Advertisement

ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

08:40 PM Oct 19, 2021 | Team Udayavani |

ಭಟ್ಕಳ: ಕೆಲವೊಂದು ಸಾಧನೆ ಮಾಡಲು ಹಣ, ಅಂತಸ್ತು, ವಯಸ್ಸು ಕೂಡಾ ಮುಖ್ಯವಾಗುತ್ತದೆ. ಆದರೆ ಅದ್ಯಾವುದೂ ಇಲ್ಲದೇ ಅತೀ ದೊಡ್ಡ ಸಾಧನೆಯನ್ನು ಮಾಡಲು ಹೊರಟಿದ್ದಾನೆ ಮಹಾರಾಷ್ಟ್ರದ ನಾಗಪುರದ ಯುವಕ ರೋಹನ್ ಅಗರ್‍ವಾಲ್.

Advertisement

ಈತ ತನ್ನ ಬಿ.ಕಾಂ. ಎರಡನೇ ವರ್ಷಕ್ಕೆ ಕಾಲೇಜಿನಿಂದ ಹೊರ ಬಂದು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎನ್ನುವ ಹಂಬಲದೊಂದಿಗೆ ಬರೀಗೈಯಲ್ಲಿ ಕಾಲ್ನಡಿಗೆಯನ್ನು ಪ್ರಪಂಚ ಸುತ್ತಲು ಹೊರಟು ನಿಂತಾದ ಈತನ ಪಾಲಕರಿಗೆ ಉಸಿರೇ ನಿಂತಂತಾಗಿತ್ತು. ಆದರೂ ಸಾವರಿಸಿಕೊಂಡು ಮಗನ ಹಠಸಾಧನೆಗೆ ಒಪ್ಪಿಗೆ ನೀಡುವ ಮೂಲಕ ಸಾತ್ ನೀಡಿದ್ದಾರೆ ತಂದೆ ಹಾಗೂ ತಾಯಿ.

ಉಡುಪಿ ಜಿಲ್ಲೆಯ ಮೂಲಕ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಲುಪಿದ ಈತನಿಗೆ ಇಲ್ಲಿನ ಶಂಶುದ್ಧೀನ್ ಸರ್ಕಲ್‍ನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ತಂಜೀಂ ಮುಖಂಡ ಇನಾಯತುಲ್ಲಾ ಶಾಬಂದ್ರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಭಟ್ಕಳ ನಗರ ಠಾಣೆಯ ಇನ್ಸಪೆಕ್ಟರ್ ದಿವಾಕರ ಪಿ.ಎಂ., ಸಬ್ ಇನ್ಸಪೆಕ್ಟರ್ ಹೆಚ್.ಬಿ. ಕುಡಗುಂಟಿ, ಕರ್ನಾಟಕ ರಕ್ಷಣಾ ವೇದಿಕೆಯ ಕೃಷ್ಣ ಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಮುಬಾಶಿರ್ ಹಲ್ಲಾರೆ ಅವರು ಎಲ್ಲರಿಗೂ ಪರಿಚಯಿಸಿ ನಂತರ ಅವರಿಗೆ ಊಟೋಪಚಾರ ಮಾಡಿಸಿ ಕಳುಹಿಸಿದರು.

ಕಳೆದ 2020ನೇ ಇಸವಿಯ ಆಗಸ್ಟ್ 25ರಂದು ವಾರಣಾಸಿಯ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಹೊರಟ ಯುವಕ ರೋಹನ್ ಅಗರ್‍ವಾಲ್‍ನ ಗುರಿಯೊಂದೇ ದೇಶದಲ್ಲಿ ಈ ಹಿಂದೆ ಇದ್ದ ಗುರುಕುಲ ಪದ್ಧತಿಯ ಶಿಕ್ಷಣ ಜಾರಿಗೆ ಬರಬೇಕು. ಪ್ಲಾಸ್ಟಿಕ್‍ನಿಂದಾಗುವ ಪರಿಸರ ನಾಶವನ್ನು ತಡೆಯಬೇಕು ಎನ್ನುವ ಗುರಿಯೊಂದಿಗೆ ಹೊರಟ ಯುವಕನ ಇನ್ನೊಂದು ಗುರಿ ಮೈ ನಡುಗಿಸುವಂತಾದ್ದು.  ಒಟ್ಟಾರೆ ಈತ ಕಾಲ್ನಡಿಗೆಯಲ್ಲಿಯೇ ಸೈಬೀರಿಯಾವನ್ನು ತಲುಪಿ ಅತ್ಯಂತ ಶೀತ ವಲಯವಾದ ಓಯ್‍ಮ್ಯಾಕೋನ್‍ನ್ನು ತಲುಪುವುದು ಇವನ ಗುರಿಯಾಗಿದೆ.

ಇದನ್ನೂ ಓದಿ:ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

Advertisement

ಕಾಲ್ನಡಿಗೆಯಲ್ಲಿಯೇ ಈಗಾಗಲೇ ರಾಜಸ್ಥಾನ, ಹರ್ಯಾಣ, ದೆಹಲಿ, ಉತ್ತರಾಖಂಡ, ಹಿಮಾಚಲ, ಚಂಡೀಘಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳವನ್ನು ಕ್ರಮಿಸಿರುವ ಈತ ಮಂಗಳೂರು ಮೂಲಕ ಕರ್ನಾಟಕವನ್ನು ಪ್ರವೇಶಿಸಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅ.19ರಂದು ಮಧ್ಯಾಹ್ನ ತಲುಪಿದ್ದಾನೆ.

ಇಲ್ಲಿ ಗೋವಾ ಮೂಲಕ ತನ್ನ ಕಾಲ್ನಡಿಗೆಯನ್ನು ಮುಂದುವರಿಸುವ ಗುರಿಯನ್ನು ಹೊಂದಿದ್ದ ಈತ ದಿನಾಲೂ 20-30 ಕಿ.ಮಿ. ದೂರ ಕ್ರಮಿಸುತ್ತಾನೆ. ಸೈಬೀರಿಯಾ ತಲುಪಲು ಇನ್ನೂ 10 ವರ್ಷಗಳು ಬೇಕು ಎನ್ನುವ 19ರ ಹರೆಯದ ರಹೋನ್ ಮುಖದಲ್ಲಿ ಎನೋ ಸಾಧನೆ ಮಾಡಿದ ಭಾವ ಮೂಡುತ್ತದೆ.

ಒಟ್ಟಾರೆ ಛಲದಿಂದ ಹೊರಟ ಈತನ ಯಾತ್ರೆ ಕಳೆದ ಒಂದು ವರ್ಷದಿಂದ ಸುಗಮವಾಗಿ ಸಾಗುತ್ತಿದ್ದು ತಾನು ಭೇಟಿ ನೀಡಿದ ಪ್ರದೇಶದಲ್ಲೆಲ್ಲಾ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ.  ನನಗೆ ಹಣದ ಅವಶ್ಯಕತೆ ಇಲ್ಲ, ಜನರು ಊಟ, ತಿಂಡಿ ವಸತಿ ವ್ಯವಸ್ಥೆಯನ್ನು ಮಾಡುತ್ತಾರೆ, ಯಾರಲ್ಲಿಯೂ ಏನನ್ನು ಕೇಳುವುದಿಲ್ಲ ಎನ್ನುವ ಈತ ನೀಡಿದ್ದನ್ನು ಸ್ವೀಕರಿಸುತ್ತೇನೆ ಎನ್ನುತ್ತಾರೆ.  ಒಟ್ಟಾರೆ 18ನೇ ವರ್ಷಕ್ಕೆ ಪ್ರಪಂಚ ಪರ್ಯಟನೆಗೆ ಹೊರಟ ಈತನ ಯಾತ್ರೆ ಸುಗಮವಾಗಿ ಸಾಗಲಿ ಎನ್ನುವ ಹಾರೈಕೆಯೊಂದಿಗೆ ಬೀಳ್ಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next