Advertisement

ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಕಾಟ

01:09 PM Dec 28, 2019 | Naveen |

ಭರಮಸಾಗರ: ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಕಾಟ ವಿಪರೀತವಾಗಿರುವ ಹಿನ್ನೆಲೆಯಲ್ಲಿ ರೈತರು ಫಸಲಿನ ರೋಗ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಗಿದೆ.

Advertisement

ಕಳೆದ 3-4 ವರ್ಷಗಳಿಂದ ರೋಗ ಭಾದೆಯೇ ಇಲ್ಲದ ಮೆಕ್ಕೆಜೋಳಕ್ಕೆ ಮುಂಗಾರು, ಹಿಂಗಾರು ಎರಡು ಋತುಮಾನದ ಜೋಳಕ್ಕೂ ಲದ್ದಿ ಹುಳು ಸೇರಿದಂತೆ ಇತರೆ ರೋಗಗಳು ಆವರಿಸಿರುವುದರಿಂದ ಕೀಟನಾಶಕ ಬಳಕೆ ಇಲ್ಲದೆ ಮೆಕ್ಕೆಜೋಳ ಬೆಳೆಯಲು ಸಾಧ್ಯವಿಲ್ಲ ಎಂಬ ಮಟ್ಟಿಗೆ ಪರಿಸ್ಥಿತಿಯಿದೆ. ಹೀಗಾಗಿ ಬಿತ್ತನೆ ಮಾಡಿ ಒಂದು ತಿಂಗಳ ಆಸುಪಾಸಿನಲ್ಲಿರುವ ಮೆಕ್ಕೆಜೋಳಕ್ಕೆ ರೋಗ ಹರಡಿದೆ. ಈಗಾಗಲೇ ಎರಡು ಬಾರಿ ಕೀಟನಾಶಕ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಸಸಿಗಳ ಸುಳಿಯಲ್ಲಿ ಹುಳುಗಳು ಕಾಣಿಸಿಕೊಂಡು ಸುಳಿಯನ್ನೇ ತಿಂದು ಹಾಕುವ ಮೂಲಕ ಗಿಡಗಳ ಬೆಳವಣಿಗೆಗೆ ಈ ಹುಳುಗಳು ತೀವ್ರ ಅಡ್ಡಿಯನ್ನು ಉಂಟು ಮಾಡುತ್ತಿವೆ.

ಮೆಕ್ಕೆಜೋಳ ಬೆಳೆಯಲು ಎಕೆರೆಗೆ 20 ರಿಂದ 30 ಸಾವಿರ ಖರ್ಚು ಮಾಡಬೇಕಿದೆ. ಈಗಾಗಲೇ ಹಿಂಗಾರು ಹಂಗಾಮಿಗೆ ನೀರಾವರಿ ಸೌಲಭ್ಯ ಇರುವ ರೈತರು ಮೆಕ್ಕೆಜೋಳ ಬಿತ್ತನೆಗೆ ಹೆಚ್ಚಿನ ಆಸಕ್ತಿಯನ್ನು ತೋರಿರುವದು ಕಂಡುಬರುತ್ತಿದೆ. ಮೆಕ್ಕೆಜೋಳ ಬೆಳೆ
ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ವಿಂಟಲ್‌ ಜೋಳಕ್ಕೆ ಎರಡು ಸಾವಿರ ಆಸುಪಾಸಿನ ದರ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ನಷ್ಟವಿಲ್ಲದೆ ಕಡಿಮೆ ಇಳುವರಿ ಆದರೂ ಈಗಿನ ದರದ ನಡುವೆ ಹಾಕಿದ ಬಂಡವಾಳ ಮತ್ತು ಲಾಭವನ್ನು ಪಡೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ನೀರಿನ ಲಭ್ಯತೆ ಮತ್ತು ವಿದ್ಯುತ್‌ ಸಮಸ್ಯೆಗಳ ನಡುವೆ ಬೆಳೆಯನ್ನು ರೋಗದಿಂದ ಉಳಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.

ಹಿಂಗಾರು ಹಂಗಾಮಿಗೆ ತಾಲೂಕಿನಲ್ಲಿ ಏಕದಳ ಧಾನ್ಯಗಳಿಗಿಂತ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದು ಕೃಷಿ ಇಲಾಖೆ ಅಂಕಿಸಂಖ್ಯೆಗಳಿಂದ ಕಂಡುಬರುತ್ತಿದೆ. ಉತ್ತಮ ಮಳೆ ಆಗಿರುವ ಹಿನ್ನೆಲೆಯಲ್ಲಿ ರೈತರು ಹೆಚ್ಚು ತರಕಾರಿ ಬೆಳಗಳು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕಡೆ ಕೂಡ ಮುಖ ಮಾಡಿದ್ದಾರೆ. ಮಳೆ ತಂದ ಸಂತಸ ಹಿಂಗಾರು ಹಂಗಾಮಿನ ರೈತರ ಚಟುವಟಿಕೆಗಳಲ್ಲಿ ಜೀವ ಕಳೆಯನ್ನು ತಂದಿದೆ. ಕೃಷಿ ಆಧಾರಿತ ಎಲ್ಲಾ ವ್ಯಾಪಾರ ಚಟುವಟಿಕೆಗಳು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಉತ್ತಮವಾಗಿ ಗರಿಗೆದರಿವೆ.

ಕೃಷಿ ಕಾರ್ಮಿಕರಿಗೂ ಬಿಡುವಿಲ್ಲದ ಕೆಲಸ ದೊರೆಯುತ್ತಿರುವುದು ಹಳ್ಳಿಗಳಲ್ಲಿ ಕಾಣಸಿಗುತ್ತದೆ. ಪ್ರಸಕ್ತ ವರ್ಷವೆನೋ ಉತ್ತಮ ಮಳೆ ಆಗಿದೆ. ಇದನ್ನು ನಂಬಿ ಕೂರಲು ಸಾಧ್ಯವಿಲ್ಲ. ನಿರಂತರ ಕೆಲಸ ಸಿಗುವುದು ಕಷ್ಟ ಎಂದು ಅರಿತಿರುವ ಭರಮಸಾಗರ ಸುತ್ತಮುತ್ತಲ ಹಳ್ಳಿಗಳಲ್ಲಿ ಮುಂಗಾರು ಹಂಗಾಮು ಮುಗಿಯುತ್ತಿದ್ದಂತೆ ಕಾಫಿ ಎಸ್ಟೇಟ್‌ ಸೇರಿದಂತೆ ಮಲೆನಾಡಿನ ಜಿಲ್ಲೆಗಳಿಗೆ ಉದ್ಯೋಗ ಬಯಸಿ ಹಳ್ಳಿಗಳಿಂದ ಜನರು ಪ್ರತಿ ವರ್ಷದಂತೆ ಗುಳೆ ಹೋಗಿರುವುದು ಇದೆ.

Advertisement

ಒಟ್ಟಾರೆ 22743 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಚಿತ್ರದುರ್ಗ ತಾಲೂಕಿನ ಕಸಬಾ, ಹಿರೇಗುಂಟನೂರು, ಭರಮಸಾಗರ, ತುರುವನೂರು ಹೋಬಳಿಗಳಲ್ಲಿ ಬೆಳೆಯಲಾಗುತ್ತಿದೆ.

ಎಚ್‌.ಬಿ.ನಿರಂಜನ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next