Advertisement

ಚುನಾವಣ ಆಯೋಗ ಕುರಿತ ಸುದ್ದಿ ಟ್ರ್ಯಾಕ್‌ಗಾಗಿ ಖಾಸಗಿ ಸಂಸ್ಥೆ!

11:48 PM Nov 25, 2021 | Team Udayavani |

ಹೊಸದಿಲ್ಲಿ: ಉತ್ತರಪ್ರದೇಶ ಸೇರಿ ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿರು­ವಂತೆಯೇ ಕೇಂದ್ರ ಚುನಾವಣ ಆಯೋಗವು “ಮಾಧ್ಯಮಗಳ ಕವರೇಜ್‌’ ಟ್ರ್ಯಾಕ್‌ ಮಾಡಲು ಖಾಸಗಿ ಸಂಸ್ಥೆಯೊಂದರ ನೇಮಕಕ್ಕೆ ಮುಂದಾಗಿದೆ.  ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗುತ್ತಿದ್ದು, ಚುನಾವಣ ಸುಧಾರಣೆಗೆ ಆಯೋಗವೇ ಮುನ್ನುಡಿ ಬರೆದಂತಾಗಿದೆ.

Advertisement

ಮುದ್ರಣ ಮಾಧ್ಯಮ, ಟಿವಿ, ಡಿಜಿಟಲ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚುನಾ­ವಣೆಗೆ ಸಂಬಂಧಿಸಿದ ಸುದ್ದಿಗಳ ಮುದ್ರಣ/ಪ್ರಸಾರ ಹಾಗೂ ಚುನಾವಣ ಆಯೋಗಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ಬಂದ ವರದಿ­ಗಳನ್ನು ಟ್ರ್ಯಾಕ್‌ ಮಾಡಿ, ಅದರ ಆಧಾರದಲ್ಲಿ ಆ ಸಂಸ್ಥೆಯು ವರದಿ ಸಿದ್ಧಪಡಿಸಿ, ಆಯೋಗಕ್ಕೆ ಸಲ್ಲಿಸಲಿದೆ. ಇದಕ್ಕಾಗಿ ಈಗಾಗಲೇ ಸಾರ್ವಜನಿಕ ವಲಯದ ಸಂಸ್ಥೆಯಾದ ಬ್ರಾಡ್‌ಕಾಸ್ಟ್‌ ಎಂಜಿನಿ­ಯರಿಂಗ್‌ ಕನ್ಸಲ್ಟೆಂಟ್ಸ್‌ ಇಂಡಿಯಾ ಲಿಮಿಟೆಡ್‌ ಪ್ರಸ್ತಾವನೆಯ ಕೋರಿಕೆಯನ್ನು ಸಲ್ಲಿಸಿದೆ. ನ.30ರೊಳಗಾಗಿ ಅರ್ಹ ಸಂಸ್ಥೆಗಳು ಬಿಡ್‌ನ‌ಲ್ಲಿ ಭಾಗವಹಿಸುವಂತೆಯೂ ಸೂಚಿಸಲಾಗಿದೆ.

ಏಕೆ ಈ ನಿರ್ಧಾರ?: ಹಿಂದಿನ ಚುನಾ­ವಣೆಗಳ ಸಂದರ್ಭದಲ್ಲಿ ಚುನಾವಣ ಆಯೋಗ ಕೈಗೊಂಡ ಕೆಲವು ನಿರ್ಧಾರಗಳು, ಚುನಾವಣ ಪ್ರಕ್ರಿಯೆಯ ಉಲ್ಲಂಘನೆ ವೇಳೆ ಕೈಗೊಂಡ ನಿಲುವುಗಳ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿ­ದ್ದವು. ಈ ಹಿನ್ನೆಲೆಯಲ್ಲಿ ಆಯೋಗವು ಖಾಸಗಿ ಏಜೆನ್ಸಿ ನೇಮಕಕ್ಕೆ ನಿರ್ಧರಿಸಿದೆ. ಈ ಏಜೆನ್ಸಿಯು ಆಯೋಗ ಮತ್ತು ಚುನಾವಣ ಪ್ರಕ್ರಿಯೆಗೆ ಸಂಬಂಧಿಸಿ ಎಲ್ಲ ಪ್ರಮುಖ ರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಿಕೆಗಳು, ರಾಷ್ಟ್ರೀಯಪ್ರಾದೇಶಿಕ ಸುದ್ದಿವಾಹಿನಿಗಳಲ್ಲಿನ ವರದಿಗಳನ್ನು ಪರಿಶೀಲಿಸಲಿದೆ. ಅದರ ಆಧಾರದಲ್ಲಿ, ವಿಶ್ಲೇಷಣೆ ಬರೆದು, ಅವುಗಳನ್ನು ಧನಾತ್ಮಕ, ಋಣಾತ್ಮಕ ಮತ್ತು ನಿಷ್ಪಕ್ಷ ಎಂದು ವರ್ಗೀಕರಿಸಲಿದೆ. ಜತೆಗೆ ವರದಿಗಳನ್ನು ಬರೆದವರ ಹೆಸರು, ರಾಜ್ಯವಾರು ಕಳವಳ ಇತ್ಯಾದಿಗಳನ್ನೂ ಆಯೋಗಕ್ಕೆ ಸಲ್ಲಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next