Advertisement

ಅರಿವು ಸ್ವರೂಪನೇ ಗುರು: ಶಿವಕುಮಾರ ಶ್ರೀ

06:44 PM Nov 24, 2019 | Naveen |

ಬೀದರ: ಸಂಸಾರದ ಮೇಲಿನ ಮೋಹ ಬಿಟ್ಟು ಪರಮಾರ್ಥದ ಕಡೆಗೆ ಬರಬೇಕು. ಅರಿವು ಸ್ವರೂಪನೇ ಗುರು. ಗುರುವನ್ನು ಎಲ್ಲ ಮನುಷ್ಯರಂತೆ ನೋಡಬೇಡಿ. ಸದ್ಗುರು ಜ್ಞಾನಸ್ವರೂಪನು ಆಗಿದ್ದಾನೆ. ಯಾವ ಜ್ಞಾನದಿಂದ ಮರಣ ತಪ್ಪುವದೋ ಅಂತಹ ವಿದ್ಯೆಯೇ ನಿಜವಿದ್ಯೆ. ಇದನ್ನು ಕಲಿಸುವವನೆ ಗುರು ಎಂದು ಡಾ|ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

Advertisement

ನಗರದ ಶ್ರೀ ಚಿದಂಬರಾಶ್ರಮದ ಸಿದ್ಧಾರೂಢ ಮಠದಲ್ಲಿ ನಡೆದ ಡಾ| ಶಿವಕುಮಾರ ಮಹಾಸ್ವಾಮಿಗಳ 75ನೇ ಜಯಂತಿ ಮಹೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನರನನ್ನು ಹರನಾಗಿ ಮಾಡುವ ಶಕ್ತಿ ಗುರುವಿನಲ್ಲಿದೆ. ಭವಿಯೆಂಬುವುದನ್ನು ಬಿಡಿಸಿ ಭಕ್ತನಾಗಿ ಮಾಡುವುದು ಗುರುವೇ. ನಾನಾರು? ನನ್ನ ಸ್ವರೂಪವೇನು ಎಂಬುವುದನ್ನು ತಿಳಿಸಿಕೊಡುವವನೆ ಸದ್ಗುರು. ಕೊನೆಗೆ ಅವನೇ ದೇವರು. ಸದ್ಗುರುವಿನ ದರ್ಶನವಾದರೆ ಸಮಸ್ಥ ದೇವತೆಗಳ ದರ್ಶನವಾದಂತೆ ಎಂದರು.

ನಮ್ಮಲ್ಲಿ ಪ್ರವೃತ್ತಿ ಮಾರ್ಗ ನಿವೃತ್ತಿ ಮಾರ್ಗ ಎಂದು ಎರಡು ಮಾರ್ಗಗಳಿವೆ.
ಎಲ್ಲರಂತೆ ಹುಟ್ಟಿ ಎಲ್ಲರಂತೆ ಸಾಯುವುದು ಪ್ರವೃತ್ತಿ ಮಾರ್ಗ. ನಿವೃತ್ತಿ ಮಾರ್ಗದಲ್ಲಿ ಇಂದ್ರಿಯಗಳ ಕೆಲಸವಿಲ್ಲ. ನಂಬಿಕೆಯೊಂದೇ ಅದರ ಕೆಲಸ. ಪರಮಾತ್ಮನಲ್ಲಿ ವಿಶ್ವಾಸ ಮಾಡುವುದಲ್ಲ, ಶ್ರದ್ಧೆ ಇಡಬೇಕು. ತಂದೆ-ತಾಯಿ ದೇವರೆಂದು ವಿಶ್ವಾಸ ಮಾಡುವುದಲ್ಲ ಶ್ರದ್ಧೆ ಇಡಬೇಕು. ಶ್ರದ್ಧೆ ಇದ್ದವನಿಗೆ ಆ ವಸ್ತುವಿನ ಜ್ಞಾನವಾಗುತ್ತದೆ ಎಂದು ಹೇಳಿದರು.

ಕಲಬುರಗಿಯ ಮಾತಾ ಲಕ್ಷ್ಮಿದೇವಿ ಮಾತನಾಡಿ, ಗುರುವಿನ ಮಾರ್ಗದರ್ಶನ
ಪಡೆದರೂ ಸಾಧಕನಿಗೆ ಅರಿವಿನ ಎತ್ತರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಕಾರಣ ಭಕ್ತಿಯ ಕೊರತೆ. ಗುರು ಚರಣದಲ್ಲಿ ಶ್ರದ್ಧೆ ಇಟ್ಟು ನಡೆಯುವುದು ನಿಜವಾದ ಭಕ್ತಿ ಎಂದರು.

ಶ್ರೀ ಶ್ರದ್ಧಾನಂದ ಸ್ವಾಮಿಗಳು ಮಾತನಾಡಿ, ಇಂದ್ರೀಯಗಳ ವ್ಯವಹಾರ ಬೇರೆ ಬೇರೆ ಇದೆ. ಅರಿವು ಮಾತ್ರ ಭಿನ್ನ. ಗುರು ನರನಲ್ಲ. ನರನೆಂದವಗೆ ನರಕ ತಪ್ಪದು ಎಂದರು. ಶ್ರೀ ಗಣೇಶಾನಂದ ಮಹಾರಾಜ ಮಾತನಾಡಿ, ಗುರು ಚರಣದೋಳು
ಅನನ್ಯಭಕ್ತಿ ಇರಿಸಿ ಜೀವನ ಸುಖೀ ಮಾಡಿಕೊಳ್ಳುವುದೇ ನಮ್ಮೆಲ್ಲರ ಪರಮ ಧ್ಯೇಯವಾಗಬೇಕು. ಸದ್ಗುರು ಜನನ ಮರಣ ಬಂಧನ ಬಿಡಿಸಿ, ಆತ್ಮ ಸ್ಥಿತಿಯ ಅರಿವು ಮೂಡಿಸುವನು. ಅಂತಹ ಸದ್ಗುರು ಚರಣದಲ್ಲಿ ಭಕ್ತಿ ಇಟ್ಟು ನಡೆಯುವುದೇ ಅಹೋಭಾಗ್ಯ ಎಂದರು.

Advertisement

ಅಜ್ಜಪ್ಪಾ ಗಿರಡ್ಡಿ ಮತ್ತು ಶೋಭಾ ಶಿವಾಜಿರಾವ್‌ ಅವರು ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು. ಶ್ರೀ ಜಡಿಸಿದ್ದೇಶ್ವರ ಸ್ವಾಮಿಜಿ, ಶ್ರೀ ದಯಾನಂದ ಸ್ವಾಮೀಜಿ, ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಅದ್ವೈತಾನಂದ ಸ್ವಾಮೀಜಿ, ಸದ್ರೂಪಾನಂದ ಸ್ವಾಮೀಜಿ, ಸಿದ್ದೇಶ್ವರಿ ತಾಯಿ, ಆನಂದಮಯಿ ತಾಯಿ, ಸುಶಾಂತ ತಾಯಿ, ಜ್ಞಾನೇಶ್ವರಿ ತಾಯಿ, ಅಮೃತಾನಂದ ತಾಯಿ, ಶಶಿಕಲಾತಾಯಿ, ಸಂಗೀತಾದೇವಿ ಯಶವಂತ ಶಾಸ್ತ್ರೀಗಳು, ಶ್ರೀ ಸತೀಶ ದೇವರು ನೇತೃತ್ವ ವಹಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಡಾ| ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ, ಬಿ.ಜಿ. ಶಟಕಾರ, ಮಡಿವಾಳಪ್ಪಾ ಗಂಗಶೆಟ್ಟಿ, ಶಿವಶರಣಪ್ಪಾ ಸಾವಳಗಿ, ಶರಣಪ್ಪಾ ತಿರ್ಲಾಪೂರೆ, ಉದಯಭಾನು ಹಲವಾಯಿ, ಸುಭಾಷ ಉಪ್ಪೆ, ಈಶ್ವರಗೌಡ ಕಮಡಳ್ಳಿ, ಭಾರತಿಬಾಯಿ ಕಣಜಿ, ಶ್ರೀನಾಥ ಮಸ್ಕಲೆ, ಪುರ್ಣೇಶ ಮಠಾಳಕರ, ಡಾ|ಹಾವಗಿರಾವ್‌ ಮೈಲಾರೆ, ಸಹಾಜನಂದ ಕಣಜಿ, ಪ್ರಭು ಬೆಣ್ಣೆ, ಡಾ| ಚಂದ್ರಪ್ಪ ಭತಮುರ್ಗೆ, ಲಕ್ಷ್ಮಣ ಪೂಜಾರಿ, ಶಿವಶರಣಪ್ಪಾ, ಕಲ್ಯಾಣರಾವ್‌ ಬುಜುರಕೆ, ರಾಜೇಂದ್ರ ಉದ್ರವಾಡಿ, ಡಾ| ವಿ.ಎಸ್‌. ಪಾಟೀಲ, ಉಪಸ್ಥಿತರಿದ್ದರು. ಪ್ರೊ|ಪರಮೇಶ್ವರ ಭಟ್ಟ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next