Advertisement

ಮಕ್ಕಳಿಗೆ ನೈತಿಕ-ಮೌಲ್ಯಾಧಾರಿತ ಶಿಕ್ಷಣ ಅಗತ್ಯ

12:09 PM Sep 09, 2019 | Naveen |

ಬೀದರ: ಮಕ್ಕಳಿಗೆ ಪಂಚತಂತ್ರದ ಕಥೆಗಳನ್ನು ಹೇಳುವ ಮೂಲಕ ನೈತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು ಎಂದು ರಾಜ್ಯಸಭೆ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಸಲಹೆ ನೀಡಿದರು.

Advertisement

ನಗರದ ರಂಗಮಂದಿರದಲ್ಲಿ ರವಿವಾರ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಡಾ|ಎಸ್‌.ಎಸ್‌. ಸಿದ್ದಾರೆಡ್ಡಿ ಫೌಂಡೇಶನ್‌ ಹಾಗೂ ನವೀನ್‌ ಪಬ್ಲಿಕ್‌ ಸ್ಕೂಲ್ ಚಿಟ್ಟಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಶೈಕ್ಷಣಿಕ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಲ್ಲಿ ಭಾಷಾಂತರದಿಂದ ರಾಷ್ಟ್ರೀಯ ಅಂತರ ಕ್ಷೀಣಿಸುತ್ತಿದೆ. ಇದು ಬದಲಾವಣೆಯಾಗಲು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನಿಷ್ಟ ಎರಡು ದಿನ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ 2 ದಿನ ಇಂಗ್ಲಿಷ್‌ ಶಿಕ್ಷಣ ಬೋಧಿಸಿದಾಗ ಶೈಕ್ಷಣಿಕ ಸಮನ್ವಯ ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಶಿಕ್ಷಣ ತಜ್ಞ ಹಾಗೂ ಆ್ಯಕ್ಟ್ ಸಂಸ್ಥೆ ಮುಖ್ಯಸ್ಥ ಡಾ| ಗುರುರಾಜ ಕರಜಗಿ ಮಾತನಾಡಿ, ಶಿಕ್ಷಕರು ಮಕ್ಕಳ ಪಾಲಿಗೆ ಕೇವಲ ಬೋಧಕರಾಗದೆ ಉತ್ತಮ ಪೋಷಕರಾಗಬೇಕು. ಎಲ್ಲ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು. ಸದಾ ಧನಾತ್ಮಕ ಚಿಂತನೆಯುಳ್ಳುವರಾಗಿರಬೇಕು. ದೇಶಿ ಅದರಲ್ಲೂ ಶ್ವೇತವಸ್ತ್ರಧಾರಿಯಾಗಬೇಕು. ವೃತ್ತಿ ಬಗ್ಗೆ ಗೌರವವಿರಬೇಕು. ಶಿಕ್ಷಕರು ಸಮಯ ಪ್ರಜ್ಞೆ ಹಾಗೂ ಕಾಳಜಿ ಉಳ್ಳುವರಾಗಿರಬೇಕು. ಬುದ್ಧಿಗೆ ನಿಲುಕುವ ಶಿಕ್ಷಣ ದಯಪಾಲಿಸದೆ ಹೃದಯಕ್ಕೆ ನಾಟುವಂಥ ಪಾಠ ಮಾಡಬೇಕು. 3 ವರ್ಷದಿಂದಲೇ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿದಾಗ ಆ ದೇಶದ ಚರಿತ್ರೆ ಖಂಡಿತವಾಗಿ ಬದಲಾವಣೆಯಾಗುತ್ತದೆ ಎಂದು ಹೇಳಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ಭವ್ಯ ಭಾರತ ನಿರ್ಮಿಸಲು ಶಿಕ್ಷಣದ ಮಹತ್ವ ಇದೆ. ಆದರೆ, ಅದು ಪರಿಕ್ಷೆಗೆ ಸೀಮಿತವಾಗದೆ, ಶಿಕ್ಷಣ ಇಡೀ ಜೀವನ ಶೈಲಿ ಬದಲಾವಣೆಗೆ ನಾಂದಿ ಹಾಡಬೇಕು ಎಂದರು.

Advertisement

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಗೀತಾ ಚಿದ್ರಿ ಮಾತನಾಡಿ, ತಾಯಿಯೇ ಮಕ್ಕಳ ಮೊದಲ ಗುರುವಾದ ಕಾರಣ ಆಕೆ ಮಕ್ಕಳಿಗೆ ಬಾಲ್ಯದಲ್ಲಿ ಮಾತೃಭಾಷೆ ಶಿಕ್ಷಣ ದಯಪಾಲಿಸಬೇಕು. ಪಾಲಕರು ಮಕ್ಕಳ ಕೈಗೆ ಮೊಬೈಲ್ ಕೊಡಕೂಡದು. ಅವರಿಗೆ ಗತಕಾಲದ ವೀರಾಂಗನೆಯ ಕಥೆಗಳು ಹಾಗೂ ಇತಿಹಾಸ ಕಲಿಸಿದಾಗ ಭವಿಷ್ಯದಲ್ಲಿ ಧೈರ್ಯವಂತ ದೇಶಪ್ರೇಮಿಗಳಾಗಿ ಹೊರಹೊಮ್ಮುವರು ಎಂದರು.

ಇದೇ ವೇಳೇ ಡಾ| ಬಸವರಾಜ ಪಾಟೀಲ ಸೇಡಂ, ಡಾ| ಎಸ್‌.ಎಸ್‌. ಸಿದ್ದಾರೆಡ್ಡಿ ಫೌಂಡೇಶನ್‌ ಗೌರವಾಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ವೀಣಾ ಜಲಾದೆ, ಜೈಸಿಂಗ್‌ ಠಾಕೂರ, ಸೈಯ್ಯದ್‌ ಅಲ್ಪಾಸ್‌, ನಿಕಿತಾ ಪಾಟೀಲ ಸೇರಿದಂತೆ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಫಲಿತಾಂಶ ಪಡೆದ ಜಿಲ್ಲೆಯ 53 ಶಾಲಾ ಕಾಲೇಜುಗಳ ಮುಖ್ಯಸ್ಥರನ್ನು ಇದೇ ವೇಳೆ ಸನ್ಮಾನಿಸಲಾಯಿತು. ವಿಕಾಸ ಅಕಾಡೆಮಿ ಜಿಲ್ಲಾ ಉಪಾಧ್ಯಕ್ಷ ಡಾ|ಅಬ್ದುಲ್ ಖದೀರ್‌, ಡಾ| ಎಸ್‌.ಎಸ್‌. ಸಿದ್ದಾರೆಡ್ಡಿ ಫೌಂಡೇಶನ್‌ ಅಧ್ಯಕ್ಷ ಡಾ|ವಿಕ್ರಮ್‌ ಸಿದ್ದಾರೆಡ್ಡಿ, ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಶಾಂತಕುಮಾರ ಬಿರಾದಾರ, ಕಾಮಶೆಟ್ಟಿ ಚಿಕಬಸೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next