Advertisement

ಶಿವರಾತ್ರಿ ಜಾಗರಣೆಯಲ್ಲಿ ಭಜನೆ, ಯಕ್ಷಗಾನಕ್ಕೆ ಪೊಲೀಸರ ತಡೆ

01:00 AM Mar 06, 2019 | Team Udayavani |

ಮಂಗಳೂರು: ಶಿವರಾತ್ರಿ ಜಾಗರಣೆ ಪ್ರಯುಕ್ತ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಜನೆ-ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಾವೂರು ಠಾಣೆ ಇನ್ಸ್‌ಪೆಕ್ಟರ್‌ ಶಬ್ದ ಮಾಲಿನ್ಯದ ನೆಪವೊಡ್ಡಿ ಕಾರ್ಯಕ್ರಮಕ್ಕೆ ತಡೆಯುಂಟು ಮಾಡಿದ್ದು, ಪೊಲೀಸರ ಜತೆ ಭಕ್ತರು ಮಾತಿನ ಚಕಮಕಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

Advertisement

ವಿಷಯ ತಿಳಿದು ಶಾಸಕರಾದ ಡಾ| ಭರತ್‌ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್‌ ಕೂಡಲೇ ಸ್ಥಳಕ್ಕೆ
ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ಕಾರ್ಯಕ್ರಮಕ್ಕೆ ತಡೆಯೊಡ್ಡದಂತೆ ಪೊಲೀಸರಿಗೆ ತಾಕೀತು ಮಾಡಿದ್ದಲ್ಲದೆ ಯಕ್ಷಗಾನ ಮುಗಿಯುವ ತನಕ ಸ್ಥಳದಲ್ಲಿದ್ದು, ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.

ಈ ಘಟನೆಯ ಬಗ್ಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಕೂಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರ ಗಮನಕ್ಕೂ ತಂದಿದ್ದು, ಅವರು ಕೂಡ ಕೂಡಲೇ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕರೆಮಾಡಿ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿರುವುದು ಸರಿಯಲ್ಲ. ಕೂಡಲೇ ಕಾರ್ಯಕ್ರಮ ಮುಂದುವರಿಸಲು ಅವಕಾಶ ಮಾಡಿಕೊಡಿ ಎಂದು ಸೂಚಿಸಿದ್ದರು.

ತನಿಖೆಗೆ ಸಚಿವರ ಆದೇಶ 
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ‌ ಖಾದರ್‌, “ಇದು ತುಂಬಾ ಬೇಸರದ ಸಂಗತಿ. ಪೊಲೀಸರ ನಡೆ ಸರಿಯಲ್ಲ ಎಂದಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವ ಕಾವೂರು ಠಾಣೆ ಇನ್ಸ್‌ಪೆಕ್ಟರ್‌ ವರ್ತನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ಸೂಚಿಸಿದ್ದಾರೆ.

ಯಕ್ಷಗಾನಕ್ಕೆ ತಡೆ; ಖಂಡನೀಯ
ಪೊಲೀಸರ ಕ್ರಮ ಖಂಡನೀಯ. ಕಲೆಗೆ ಅಪಚಾರ ತೋರಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಹೀಗಾಗಬಾರದು ಎಂದು ಮಂಗಳೂರಿನ ಭಾÅಮರಿ ಯಕ್ಷಮಿತ್ರರು ಸಂಘಟನೆ ತಿಳಿಸಿದೆ.

Advertisement

ವರದಿ ಪಡೆಯಲಾಗುವುದು: ಆಯುಕ್ತರು
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್‌ ಆಯಕ್ತ ಸಂದೀಪ್‌ ಪಾಟೀಲ್‌ ಅವರು, ಸೋಮವಾರ ರಾತ್ರಿ ಒಂದು ದೂರಿನ ಆಧಾರದಲ್ಲಿ ಕಾವೂರು ಪೊಲೀಸ್‌ ಇನ್ಸ್‌ಪೆಕ್ಟರ್‌ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ದೇವಾಲಯಕ್ಕೆ ತೆರಳಿದ್ದಾರೆ. ಅವರು ದುರ್ವರ್ತನೆ ತೋರಿರುವುದಾಗಿ ದೇವಾಲಯದ ಆಡಳಿತ ವರ್ಗದವರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ವರದಿ ಪಡೆಯಲಾಗುವುದು. ಮಂಗಳೂರು ನಗರ ಪೊಲೀಸರು ಎಲ್ಲ ಧರ್ಮಗಳ ಭಾವನೆಗಳನ್ನು ಹಾಗೂ ವರ್ಷಗಳಿಂದ ನಡೆದುಕೊಂಡು ಬಂದಿರುವ ಎಲ್ಲ ಸಂಪ್ರದಾಯ-ಆಚರಣೆಗಳನ್ನು ಗೌರವಿಸುತ್ತಾರೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ 70ಕ್ಕೂ ಅಧಿಕ ದೇವಾಲಯಗಳಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಎಲ್ಲವೂ ಸುಗಮವಾಗಿ ನಡೆದಿವೆ. ಒಂದು ಕಡೆ ಮಾತ್ರ ಸಮಸ್ಯೆಯಾಗಿರುವುದಾಗಿ ತಿಳಿದುಬಂದಿದೆ ‘ಎಂದು ತಿಳಿಸಿದ್ದಾರೆ.

ಪೊಲೀಸರ ವರ್ತನೆ ಸರಿಯಲ್ಲ
ದೇವಸ್ಥಾನ, ಭಜನ ಮಂದಿರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ರುತ್ತವೆ. ಇಂತಹ ಸಂದರ್ಭ ಪೊಲೀಸರು ಏಕಾಏಕಿ ಪ್ರವೇಶಿಸಿ ತಡೆಯೊಡ್ಡಿರುವುದು ತಪ್ಪು. ಶಾಂತಿ-ಸುವ್ಯವಸ್ಥೆ ಕಾಯಬೇಕಿರುವ ಪೊಲೀಸರೇ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗುತ್ತಿರುವುದು ಸರಿಯಲ್ಲ.
-ಡಾ| ಭರತ್‌ ಶೆಟ್ಟಿ ವೈ., ಶಾಸಕ

ಪೊಲೀಸರ ವಿರುದ್ಧ ಕ್ರಮಕ್ಕೆ ಸಂಘಟನೆಗಳ ಆಗ್ರಹ
ಮಂಗಳೂರು:
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಕಾರ್ಯ ಕ್ರಮಗಳಿಗೆ ತಡೆಯೊಡ್ಡಿದ ಪೊಲೀಸರ ಕ್ರಮ ಖಂಡನೀಯ. ಅತಿರೇಕದ ಕ್ರಮದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳ ಆಗ್ರಹಿಸಿವೆ.

ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತೀ ವರ್ಷದಂತೆ ನಡೆಯುತ್ತಿದ್ದ ಆಚರಣೆಗೆ ಈ ಬಾರಿ ಪೊಲೀಸರು ತಡೆ ನೀಡಿರುವ ಘಟನೆಯಿಂದ ಹಿಂದೂಗಳ ಭಾವನೆಗಳಿಗೆ ನೋವಾಗಿದೆ. ಹಿಂದೂಗಳ ಮೇಲೆ ಮಾತ್ರ ಪೊಲೀಸರ ದರ್ಪವೇ? ಎಂದು ಪ್ರಶ್ನಿಸಿದರು.

ಹಿಂದೂಗಳ ಆಚರಣೆಗೆ ಅಡ್ಡಿಪಡಿಸಿರುವ ಪೊಲೀಸರ ದರ್ಪದ ನೀತಿಯನ್ನು ಸಹಿಸಲು ಸಾಧ್ಯವಿಲ್ಲ. ಯಕ್ಷಗಾನದಂತಹ ಪವಿತ್ರ ಕಲೆಯನ್ನು ಅರ್ಧದಲ್ಲಿ ತಡೆದ ಪೊಲೀಸ್‌ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಬಹುದು.
– ನಳಿನ್‌ ಕುಮಾರ್‌ ಕಟೀಲು, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next