ಭಟ್ಕಳ: ತಾಲೂಕಿನ ಇತಿಹಾಸದಲ್ಲಿಯೇ ಇಷ್ಟೊಂದು ಮಳೆ ಸುರಿದಿರುವ ಉದಾಹರಣೆ ಸುಮಾರು ಕಳೆದ 50 ವರ್ಷಗಳಿಂದ ಇಲ್ಲ. ಕಳೆದೆರಡು ವರ್ಷಗಳಲ್ಲಿ ಮಳೆ ಸುರಿದಿದೆಯಾದರೂ ಸಹ ಇಷ್ಟೊಂದು ಅನಾಹುತ ಸಂಭವಿಸಿರಲಿಲ್ಲ. ಒಟ್ಟಾರೆ ಭಟ್ಕಳದಲ್ಲಿ ಮಾತ್ರ ಮೇಘ ಸ್ಪೋಟಗೊಂಡಿದ್ದು ಅತ್ತ ಮಂಕಿಯಿಂದ ಉತ್ತರಕ್ಕೆ, ಶಿರೂರಿನಿಂದ ದಕ್ಷಿಣಕ್ಕೆ ಇಷ್ಟೊಂದು ಮಳೆ ಇಲ್ಲ ಎಂದು ತಿಳಿದು ಬಂದಿದೆ. ಭಟ್ಕಳ ತಾಲೂಕಿನಲ್ಲ ಮಾತ್ರ ಸೋಮವಾರ ಸಂಜೆ 4 ಗಂಟೆಯ ಸುಮಾರಿಗೆ ಆರಂಭವಾದ ಮಳೆ ಮಂಗಳವಾರ ಬೆಳಿಗ್ಗೆ 10 ಗಂಟೆಯ ತನಕವೂ ಎಡೆಬಿಡದೇ ಸುರಿದಿದ್ದರಿಂದ ಭಾರೀ ಅನಾಹುತ ಸಂಭವಿಸಿದೆ.
ಭಟ್ಕಳ ಹಾಗೂ ಮುರ್ಡೇಶ್ವರದ ನಡುವೆ ರೈಲ್ವೇ ಹಳಿಯ ಮೇಲೆ ನೀರು ಹರಿಯುತ್ತಿರುವುದರಿಂದ ಕೊಂಕಣ ರೈಲ್ವೇಯ ಎಲ್ಲಾ ಪ್ಯಾಸೆಂಜರ್ ರೈಲುಗಳ ಓಡಾಟವನ್ನು ನಿಲ್ಲಿಸಲಾಗಿದೆ. ಬೆಂಗಳೂರಿನಿಂದ ಬಂದಿದ್ದ ರೈಲು ಭಟ್ಕಳದಲ್ಲಿಯೇ ನಿಂತಿದ್ದು ಕಾರವಾರ ಹೋಗುವ ಪ್ರಯಾಣಿಕರು ರೈಲ್ವೇ ನಿಲ್ದಾಣದಲ್ಲಿಯೇ ಬಾಕಿಯಾಗಿದ್ದಾರೆ.
ಈ ಕುರಿತು ರೈಲ್ವೇ ಪ್ರಕಟಣೆಯೊಂದನ್ನು ಹೊರಡಿಸಿದ್ದು ಹಲವು ರೈಲುಗಳನ್ನು ರದ್ದು ಪಡಿಸಲಾಗಿದೆ ಇಲ್ಲವೇ ಆಯಾಯ ರೈಲ್ವೇ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ. ಅವುಗಳಲ್ಲಿ ವಿಶೇಷ ರೈಲು ನಂ.06602 ಉಡುಪಿ ರೈಲ್ವೇ ನಿಲ್ದಾಣದಲ್ಲಿಯೇ ನಿಲ್ಲಿಸಲಾಗಿದೆ. ವಿಶೇಷ ರೈಲು 06601ನೇ ರದ್ದು ಪಡಿಸಲಾಗಿದೆ. ರೈಲು ನಂ.11098 ಎರ್ನಾಕುಲಂ-ಪುಣೆ ಎಕ್ಸಪ್ರೆಸ್ ರೈಲನ್ನು ಭಟ್ಕಳ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ರೈಲು ನಂ.16595 ಎಸ್.ಬಿ.ಸಿ.-ಕಾರವಾರ ರೈಲನ್ನು ಶಿರೂರು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ರೈಲು ನಂ.16334 ವಿಟಿಸಿ. – ವಿಆರ್ಎಲ್ ಎಕ್ಸಪ್ರೆಸ್ ರೈಲನ್ನು ಸೇನಾಪುರ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ರೈಲು ನಂ.12201 ಎಲ್.ಟಿ.ಟಿ. ಕೊಚ್ಚಿವೇಲಿ ಎಕ್ಸಪ್ರೆಸ್ ರೈಲನ್ನು ಅಂಕೋಲ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ರೈಲು ನಂ.16516 ಕಾರವಾರ ಯಶ್ವಂತಪುರ ರೈಲನ್ನು ಹೊನ್ನಾವರ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.
ಇದನ್ನೂ ಓದಿ : ಅರಂತೋಡು: ಧಾರಾಕಾರ ಮಳೆ ತಗ್ಗು ಪ್ರದೇಶಗಳ ಮನೆ, ಅಂಗಡಿ ಮುಂಗಟ್ಟುಗಳು ಜಲಾವೃತ
ಈಗಾಗಲೇ ರೈಲ್ವೇ ಹಳಿಯ ಮೇಲೆ ನೀರು ಹೋಗಿರುವ ಜಾಗಾದಲ್ಲಿ ರೈಲ್ವೇ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭ ಮಾಡಿದ್ದು ರೈಲುಗಳ ಸಂಚಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಆರಂಭವಾಗಬಹುದು ಎಂದು ಕೊಂಕಣ ರೈಲ್ವೇ ಪಿ.ಆರ್.ಓ. ಸುಧಾ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.