ಬೆಂಗಳೂರು: ‘ಸೆಪ್ಟೆಂಬರ್ 10’ನ್ನು ಕಾತರದಿಂದ ಕಾಯುತ್ತಿದ್ದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿಮಾನಿಳಿಗೆ ನಿರಾಶೆಯಾಗಿದೆ. ಗಣೇಶ ಚತುರ್ಥಿ (ಸೆ.10) ಯಂದು ತೆರೆ ಕಾಣಬೇಕಿದ್ದ ಶಿವಣ್ಣನ ಭಜರಂಗಿ-2 ಸಿನಿಮಾ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ.
ಸೆಪ್ಟೆಂಬರ್ 1 ರಂದು ಟ್ರೇಲರ್ ಹಾಗೂ ಗಣೇಶನ ಹಬ್ಬದ ನಿಮಿತ್ತ (ಸೆ.10) ಭಜರಂಗಿ-2 ಚಿತ್ರವನ್ನು ಬೆಳ್ಳಿ ಪರದೆ ಮೇಲೆ ಬಿಡುಗಡೆ ಮಾಡುವುದಾಗಿ ಇತ್ತೀಚಿಗೆ ಚಿತ್ರತಂಡ ಹೇಳಿ ಕೊಂಡಿತ್ತು. ಆದರೆ, ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡದೇ ಇರುವ ಕಾರಣ ಹಾಗೂ ವಾರಾಂತ್ಯದ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಟ್ರೇಲರ್ ಹಾಗೂ ಸಿನಿಮಾ ಬಿಡುಗಡೆಯ ದಿನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಇಂದು (ಆ.30) ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ ಶಿವಣ್ಣ, ‘ಕೋವಿಡ್ ಪ್ರಕರಣಗಳು ಜಾಸ್ತಿ ಆಗುತ್ತಿದೆ. ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಲಾಕ್ಡೌನ್ ಇರುವ ಕಾರಣ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿದ್ದೇವೆ. ಆದಷ್ಟು ಬೇಗೆ ಬಿಡುಗಡೆ ದಿನಾಂಕ ಘೋಷಿಸುತ್ತೇವೆ. ಬಹಳ ತಡ ಮಾಡುವುದಿಲ್ಲ. ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡಲು ನೋಡುತ್ತೇವೆ. ಜನ ಹೌಸ್ಫುಲ್ನಲ್ಲಿ ಸಿನಿಮಾ ನೋಡಿದರಷ್ಟೇ ಚಿತ್ರದ ಪವರ್ ಅನುಭವಿಸಬಹುದು. ಅಭಿಮಾನಿಗಳು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಆದಷ್ಟು ಬೇಗ ಟ್ರೇಲರ್ ರಿಲೀಸ್ ಮಾಡುತ್ತೇವೆ. ಟ್ರೇಲರ್ನಲ್ಲೇ ಬಿಡುಗಡೆ ದಿನಾಂಕ ಹೇಳುತ್ತೇವೆ’ ಎಂದಿದ್ದಾರೆ.
ಇನ್ನು ಈ ತಿಂಗಳು ರಾಜ್ಯ ಸರ್ಕಾರ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳಲ್ಲಿ ಶೇ 100 ಪ್ರೇಕ್ಷಕರಿಗೆ ಅವಕಾಶ ನೀಡಬಹುದು ಎನ್ನುವ ಭರವಸೆ ಹೊಂದಿದ್ದ ಬಿಗ್ಬಜೆಟ್ ಚಿತ್ರತಂಡಗಳು, ಜುಲೈ ಅಂತ್ಯದಲ್ಲಿ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದವು. ಆದರೆ, ಸರ್ಕಾರ ಈ ಕುರಿತು ಇಲ್ಲಿಯವರೆಗೂ ಯಾವುದೇ ಆದೇಶ ಹೊರಡಿಸದೇ ಇರುವುದರಿಂದ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗುತ್ತಿವೆ.