Advertisement

ಭೀಮನ ಹೊಡೆತದಿಂದ ನಿರ್ಮಾಣವಾಗಿತ್ತಂತೆ ಈ ಕೆರೆ… ಪ್ರಾಕೃತಿಕ ವಿಕೋಪಗಳ ಸೂಚನೆ ನೀಡುತ್ತಂತೆ

02:58 PM Jul 09, 2024 | ಸುಧೀರ್ |

ನಮ್ಮ ದೇಶದಲ್ಲಿ ಭೇಟಿ ನೀಡಲು ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿವೆ. ಈ ಸ್ಥಳಗಳಿಗೆ ಸಂಬಂಧಿಸಿದ ಇತಿಹಾಸ ಅಥವಾ ಅದ್ಭುತ ರಹಸ್ಯಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ. ಅಂಥದರಲ್ಲಿ ಮಧ್ಯಪ್ರದೇಶದಲ್ಲಿರುವ ಕೆರೆ ಕೂಡ ಒಂದು ಇದರ ಹೆಸರೇ `ಭೀಮ್ ಕುಂಡ್’ ಇದು ನೋಡಲು ಕಲ್ಲು ಬಂಡೆಗಳ ನಡುವೆ ಇರುವ ಸಣ್ಣ ಕೆರೆಯಂತೆ ಕಂಡರೂ ಇದರ ಆಳ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ಯಾರಿಗೂ ಸಾಧ್ಯವಾಗಲಿಲ್ಲವಂತೆ, ಬನ್ನಿ ಹಾಗಾದರೆ ಈ `ಭೀಮ್ ಕುಂಡ್’ ಕೆರೆಯ ಹಿಂದಿನ ಕತೆಯೇನು ಎಂಬುದನ್ನು ತಿಳಿದು ಬರೋಣ…

Advertisement

‘ಭೀಮ್ ಕುಂಡ್’ ಅನ್ನು ‘ನೀಲ ಕುಂಡ್’ ಎಂದೂ ಕರೆಯುತ್ತಾರೆ. ಈ ಕೊಳವನ್ನು ಬಂಡೆಕಲ್ಲುಗಳ ಗುಹೆಯ ಮಧ್ಯ ಭಾಗದಲ್ಲಿ ನಿರ್ಮಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಈ ಸ್ಥಳವನ್ನು ಆಧ್ಯಾತ್ಮಿಕ ಸ್ಥಳವೆಂದು ಪರಿಗಣಿಸಲಾಗಿದೆ. ಅಲ್ಲದೆ ಅನೇಕ ಋಷಿ ಮುನಿಗಳು ಮತ್ತು ತಪಸ್ವಿಗಳು ಇಲ್ಲಿ ತಪಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸ್ಥಳವನ್ನು ಭಾರತದ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.

ಪುರಾಣ ಹಿನ್ನೆಲೆ:

ಈ ಕೆರೆಗೂ ಮಹಾಭಾರತಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ ಅದರಂತೆ ಕೌರವರ ವಿರುದ್ಧ ಸೋತ ನಂತರ ಪಾಂಡವರು ವನವಾಸಕ್ಕೆ ಹೊರಟಿದ್ದ ವೇಳೆ ಕಾಡಿನ ಮೂಲಕ ಹಾದು ಹೋಗುವ ಸಂದರ್ಭ ದ್ರೌಪದಿಗೆ ದಣಿವಾಗಿದೆ ಈ ವೇಳೆ ಐವರು ಸಹೋದರರು ನೀರಿಗಾಗಿ ಹುಡುಕಾಟ ನಡೆಸಿದ್ದಾರೆ. ದಟ್ಟ ಕಾಡಿನ ಮಧ್ಯೆ ಎಲ್ಲೂ ನೀರು ಸಿಗಲಿಲ್ಲ ಆದರೆ ಇತ್ತ ದ್ರೌಪದಿಗೆ ಬಾಯಾರಿಕೆ ಹೆಚ್ಚಾಗತೊಡಗಿದೆ ಈ ವೇಳೆ ಎಲ್ಲೂ ನೀರು ಸಿಗದೇ ಇರುವುದರಿಂದ ಕೋಪಗೊಂಡ ಭೀಮನು ತನ್ನ ಕೈಯಲ್ಲಿದ್ದ ಗದೆಯನ್ನು ಎತ್ತಿಕೊಂಡು ಅದನ್ನು ಪೂರ್ಣ ಬಲದಿಂದ ನೆಲದ ಮೇಲೆ ಹೊಡೆದಿದ್ದಾನೆ ಭೀಮನ ಹೊಡೆತಕ್ಕೆ ದೊಡ್ಡ ಕೆರೆ ನಿರ್ಮಾಣಗೊಂಡು ನೀರು ಹೊರ ಚಿಮ್ಮಿದ್ದು, ಇದೆ ನೀರಿನಿಂದ ತಮ್ಮ ದಾಹವನ್ನು ನಿವಾರಿಸಿಕೊಂಡರು ಎಂಬುದು ಪ್ರತೀತಿ, ಅಲ್ಲಿಂದ ಈ ಕೆರೆಯನ್ನು “ಭೀಮಕುಂಡ್” ಎಂದು ಕರೆಯಲಾಗುತ್ತದೆ.

Advertisement

ಯಾರಿಗೂ ತಿಳಿದಿಲ್ಲ ಕೆರೆಯ ಆಳ:
ಈ ಕೆರೆಯ ರಹಸ್ಯವೆಂದರೆ ಕೆರೆ ಎಷ್ಟು ಆಳವಿದೆ ಎಂದು ತಿಳಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ ಅಲ್ಲದೆ ಈ ನಿಗೂಢ ಕೊಳದ ಆಳವನ್ನು ಕಂಡುಹಿಡಿಯಲು ಸ್ಥಳೀಯ ಆಡಳಿತದಿಂದ ವಿದೇಶಿ ವಿಜ್ಞಾನಿಗಳು ಮತ್ತು ಡಿಸ್ಕವರಿ ಚಾನೆಲ್ ಸೇರಿದಂತೆ ಹಲವು ತಂಡ ಪ್ರಯತ್ನ ಮಾಡಿತ್ತು ಅಲ್ಲದೆ ವಿದೇಶಿ ವಿಜ್ಞಾನಿಗಳ ತಂಡವೂ ಈ ಕೆರೆಯ ಅಳವನ್ನು ಪತ್ತೆಹಚ್ಚುವ ಕಾರ್ಯ ನಡೆಸಿತ್ತು ಆದರೆ 200 ಮೀಟರ್ ಆಳಕ್ಕೆ ಹೋದ ತಂಡ ಮತ್ತೆ ವಾಪಸ್ಸಾಗಿದೆ. ಇನ್ನೊಂದು ವಿಚಾರ ಏನೆಂದರೆ ಕೆರೆಯ ಆಳಕ್ಕೆ ಹೋದಂತೆ ನೀರಿನ ಸೆಳೆತ ಹೆಚ್ಚಿದೆ ಎಂದು ಹೇಳಲಾಗಿದೆ ಇದರಿಂದ ಕೆರೆಯ ತಳಕ್ಕೆ ಹೋಗಲು ಯಾರಿಂದಲೂ ಸಾಧ್ಯವಾಗಿಲ್ಲ. ಈಗಲೂ ಈ ಕೆರೆಯಲ್ಲಿ ಅನ್ವೇಷಣೆಗಳು ನಡೆಯುತ್ತಿರುತ್ತವೆ ಎಂದು ಹೇಳಲಾಗುತ್ತಿದೆ.

ಸುನಾಮಿ ಭೂಕಂಪದ ಮುನ್ಸೂಚನೆ ನೀಡಿದ್ದ ಕೆರೆ
ಈ ಕೆರೆಯಲ್ಲಿ ಎಲ್ಲಾ ಸಮಯದಲ್ಲೂ ನೀರು ಒಂದೇ ಮಟ್ಟದಲ್ಲಿ ಇರುತ್ತದೆಯಂತೆ ಒಂದು ವೇಳೆ ಭೂಕಂಪ, ಸುನಾಮಿಯಂತಹ ಪ್ರಾಕೃತಿಕ ವಿಕೋಪ ನಡೆಯುತ್ತದೆ ಎಂದಾದರೆ ಈ ಕೆರೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆಯಂತೆ ಇದಕ್ಕೆ ಉದಾಹರಣೆ 2004 ರಲ್ಲಿ ಸುನಾಮಿ ಸಂಭವಿಸಿದಾಗ, ಅನೇಕ ಜನರು ಪ್ರಾಣ ಕಳೆದುಕೊಂಡರು. ಆದರೆ 2004ರ ಸುನಾಮಿಗೂ ಮುನ್ನ ಭೀಮಕುಂಡದ ನೀರಿನ ಮಟ್ಟ ಏಕಾಏಕಿ ಸುಮಾರು 15 ಮೀಟರ್‌ಗಳಷ್ಟು ಹೆಚ್ಚಿತ್ತು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಅಷ್ಟುಮಾತ್ರವಲ್ಲದೆ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಭೀಮಕುಂಡದ ನೀರಿನ ಮಟ್ಟ ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.

ಮೃತದೇಹ ಮೇಲೆ ಬರಲ್ಲ:
ಸಾಮಾನ್ಯವಾಗಿ ಕೆರೆ ಅಥವಾ ಬಾವಿಗಳಲ್ಲಿ ಮುಳುಗಿ ಮೃತಪಟ್ಟರೆ ಅವರ ದೇಹ ಎರಡು ಮೂರೂ ದಿನಗಳಲ್ಲಿ ನೀರಿನಿಂದ ಮೇಲಕ್ಕೆ ಬರುತ್ತದೆ ಆದರೆ ಈ ಕೆರೆಯಲ್ಲಿ ಆ ರೀತಿ ನಡೆಯುವುದಿಲ್ಲ ಎನ್ನುತ್ತಾರೆ ಇಲ್ಲಿನ ಜನ ಬದಲಾಗಿ ದೇಹ ನೀರಿನ ಆಳಕ್ಕೆ ಹೋಗುತ್ತದೆಯಂತೆ.

ಭೀಮಕುಂಡ್ ತಲುಪುವುದು ಹೇಗೆ:
ಭೀಮಕುಂಡ್ ಮಧ್ಯಪ್ರದೇಶದ ಛತ್ತರ್‌ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿದೆ. ಛತ್ತರ್‌ಪುರದಿಂದ ಬಾಡಿಗೆ ವಾಹನಗಳನ್ನು ಗೊತ್ತುಪಡಿಸಿ ಭೀಮಕುಂಡ್ ತಲುಪಬಹುದು ಅಥವಾ ಛತ್ತರ್‌ಪುರದಿಂದ ಬಸ್‌ ಮೂಲಕವೂ ಬರಬಹುದು. ವಿಮಾನ ಹಾಗೂ ರೈಲಿನ ಮೂಲಕ ಬರುವವರು ಖಜುರಾಹೊ ಮೂಲಕ ಬರಬಹುದು ಇಲ್ಲಿಂದ 75 ಕಿಮೀ ದೂರದಲ್ಲಿದೆ.

ಭೇಟಿ ನೀಡಲು ಉತ್ತಮ ಸಮಯ:
ಭೀಮಕುಂಡ್‌ಗೆ ಭೇಟಿ ನೀಡಲು ಫೆಬ್ರವರಿ-ಜೂನ್ ಉತ್ತಮ ಸಮಯವಾಗಿದ್ದು ಇದಲ್ಲದೆ ಅಕ್ಟೋಬರ್-ನವೆಂಬರ್ ಸಮಯದಲ್ಲೂ ಇಲ್ಲಿಗೆ ಭೇಟಿ ನೀಡಬಹುದು.

*ಸುಧೀರ್, ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next