Advertisement

ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಿನ ಜಾರಿಗೆ ಆದೇಶ

10:31 AM Jul 12, 2019 | Naveen |

ಬೀದರ: ಕಸ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಂಟ್ರೋಲ್ ರೂಂ ಸ್ಥಾಪಿಸಬೇಕು. ಆಯಾ ವಾರ್ಡ್‌ ಕಮೀಟಿಯವರಿಗೆ ಕೇಳಿ, ಕಸ ವಿಲೇವಾರಿ ಸರಿಯಾಗಿ ಆಗುತ್ತದೋ ಇಲ್ಲವೋ ಎಂದು ತಿಳಿದುಕೊಳ್ಳಬೇಕು. ಸಾರ್ವತ್ರಿಕ ಸಮಸ್ಯೆಯಾಗಿ ಪರಿಣಮಿಸಿದ ಪ್ಲಾಸ್ಟಿಕ್‌ ಬಳಕೆ ಜಿಲ್ಲೆಯಲ್ಲಿ ಸಂಪೂರ್ಣ ನಿಲ್ಲಬೇಕು. ಪ್ಲಾಸ್ಟಿಕ್‌ ನಿಷೇಧ ಕ್ರಮವನ್ನು ಶೇ.100ರಷ್ಟು ಜಾರಿ ಮಾಡಬೇಕು ಎಂದು ಹಸಿರು ನ್ಯಾಯಪೀಠದ ಅಧ್ಯಕ್ಷರು ಹಾಗೂ ನ್ಯಾಯಾಮೂರ್ತಿ ಸುಭಾಷ್‌ ಬಿ.ಅಡಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ 15 ದಿನಗಳ ಗಡುವು ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಮೊದಲು ನಿಮ್ಮ ವಾಹನಗಳ ಮೂಲಕ ಪ್ರಚಾರ ನಡೆಸಬೇಕು. ಪ್ಲಾಸ್ಟಿಕ್‌ ಬಳಸುವುದು ಎಲ್ಲಿ ಕಾಣುತ್ತದೋ ಅಲ್ಲಿಯೇ ನಗರಸಭೆ, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ದಂಡ ವಿಧಿಸಬೇಕು. ಪತ್ರಿಕಾ ಪ್ರಕಟಣೆ ನೀಡಿ ಜನರಿಗೆ ತಿಳಿವಳಿಕೆ ಮೂಡಿಸಬೇಕು. ಆದಾಗ್ಯೂ ಪ್ಲಾಸ್ಟಿಕ್‌ ಬಳಸುವುದು ಕಂಡುಬಂದಲ್ಲಿ ಪ್ಲಾಸ್ಟಿಕ್‌ ಬಳಸುವವರ, ಮಾರಾಟ ಮಾಡುವವರ ಮತ್ತು ಉತ್ಪಾದನೆ ಮಾಡುವವರ ವಿರುದ್ಧ ನಿಯಮಾನುಸಾರ ದಂಡ ವಿಧಿಸಬೇಕು ಎಂದು ಅವರು ನಗರಸಭೆ, ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ಲಾಸ್ಟಿಕ್‌ ಉತ್ಪಾದನೆ, ಬಳಕೆ, ವಿತರಣೆ, ಮಾರಾಟದ ವಿಷಯದಲ್ಲಿ ತಪ್ಪಿತಸ್ಥರನ್ನು ಬಂಧಿಸಲು ಪೊಲೀಸ್‌ ಇಲಾಖೆ ಸಹಕಾರ ನೀಡಬೇಕು ಎಂದು ನ್ಯಾಯಮೂರ್ತಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಅವರಿಗೆ ತಿಳಿಸಿದರು. ಆಯಾ ಕಡೆಗಳಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್‌ಅನ್ನು ಒಂದೆಡೆ ಹಾಕಿ ಸಿಮೆಂಟ್ ಕಂಪನಿಗೆ ಕಳುಹಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಐತಿಹಾಸಿಕ ಹಿನ್ನೆಲೆಯ ಬೀದರ ಪಟ್ಟಣವನ್ನು ಸ್ವಚ್ಛತೆಯ ವಿಷಯದಲ್ಲಿ ಮಾದರಿಯಾಗಿ ಮಾಡಲು ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು. ನಗರಸಭೆ, ಪುರಸಭೆ ವಾಹನಗಳ ಮೈಕ್‌ ಮೂಲಕ ಮತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಶುಚಿತ್ವ ಕಾಯ್ದುಕೊಳ್ಳುವಂತೆ ಜನತೆಗೆ ತಿಳಿಸಲಾಗಿದೆ. ಶುಚಿತ್ವದ ಬಗ್ಗೆ ಪ್ರತಿದಿನ ಮಾನಿಟರ್‌ ಮಾಡಿಸಲಾಗುವುದು. ನಗರದಲ್ಲಿ ಅಚ್ಚುಕಟ್ಟಾದ ಒಳ ಚರಂಡಿ ವ್ಯವಸ್ಥೆ ಮಾಡುವುದಕ್ಕೆ ಸಂಬಂಧಿಸಿದಂತೆ 120 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಮಾಹಿತಿಯನ್ನು ಮುಖ್ಯಮಂತ್ರಿಗಳು ಮತ್ತು ಪ್ರವಾಸೋದ್ಯಮ ಸಚಿವರ ಗಮನಕ್ಕೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್‌.ಮಹಾದೇವ ತಿಳಿಸಿದರು.

ಜಿಲ್ಲೆಯ ನಗರ ಪ್ರದೇಶಗಳಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕ ಸಂಗ್ರಹಿಸಿ, ಬೇರ್ಪಡಿಸಿ ವೈಜ್ಞಾನಿಕ ಮಾದರಿಯಲ್ಲಿ ಅದನ್ನು ವಿಲೇವಾರಿ ಮಾಡಲು ಕ್ರಮ ವಹಿಸಬೇಕು. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ, ಪ್ಲಾಸ್ಟಿಕ್‌ ಪ್ರತ್ಯೇಕವಾಗಿ ಹಾಕಿ ಎಂದು ಜನತೆಗೆ ತಿಳಿಸಬೇಕು. ನಿಯಮಾನುಸಾರ ಕಸ ಸಂಗ್ರಹಿಸದ ಮನೆಗಳಿಗೆ ದಂಡ ವಿಧಿಸಿರಿ. ಸ್ಯಾನಿಟರಿ ತ್ಯಾಜ್ಯವನ್ನು ಮಾರ್ಗಸೂಚಿಯನುಸಾರವೇ ವಿಲೇವಾರಿ ಮಾಡಬೇಕು. ಗ್ರಾಮ ಪಂಚಾಯತಿ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿ ಅವರನ್ನು ಬಳಸಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸ ಸಂಗ್ರಹ, ವಿಲೇವಾರಿ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಮೂರ್ತಿಗಳು ಹೇಳಿದರು.

Advertisement

ಹಳ್ಳಿಖೇಡ ಹೊರತುಪಡಿಸಿ ಎಲ್ಲಾ ಕಡೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಸ ಸಂಗ್ರಹಿಸಲಾಗುತ್ತಿದೆ. ಪ್ರತಿದಿನ 90 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದೆ. ಹಸಿ ಕಸವನ್ನು ಪ್ರತಿದಿನ, ಒಣ ಕಸವನ್ನು ಎರಡು ದಿನಕ್ಕೊಮ್ಮೆ ಸಂಗ್ರಹಿಸಿ, ಇದರ ವಿಲೇವಾರಿಗೆ ಒತ್ತು ಕೊಡಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಬಲಭೀಮ ಕಾಂಬಳೆ ತಿಳಿಸಿದರು.

ಹೆಚ್ಚು ಪ್ರಮಾಣದಲ್ಲಿ ಕಸ ಬರುವ ಮತ್ತು ಸರ್ಕಾರಿ ಜಮೀನು ಲಭ್ಯತೆ ಮಾನದಂಡ ಆಧರಿಸಿ ಜಿಲ್ಲೆಯಲ್ಲಿ 25 ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಯನ್ನು ಬರುವ ಮಾರ್ಚ್‌ 31ರೊಳಗೆ ಮಾಡುತ್ತೇವೆ. ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಚಮೇವ ಜಯತೆ ಹಾಗೂ ಹಸೀರಿಕರಣ ಕಾರ್ಯಕ್ರಮದಡಿ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಅಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ತಮ್ಮ ಇಲಾಖೆಯಡಿ ಕಾರ್ಯ ನಿರ್ವಹಿಸುವ ವಿದ್ಯಾರ್ಥಿನಿಯರ ಎಲ್ಲ ವಸತಿ ನಿಲಯಗಳಲ್ಲಿ ಸ್ಯಾನಿಟರಿ ತ್ಯಾಜ್ಯ ವಿಲೇವಾರಿಯನ್ನು ಪ್ರತಿದಿನ ಮಾಡಬೇಕು. ಅಲ್ಲಿ ಕೆಲಸ ಮಾಡುವವರಿಗೆ ತರಬೇತಿ ಕೊಡಿಸಿ ಅಲ್ಲಿನ ತ್ಯಾಜ್ಯವನ್ನು ಅಲ್ಲಿಯೇ ಕಾಂಪೋಸ್ಟ್‌ ಮಾಡುವುದಕ್ಕೆ ಕ್ರಮ ವಹಿಸಿರಿ ಎಂದು ನ್ಯಾಯಮೂರ್ತಿಗಳು, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಟ್ಟಡಗಳ ಡೆಮಾಲಿಷನ್‌ ತ್ಯಾಜ್ಯ ನಿರ್ವಹಣೆಯನ್ನು ಕೂಡ ಮಾರ್ಗಸೂಚಿಯನುಸಾರ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆಯಲ್ಲಿ ಆರೋಗ್ಯ ಇಲಾಖೆ, ಬೆಂಗಳೂರಿನ ಉಪ ನಿರ್ದೇಶಕ ಡಾ| ವಿವೇಕ್‌ ದೊರೈ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next