ಚಿತ್ರದುರ್ಗ: ಬರ ಪರಿಹಾರ ಕಾರ್ಯವನ್ನು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಬಿಜೆಪಿ ವತಿಯಿಂದಲೇ ಬರ ಪರಿಹಾರ ಕಾರ್ಯ ಕೈಗೊಳ್ಳುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಅನುದಾನ ಬಳಕೆ ಮಾಡಿ ಜಾನುವಾರುಗಳಿಗೆ ಮೇವು, ಮಧ್ಯಾಹ್ನ ಮತ್ತು ರಾತ್ರಿ ರೈತರಿಗೆ ಊಟ ಮತ್ತಿತರ ಸೌಲಭ್ಯ ನೀಡಲಾಗುವುದು. ಜ.21 ಮತ್ತು 22ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಕಲಬುರಗಿಯಲ್ಲಿ ನಡೆಯಲಿದೆ. ಅಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
2009ರಲ್ಲಿ ಅತಿವೃಷ್ಟಿ ಉಂಟಾದಾಗ ರಾಜ್ಯದ ಜನತೆ ಹೆಚ್ಚಿನ ಸಹಕಾರ ನೀಡಿದ್ದರು. ಅದೇ ರೀತಿ ಸಾರ್ವಜನಿಕರು, ಮಠ ಮಂದಿರಗಳು, ಶ್ರೀಮಂತರ ಸಹಕಾರ ಕೋರಿ ರೈತರಿಗೆ ನೆರವು ನೀಡಲಾಗುವುದು. ಸರ್ಕಾರದ ವತಿಯಿಂದಲೇ ರೈತರಿಗೆ ಗೋಶಾಲೆಗಳಲ್ಲಿ ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡಿದರೆ ಸಂತೋಷ. ಸರ್ಕಾರ ಮಾಡದಿದ್ದರೆ ನಾವು ಆ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಈಶ್ವರಪ್ಪ ಭಾಗಿ
ಜ.21 ಮತ್ತು 22ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಕಲಬುರಗಿಯಲ್ಲಿ ನಡೆಯಲಿದೆ. ಸಭೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸೇರಿದಂತೆ ಪಕ್ಷದ ಎಲ್ಲ ಮುಖಂಡರೂ ಭಾಗವಹಿಸಲಿದ್ದಾರೆ. ಈಶ್ವರಪ್ಪ ಒಂದು ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಹೇಳಿದರು.
ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿಗೆ 2ನೇ ಸ್ಥಾನ ದೊರೆತಿದೆ. ಆಡಳಿತಾರೂಢ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದರೆ, ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. ಬಿಜೆಪಿಗೆ ಹಣದ ಕೊರತೆಯಾಗಿದ್ದರಿಂದ ಸೀಟು ಕಡಿಮೆ ಬಂದಿವೆ. ಆದರೂ ಎಪಿಎಂಸಿ ಫಲಿತಾಂಶ ಸಮಾಧಾನ ತಂದಿದೆ.