾರ್ಯಯೋಜನೆಗಳು ಯಶಸ್ವಿಯಾಗುತ್ತಿದೆ. ನವಿಮುಂಬಯಿಯಲ್ಲಿನ ಸಮುದಾಯ ಭವನ, ಗುರುಮಂದಿರ ಕೂಡಾ ಗುರುಗಳ ಕೃಪೆಯಿಂದ ಅತೀ ಶೀಘ್ರದಲ್ಲೇ ನಿರ್ಮಾಣವಾಗುವ ವಿಶ್ವಾಸವಿದೆ. ಈ ಮಹತ್ಕಾರ್ಯಕ್ಕೆ ಸಮಾಜ ಬಾಂಧವರು ಒಮ್ಮತದಿಂದ ಸಹಕರಿಸಬೇಕು ಎಂದು ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಇವರು ನುಡಿದರು.

Advertisement

ಜು. 1 ರಂದು ಸೀವುಡ್‌ ರೈಲ್ವೇ ನಿಲ್ದಾಣ ಸಮೀಪದ‌ ಸ್ಟರ್ಲಿಂಗ್‌ ಕಾಲೇಜಿನ ಬ್ಯಾಂಕ್ವೆಟ್‌ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ ಸ್ಥಳೀಯ ಸಮಿತಿಯ ಪ್ಲಾಟ್‌ ನಂಬರ್‌ 32, ಸೆಕ್ಟರ್‌-10 ಅಂಭೇಡ್ಕರ್‌ ಭವನದ ಸಮೀಪ, ಸಾನಾ³ಡಾ ಜುಯಿನಗರ ರೈಲು ನಿಲ್ದಾಣ ಹತ್ತಿರ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಮತ್ತು ಗುರು ಮಂದಿರದ ನಿಮಿತ್ತ ಆಯೋಜಿಸಲಾಗಿದ್ದ ಸಮಾಜ ಬಾಂಧವರ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಇವರು ಮಾತನಾಡಿ, ಹಿರಿಯರು 1932 ರಲ್ಲಿ ಬಿಲ್ಲವರ ಅಸೋಸಿಯೇಶನ್‌ನ್ನು ಸ್ಥಾಪಿಸಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ ಸಂಸ್ಥೆ ಸಾಧನೆಯ ಶಿಖರವನ್ನೇರಿರುವುದು ಅಭಿಮಾನದ ಸಂಗತಿಯಾಗಿದೆ. ಬಿಲ್ಲವ ಭವನ, ಗುರುನಾರಾಯಣ ರಾತ್ರಿಶಾಲೆ, ಪಡುಬೆಳ್ಳೆಯಲ್ಲಿ ಶಿಕ್ಷಣ ಸಂಸ್ಥೆ, ಗುರುನಾರಾಯಣ ಯಕ್ಷಗಾನ ಮಂಡಳಿ, ಅಕ್ಷಯ ಮಾಸಿಕ, ಭಾರತ್‌ ಬ್ಯಾಂಕ್‌ನ್ನು ಹೊಂದಿರುವ ಅಸೋಸಿಯೇಶನ್‌ ಮಹಾನಗರದಲ್ಲಿ ಇತಿಹಾಸ ನಿರ್ಮಿಸಿದೆ. 

ಜಯ ಸಿ. ಸುವರ್ಣರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಸಮಾಜ ಪ್ರಗತಿ ಪಥದತ್ತ ಸಾಗುತ್ತಿದೆ. ಸದ್ಯ 22 ಸ್ಥಳೀಯ ಸಮಿತಿಗಳನ್ನು ಅಸೋಸಿಯೇಶನ್‌ ಹೊಂದಿದ್ದು, 19 ಸಮಿತಿಗಳು ಸ್ವಂತ ಕಚೇರಿಯನ್ನು ಹೊಂದಿವೆ. ವಿಕ್ರೋಲಿ ಸಮಿತಿಯು ಶೀಘ್ರದಲ್ಲೇ ಸ್ವಂತ ಕಚೇರಿಯನ್ನು ಹೊಂದಲಿದೆ. ಅಸೋಸಿಯೇಶನ್‌ನ ಏಳ್ಗೆಗಾಗಿ ಅನೇಕ ಹಿರಿಯರು ದುಡಿದಿದ್ದಾರೆ. ಪ್ರಸ್ತುತ ನವಿಮುಂಬಯಿಯಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನ, ಗುರುಮಂದಿರವನ್ನು ನಾವೆಲ್ಲರು ಒಗ್ಗಟ್ಟಾಗಿ ನಿಂತು ನಿರ್ಮಿಸಬೇಕಾಗಿದೆ. ಎಲ್ಲಾ ಸಮಾಜ ಬಾಂಧವರು ಈ ಬೃಹತ್‌ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÅàಸ್‌ ಇದರ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ ಅವರು ಮಾತನಾಡಿ, ನವಿಮುಂಬಯಿ ಪರಿಸರದಲ್ಲಿ ಸಮುದಾಯ ಭವನ ಹಾಗೂ ಗುರುಮಂದಿ ನಿರ್ಮಾಣದ ಮಹತ್ಕಾರ್ಯದ ನಿಮಿತ್ತ ನಾವೆಲ್ಲಾ ಒಟ್ಟಾಗಿದ್ದೇವೆ. ಜಯ ಸಿ. ಸುವರ್ಣರ ಮಾರ್ಗದರ್ಶನ, ಮುಂದಾಳತ್ವದಲ್ಲಿ ಸಮಾಜವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಕಾಣುತ್ತಿದೆ. ಸಮಾಜ ಬಲಿಷ್ಠವಾಗುತ್ತಿದೆ. ನಮ್ಮ ಸಮಾಜದ ಜನಸಂಖ್ಯೆ ಅಪಾರವಾಗಿದೆ. ಹಾಗಿರುವಾಗ ನಮ್ಮ ಸಮಾಜಕ್ಕೆ 3 ಕೋ. ರೂ. ಚಿಕ್ಕ ಬಜೆಟ್‌ ಆಗಿದೆ. ನಾವೆಲ್ಲರೂ ಪಣತೊಟ್ಟು ಭವನ ನಿರ್ಮಾಣಕ್ಕೆ ಸಹಕಾರವನ್ನು ನೀಡೋಣ ಎಂದು ನುಡಿದರು.

Advertisement

ನವಿಮುಂಬಯಿ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಪೂಜಾರಿ ಇವರು ಮಾತನಾಡಿ, 1998 ರಲ್ಲಿ ನವಿಮುಂಬಯಿ ಸ್ಥಳೀಯ ಕಚೇರಿ ಸ್ಥಾಪನೆಯಾಗಿದ್ದು, ಆ ಸಮಯದಲ್ಲಿ ಹಿರಿಯರು ಸಮುದಾಯವನ್ನು ಒಟ್ಟಾಗಿಸಲು ಬಹಳಷ್ಟು ಶ್ರಮಿಸಿದ್ದರು. 2006ರಲ್ಲಿ ಸಮಿತಿಯು ಸ್ವಂತ ಕಚೇರಿ ನಿರ್ಮಾಣಕ್ಕಾಗಿ ಸಾನಾ³ಡಾದಲ್ಲಿ ಜಾಗವನ್ನು ಖರೀದಿಸಿತ್ತು. ರಮೇಶ್‌ ಪೂಜಾರಿ ಅವರ ಸತತ ಪ್ರಯತ್ನದಿಂದ ಇದೀಗ ನಮ್ಮ ಕನಸು ನನಸಾಗುತ್ತಿರುವುದು ಸಂತೋಷ ತಂದಿದೆ. ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 
ಕಟ್ಟಡವು ವಿಶಾಲವಾದ ಸಭಾಗೃಹ ಮತ್ತು ಗುರುಮಂದಿರವನ್ನು ಒಳಗೊಳ್ಳಲಿದೆ. ಅಂದಾಜು 3 ಕೋ. ರೂ. ಗಳ ಯೋಜನೆ ಇದಾಗಿದ್ದು, ಸಮಾಜ ಬಾಂಧವರು ಈ ಯೋಜನೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ದಾನಿಗಳೆಲ್ಲರು ನಿಧಿಕುಂಭಕ್ಕೆ ದೇಣಿಗೆ ನೀಡಿದರು. ದಾನಿಗಳನ್ನು ಜಯ ಸಿ. ಸುವರ್ಣ ಇವರು ಗೌರವಿಸಿದರು. ಸಮಾಜ ಬಾಂಧವರು ತಮ್ಮ ಇಚ್ಛೆಯಂತೆ ದೇಣಿಗೆಯನ್ನು ಘೋಷಿಸಿದರು. ಜಯ ಸಿ. ಸುವರ್ಣ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಆನಂತರ ನಿಧಿ ಕುಂಭಕ್ಕೆ ದೇಣಿಗೆ ನೀಡಿ, ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ನವಿಮುಂಬಯಿ ಸ್ಥಳೀಯ ಕಚೇರಿಯ ಗೌರವ ಕೋಶಾಧಿಕಾರಿ ಜಯರಾಮ ಪೂಜಾರಿ ಉಪಸ್ಥಿತರಿದ್ದರು.

ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ವಿ. ಕೆ. ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲ್ಲವರ ಅಸೋಸಿಯೇಶನ್‌ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್‌ ಜಿ. ಅಂಚನ್‌ ಕಾರ್ಯಕ್ರಮ ನಿರ್ವಹಿಸಿದರು. 
ಜತೆ ಕಾರ್ಯದರ್ಶಿ ಎನ್‌. ಕೆ. ಪೂಜಾರಿ, ಜತೆ ಕೋಶಾಧಿಕಾರಿ ಶೇಖರ ಬಿ. ಪಾಲನ್‌, ಅರ್ಚಕ ಕೃಷ್ಣ ಕೋಟ್ಯಾನ್‌ ಸಹಕರಿಸಿದರು. ಬಿಲ್ಲವರ ಅಸೋಸಿಯೇಶನ್‌ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು, ಮಹಿಳಾ ಸದಸ್ಯೆಯರು, ಉದ್ಯಮಿಗಳು, ದಾನಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ನಿಧಿ ಸಂಗ್ರಹ ಆಯೋಜನಾ ಸಮಿತಿಯ ಕಾರ್ಯದರ್ಶಿ ಗಂಗಾಧರ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಹಲವಾರು ಸಮಸ್ಯೆಗಳನ್ನು ಎದುರಿಸಿ ಸತತ ಪ್ರಯತ್ನದಿಂದ 12 ವರ್ಷಗಳ ಬಳಿಕ ನಮಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಈ ಕಾರ್ಯ ಕೈಗೂಡಲು ಅನೇಕ ಮಂದಿ ನಮ್ಮೊಂದಿಗೆ ಶ್ರಮಿಸಿದ್ದಾರೆ. ನಾನು ಕಳೆದ 24 ವರ್ಷಗಳಿಂದ ನೆರೂಲ್‌ ಶ್ರೀ ಶನೀಶ್ವರ ಮಂದಿದ ಅಧ್ಯಕ್ಷನಾಗಿ ಕಳೆದ, 12 ವರ್ಷಗಳಿಂದ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿನ ಎಲ್ಲಾ ಸಮಾಜ ಬಾಂಧವರು ನನಗೆ ಗೌರವ, ಪ್ರೀತಿ ಕೊಟ್ಟಿದ್ದಾರೆ. ಧಾರ್ಮಿಕ, ಸಾಮಾಜಿಕ  ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಶನಿದೇವರ ಅನುಗ್ರಹವು ನಮ್ಮ ಮೇಲಿದೆ. ಆದ್ದರಿಂದ ನಾವು ಹಮ್ಮಿಕೊಂಡ ಯೋಜನೆಯು ಸಂಪೂರ್ಣಗೊಳ್ಳುವ ವಿಶ್ವಾಸ ನನಗಿದೆ. ನಮ್ಮ ನಾಯಕ ಜಯ ಸಿ. ಸುವರ್ಣ ಅವರಿಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಿದೆ. ಅವರ ನೇತೃತ್ವದಲ್ಲಿ ನಾವೆಲ್ಲರೂ ಒಂದಾಗಿ ಸಮುದಾಯ ಭವನ, ಗುರುಮಂದಿರ ನಿರ್ಮಿಸೋಣ. ನಿಮ್ಮೆಲ್ಲರ ಸಹಕಾರ ಸದಾಯಿರಲಿ
– ರಮೇಶ್‌ ಎಂ. ಪೂಜಾರಿ 
ಕಾರ್ಯಾಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ ಸ್ಥಳೀಯ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next