ಸವಣೂರು: ಇದು ಸುವರ್ಣ ಮಹೋತ್ಸವ ಕಂಡ ಸರ್ವೆ ಗ್ರಾಮದ ಭಕ್ತಕೋಡಿ ಸ.ಹಿ.ಪ್ರಾ.ಶಾಲೆ. ಇಲ್ಲಿ 130ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಲ್ಲ. ಆದರೆ ಮಕ್ಕಳು ಪಾಠ ಕೇಳಲು ಕುಳಿತುಕೊಳ್ಳುವ ತರಗತಿ ಕೋಣೆ ಗಳು ಬಿರುಕು ಬಿಟ್ಟಿದೆ. ಮಾಡು ಗೆದ್ದಲು ಹಿಡಿದಿದೆ. ಶಾಲೆಯಲ್ಲಿರುವ ನಲಿ-ಕಲಿ ಕೊಠಡಿ ಹೊರತುಪಡಿಸಿ ಉಳಿದ ಎಲ್ಲ ತರಗತಿಗಳದ್ದು ಇದೇ ಅವಸ್ಥೆ.
ಈ ಶಾಲೆಯ ಅವಸ್ಥೆಯ ಬಗ್ಗೆ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ದುರಸ್ತಿ ಮಾಡಿ ಅಥವಾ ಹೊಸ ಕಟ್ಟಡ ನಿರ್ಮಿಸಿ ಎಂದು ಪೋಷ ಕರು, ಶಿಕ್ಷಕರು, ಎಸ್ಡಿಎಂಸಿ ಯವರು ಮನವಿ ಕೊಟ್ಟಿದ್ದಾರೆ. ಪೋಷಕರು ನಿತ್ಯವೂ ಆತಂಕ, ದುಗುಡ, ದುಮ್ಮಾನಗಳ ನಡುವೆಯೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಇರುವ ಶಾಲೆಯನ್ನೂ ಉಳಿಸಿಕೊಳ್ಳಲು ಪೋಷಕರು ಅಥವಾ ಗ್ರಾಮಸ್ಥರು ಪ್ರತಿಭಟನೆಯ ಹಾದಿಯನ್ನೇ ಹಿಡಿಯಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ.
ಅಪಾಯ ಸಂಭವಿಸುವ
ಮುನ್ನ ಎಚ್ಚೆತ್ತುಕೊಳ್ಳಿ:
2017ರಲ್ಲಿ ಸುವರ್ಣ ಮಹೋತ್ಸವ ಆಚರಿಸಿದ್ದ ಈ ಶಾಲೆಯಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣಗೊಂಡಿತ್ತು. ಅತ್ಯಾಕರ್ಷಕ ಗ್ಯಾಲರಿಯನ್ನೂ ಅದೇ ಸಮಯದಲ್ಲಿ ನಿರ್ಮಾಣ ಮಾಡ ಲಾಗಿತ್ತು. ಇಷ್ಟೆಲ್ಲಾ ಅಭಿವೃದ್ಧಿ ಕಂಡಿ ರುವ ಶಾಲೆಯ ಕೊಠಡಿ ಮಾತ್ರ ಇದೀಗ ಶಿಥಿಲಾವಸ್ಥೆಗೆ ತಲುಪಿರುವುದು ವಿಪ ರ್ಯಾಸವೇ ಸರಿ. ಇಲ್ಲಿನ ಪೋಷಕರ ಅಳಲನ್ನು ಜನಪ್ರತಿನಿಧಿಗಳು, ಅಧಿ ಕಾರಿಗಳು ಪುರಸ್ಕರಿಸದೇ ಇದ್ದಲ್ಲಿ ಅಪಾಯ ಉಂಟಾಗುವುದು ನಿಶ್ಚಿತ.
ಒಂದು ತರಗತಿ ಕೋಣೆ ಬಂದ್
ಅಪಾಯದ ಮುನ್ಸೂಚನೆಯ ಕಾರಣಕ್ಕೆ ಶಾಲೆಯ ಒಂದು ತರಗತಿ ಕೋಣೆಯನ್ನು ಬಂದ್ ಮಾಡಲಾಗಿದೆ. ಉಳಿದ ಕೋಣೆಗಳಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ. ಶಾಲೆಯ ಮಾಡು ಮಾತ್ರವಲ್ಲದೆ ಕಿಟಕಿ, ಬಾಗಿಲುಗಳು ಕೂಡಾ ತುಕ್ಕು ಹಿಡಿದು ಶಿಥಿಲಾವಸ್ಥೆಯಲ್ಲಿದೆ. ಬೆಂಚ್ ಡೆಸ್ಕ್ಗಳೂ ಸಮರ್ಪಕವಾಗಿಲ್ಲ. ಶಾಲೆಯ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಅಥವಾ ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು ಎನ್ನುವುದು ಪೋಷಕರ ಆಗ್ರಹವಾಗಿದೆ. ಕಟ್ಟಡ ಸುಸ್ಥಿಯಲ್ಲಿ ಇದೆ ಎಂದಾದರೆ ಈ ಶಾಲೆಯಲ್ಲಿ ತರಗತಿ ನಡೆಸಬಹುದು ಎನ್ನುವ ಬಗ್ಗೆ ಮೇಲಾಧಿಕಾರಿಗಳು ಲಿಖಿತವಾಗಿ ಬರೆದುಕೊಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
Related Articles
ಶಿಕ್ಷಣ ಇಲಾಖೆ ಹೊಣೆ
ಭಕ್ತಕೋಡಿ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಹಂಚು, ಮಾಡು ಬೀಳುವ ಸ್ಥಿತಿಯಲ್ಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯ ಶಿಥಿಲಾವಸ್ಥೆ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ನೀಡಿದ್ದೇವೆ. ಇಲ್ಲಿ ಏನಾದರೂ ಅಪಾಯ ಸಂಬವಿಸಿದ್ದಲ್ಲಿ ಶಿಕ್ಷಣ ಇಲಾಖೆ ಹೊಣೆಯಾಗಬೇಕಾದೀತು.
-ವಸಂತ್ ಪೂಜಾರಿ,
ಎಸ್.ಡಿ.ಎಂ.ಸಿ ಅಧ್ಯಕ್ಷರು
ಗಮನಹರಿಸಲಿ
ಶಾಲಾ ಕಟ್ಟಡ ಕುಸಿದು ಬೀಳುವ ಸಾಧ್ಯತೆ ಇದೆ. ಶಾಸಕರಿಗೆ, ಶಿಕ್ಷಣ ಇಲಾಗೂ ಮನವಿ ನೀಡಿದ್ದೇವೆ. ಶಿಕ್ಷಣ ಸಚಿವರಿಗೂ ವಿಷಯ ಮುಟ್ಟಿಸಲಾಗಿದೆ. ಇನ್ನಾದರೂ ಸಂಬಂಧಪಟ್ಟ ವರು ಇದರ ಬಗ್ಗೆ ಗಮನಹರಿಸಬೇಕೆನ್ನುವುದು ನಮ್ಮ ಆಗ್ರಹವಾಗಿದೆ.
-ರಾಧಾಕೃಷ್ಣ ಭಟ್ ಖಂಡಿಗ,
ಪೋಷಕರು