Advertisement

ಪಠ್ಯದಿಂದ ಭಗತ್‌ ಸಿಂಗ್‌ ಪಾಠ ಕೈಬಿಟ್ಟಿದಕ್ಕೆ ಆಕ್ರೋಶ

03:21 PM May 25, 2022 | Team Udayavani |

ಜಗಳೂರು: ಪಠ್ಯಪುಸ್ತಕಗಳಲ್ಲಿ ಭಗತ್‌ ಸಿಂಗ್‌, ನಾರಾಯಣಗುರು, ಪೆರಿಯಾರ್‌ ಹಾಗೂ ಪ್ರಗತಿಪರ ಪಠ್ಯ ಕೈಬಿಟ್ಟು ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಭಾಷಣ ಹಾಗೂ ಕೋಮುವಾದಿ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿ ಎಸ್‌ಎಫ್‌ಐ ತಾಲೂಕು ಘಟಕದ ವತಿಯಿಂದ ಮಂಗಳವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಹಾಗೂ ರಾಜ್ಯ ಸಮಿತಿ ಸದಸ್ಯ ಅನಂತರಾಜ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ನೂತನ ಶಿಕ್ಷಣ ನೀತಿಯ ಜಾರಿಗೆ ಮುಂದಾಗಿದ್ದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚಿಸಿದೆ. ಈ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳವರು. ಇದರ ಪರಿಣಾಮವಾಗಿ ಈ ಸಮಿತಿ ಶಿಫಾರಸು ಮಾಡಿರುವ ಪಠ್ಯಕ್ರಮದಲ್ಲಿ ಈ ಮೊದಲಿದ್ದ ಹತ್ತನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ ಭಗತ್‌ ಸಿಂಗ್‌ ಮತ್ತು ಸಮಾಜ ವಿಜ್ಞಾನದಲ್ಲಿ ಸಾಮಾಜಿಕ ಸುಧಾರಕ ಶ್ರೀ ನಾರಾಯಣಗುರು, ಪೆರಿಯಾರ್‌ ರವರ ಕುರಿತ ಪಾಠ ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಗತಿಪರ, ವೈಚಾರಿಕತೆ, ಜಾತ್ಯತೀತ ಮೌಲ್ಯಗಳನ್ನು ಬೆಳೆಸಲು ಪೂರಕವಾಗಿದ್ದ ಅನೇಕ ಪಾಠಗಳನ್ನು ಕೈ ಬಿಡಲಾಗಿದೆ. ಬದಲಿಗೆ ಸಂಘ ಪರಿವಾರದ ಸಂಸ್ಥಾಪಕ ಹೆಡಗೇವಾರ್‌ ಭಾಷಣ ಹಾಗೂ ಮತಾಂಧತೆ, ಮೌಡ್ಯ, ಲಿಂಗ ತಾರತಮ್ಯ ಬಿತ್ತುವ ಪಠ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ನಾಡಿನ ಮಕ್ಕಳು ಓದುವ ಪಠ್ಯಪುಸ್ತಕಗಳ ಕೇಸರೀಕರಣಕ್ಕೆ ಮುಂದಾಗಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌ ತಾಲೂಕು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಆಂಜಿನಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next