Advertisement

ಕ್ರೀಡಾಪಟುಗಳ ತರಬೇತಿಗೆ ಉತ್ತಮ ವೇದಿಕೆ

02:57 PM Dec 04, 2022 | Team Udayavani |

ಬ್ಯಾಡಗಿ: ಯಾವುದೇ ಕ್ರೀಡಾಪಟು ಮುಖ್ಯವಾಹಿನಿಗೆ ಬರಬೇಕಾದಲ್ಲಿ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆಯಿದೆ. ಹೀಗಾಗಿ, ಒಳಾಂಗಣ ಕ್ರೀಡಾಂಗಣ (ಇನ್‌ಡೋರ್‌ ಸ್ಟೇಡಿಯಂ) ನಿರ್ಮಿಸುವ ಮೂಲಕ ತಾಲೂಕಿನಲ್ಲಿರುವ ರಾಷ್ಟ್ರಮಟ್ಟದ ಕ್ರೀಡಾ ಪಟುಗಳ ತರಬೇತಿಗೆ ಉತ್ತಮ ವೇದಿಕೆ ಕಲ್ಪಿಸಲಿದ್ದೇನೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ 2.80 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸುಸಜ್ಜಿತ ಕ್ರೀಡಾಂಗಣ, ಅನುಭವಿ ತರಬೇತುದಾರರು ಸೇರಿದಂತೆ ಇನ್ನಿತರ ಮೂಲ ಸೌಕರ್ಯವಿಲ್ಲದೇ ಕ್ರೀಡಾಪ್ರತಿಭೆಗಳು ಅರಳುವ ಮುನ್ನವೇ ಕಮರಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂಕಷ್ಟದ ಸಂದರ್ಭಗಳನ್ನು ಎದುರಿಸುವ ವೇಳೆಯಲ್ಲಿ ಕ್ರೀಡಾಪಟುಗಳಿಗಾಗಿ ಇನ್‌ಡೋರ್‌ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದ್ದು ತೃಪ್ತಿ ತಂದಿದೆ. ಅಷ್ಟೇ ಏಕೆ, ಕ್ರೀಡಾಂಗಣದಲ್ಲಿ ಮಹಿಳಾ ಕಬಡ್ಡಿ ತರಬೇತುದಾರರನ್ನೂ ನೇಮಕ ಮಾಡುವ ಮೂಲಕ ಪ್ರತಿಭಾನ್ವಿತ ಯುವ ಕ್ರೀಡಾಪಟುಗಳ ತರಬೇತಿಗೆ ಅವಕಾಶ ದೊರಕಿಸಿದ್ದೇನೆ ಎಂದರು.

ಇನ್ನೂ ಹೆಚ್ಚಿನ ಅನುದಾನ: ಬದುಕನ್ನೇ ಮುಡಿಪಾಗಿಟ್ಟು ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳ ಹೆಸರು ಮತ್ತು ಸಾಧನೆ ಜನಮಾನಸದಲ್ಲಿ ಬಹುಕಾಲ ಉಳಿಯದಿರುವುದು ದುರಂತದ ಸಂಗತಿ. ನಗರದ ಹೃದಯ ಭಾಗದಲ್ಲಿರುವ ಏಳೂವರೆ ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಉದ್ದೇಶ ಹೊಂದಿದ್ದು, ಕ್ರೀಡಾಪಟುಗಳಿಗೆ ವಸತಿ ನಿಲಯ, ಕುಡಿಯುವ ನೀರು, ಶೌಚಾಲಯ ಒಳಚರಂಡಿ ವ್ಯವಸ್ಥೆಗಳನ್ನು ಶೀಘ್ರದಲ್ಲಿಯೇ ಕಲ್ಪಿಸಿಕೊಡಲಿದ್ದೇನೆ ಎಂದರು.

ಇನ್ನೂ ಎರಡು ಹೈಮಾಸ್ಕ್: ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಶೇ.2 ರಷ್ಟು ಕ್ರೀಡಾನಿಧಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಈಗಾಗಲೇ 3 ಹೈಮಾಸ್ಕ್ ವಿದ್ಯುತ್‌ ಸಂಪರ್ಕ ಅಳವಡಿಸಲಾಗಿದೆ. ಆದರೆ, ಬೆಳಕು ಸಾಕಾಗುತ್ತಿಲ್ಲ. ಶೀಘ್ರದಲ್ಲಿಯೇ ಇನ್ನೆರಡು ಹೈಮಾಸ್ಕ್ ವಿದ್ಯುತ್‌ ಸೇರಿದಂತೆ ಪ್ರತ್ಯೇಕ ಕೊಳವೆ ಬಾವಿ ಮತ್ತು ಶೌಚಾಲಯ ನಿರ್ಮಾಣಕ್ಕೆ ಮುಂದಾಗುವ ಭರವಸೆ ನೀಡಿದರು.

Advertisement

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ ಛಲವಾದಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್‌, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಕಲಾವತಿ, ಹನುಮಂತ ಮ್ಯಾಗೇರಿ, ಸರೋಜಾ, ಚಂದ್ರಣ್ಣ ಶೆಟ್ಟರ, ಮಲ್ಲಮ್ಮ ಪಾಟೀಲ, ಮಂಜಣ್ಣ ಬಾರ್ಕಿ, ಮೆಹಬೂಬ್‌ ಅಗಸನಹಳ್ಳಿ, ಈರಣ್ಣ ಬಣಕಾರ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಎಚ್‌.ಲತಾ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್‌ ಖಜಾಂಚಿ ಗಂಗಾಧರ ಎಲಿ, ಸದಸ್ಯರಾದ ಜಿನ್ನಾ ಹಲಗೇರಿ, ಎಂ.ಆರ್‌.ಕೋಡಿಹಳ್ಳಿ, ವಿಜಯ ಮಾಳಗಿ, ಬ್ಯಾಡಗಿ ಬ್ಯಾಡ್ಮಿಂಟನ್‌ ಸಂಸ್ಥೆಯ ವನರಾಜ ಅಕ್ಕಿ, ಸದಸ್ಯರಾದ ಮಹೇಶ್‌ ನಾಯಕ್‌, ಶಂಕರ ಕಿಚಡಿ, ಪ್ರಕಾಶ(ಅಗಸನಹಳ್ಳಿ) ಜಮೀರ್‌ ರಿತ್ತಿ, ಬಸವರಾಜ ಸೊಟ್ಟೇರ, ನಿರ್ಮಿತಿ ಎಂಜಿನಿಯರ್‌ ಶಾಂತಕುಮಾರ್‌ ಇನ್ನಿತರರಿದ್ದರು. ವಾಲಿಬಾಲ್‌ ತರಬೇತುದಾರ ಜಮಾಅಹ್ಮದ್‌ ಸ್ವಾಗತಿಸಿ, ತಾಲೂಕು ಕ್ರೀಡಾಂಗಣದ ಕ್ರೀಡಾಧಿ ಕಾರಿ ಎಚ್‌.ಬಿ.ದಾಸರ ನಿರೂಪಿಸಿ, ಕಬಡ್ಡಿ ಕೋಚ್‌ ಮಂಜುಳ ಬಣಕಾರ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next