Advertisement

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

10:47 AM Apr 24, 2024 | Team Udayavani |

ಬೆಂಗಳೂರು: ಚೈತ್ರ ಮಾಸದ ಶುದ್ಧ ಪೌರ್ಣಿಮೆ ರಾತ್ರಿಯ ಬೆಳದಿಂಗಳ ಬೆಳಕಲ್ಲಿ ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಶ್ರದ್ಧಾ, ಭಕ್ತಿ, ವಿಜೃಂಭಣೆಯಿಂದ ಜರುಗಿತು.

Advertisement

ನೆರೆದಿದ್ದ ಅಸಂಖ್ಯಾತ ಭಕ್ತಸಮೂಹ ಕರಗದ ವೈಭವ ವನ್ನು ಕಣ್ತುಂಬಿಕೊಂಡಿತು. ಕರಗದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಭಜನೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆದವು. ರಾತ್ರಿಯಿಡೀ ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಸದ್ದು ಮೊಳಗಿದವು.

ಉತ್ಸವದ ಅಂಗವಾಗಿ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಭಕ್ತಿ ಸಂಭ್ರಮ ಮೇಳೈಸಿತ್ತು. ಇಡೀ ದಿನ ಭಕ್ತರಲ್ಲಿ ಸಡಗರ ಮನೆ ಮಾಡಿತ್ತು. ಝಗಮಗಿಸಿದ ವಿದ್ಯುತ್‌ ದೀಪಗಳು ಕರಗ ಉತ್ಸವದ ಮೆರಗು ಹೆಚ್ಚಿಸಿದವು. ದೇವಾಲಯದ ಆವರಣ ಮಲ್ಲಿಗೆ, ಕರ್ಪೂರದ ಪರಿಮಳದೊಂದಿಗೆ ಘಮಘಮಿ ಸುತ್ತಿತ್ತು. ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಾ  ಲಯ ದಿಂದ ಮಹಾಉತ್ಸವ ಹೊರಡು ತ್ತಿ ದ್ದಂತೆಯೇ, ಗರ್ಭಗುಡಿಯಿಂದ ದ್ರೌಪದಿದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು. ಗೋವಿಂದಾ… ಗೋವಿಂದಾ… ನಾಮ ಸ್ಮರಣೆಯೊಂದಿಗೆ ರಾತ್ರಿ 12.30ಕ್ಕೆ ಹೊರಟ ಕರಗದ ಮೇಲೆ ಭಕ್ತರು ಹೂವಿನ ಮಳೆಗೈದರು.

ನೂರ್ಮಡಿಸಿದ ಮಂಗಳ ವಾದ್ಯಗಳ ನಾದ: ಸಂಪ್ರದಾಯ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕರಾದ ವಿ. ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ದರು. ಮಲ್ಲಿಗೆ ಹೂವುಗಳಿಂದ ಮಿಂದೆದಿದ್ದ ಬೆಳ್ಳಿ ಮಿಶ್ರಿತ ಲೋಹದ ಕಿರೀಟವನ್ನು ತಲೆಯ ಮೇಲೆ ಹೊತ್ತು ಇಡೀ ರಾತ್ರಿ ತಿಗಳರಪೇಟೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಬಿರುಸಾಗಿ ಕಾಲ್ನಡಿಗೆಯಲ್ಲೇ ಸಾಗಿದರು. ವೀರಕುಮಾರರು ಕೈಯಲ್ಲಿ ಕತ್ತಿ ಹಿಡಿದು ಕರಗ ರಕ್ಷಣೆ ಮಾಡುತ್ತಾ ಮುಂದೆ ಮುಂದೆ ಹೆಜ್ಜೆ ಹಾಕಿದರು. ಮಂಗಳ ವಾದ್ಯದೊಂದಿಗೆ ಮುಂಜಾನೆ ಅರ್ಚಕರು ಹಾಗೂ ವೀರಕುಮಾರರು ಎಂದಿನಂತೆ ಧರ್ಮರಾಯ ದೇವಸ್ಥಾನದಿಂದ ಕರಗದ ಕುಂಟೆಗೆ ಸಾಗಿ ಗಂಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಹರಕೆ ಹೊತ್ತ ಭಕ್ತರು ದೇವಾ ಲಯದ ಮುಂದೆ ರಾಶಿಗಟ್ಟಲೆ ಕರ್ಪೂರ ಉರಿಸಿ ದರು. ಮಧ್ಯಾಹ್ನ 3ಕ್ಕೆ ದೇವಾಲಯದಲ್ಲಿ ಬಳೆತೊಡಿಸುವ ಶಾಸ್ತ್ರ ನರವೇರಿತು. ನಂತರ ಅರ್ಜುನ ಮತ್ತು ದ್ರೌಪದಿ ದೇವಿಗೆ ಶಾಸ್ತ್ರೋಕ್ತ ಪೂಜೆಗಳು ಜರುಗಿದವು.

ಕರಗ ಸಾಗಿದ ಮಾರ್ಗ: ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಗಣಪತಿ ದೇವಾಲಯ ಮತ್ತು ಮುತ್ಯಾಲಮ್ಮ ದೇವಾಲಯ ದಲ್ಲಿ ಪೂಜೆ ಸ್ವೀಕರಿಸಿ ಮಹಾ ರಥೋತ್ಸವ ಸಾಗಿತು. ಹಲ ಸೂರು ಪೇಟೆಯ ಆಂಜನೇಯ ಸ್ವಾಮಿ, ಶ್ರೀರಾಮ ಮತ್ತು ಶ್ರೀ ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ನಗರ್ತಪೇಟೆಯ ವೇಣು ಗೋಪಾಲ ಸ್ವಾಮಿ ದೇವಾಲಯದಿಂದ ಸಿದ್ದಣ್ಣ ಗಲ್ಲಿಯ ಭೈರೇದೇವರ ದೇವಾಲಯ, ಮಕ್ಕಳ ಬಸವ ಣ್ಣನ ಗುಡಿ ಮಾರ್ಗ ವಾಗಿ ಬಳೇಪೇಟೆಯ ಅಣ್ಣಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸ್ವೀಕರಿಸಿತು. ಸಿಟಿ ರಸ್ತೆ ಮೂಲಕ ಕುಂಬಾರಪೇಟೆ ಮುಖ್ಯರಸ್ತೆ ಪ್ರವೇಶಿಸಿತು.

Advertisement

ಗೊಲ್ಲರಪೇಟೆ, ತಿಗಳರಪೇಟೆಗ ಕುಲಬಾಂಧವರ ಮನೆಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಿತು. ಹಾಲು ಬೀದಿ, ಕಬ್ಬನ್‌ ಪೇಟೆ ಮೂಲ ಸುಣಕಲ್‌ ಪೇಟೆ ಮಾರ್ಗವಾಗಿ ಕುಲ ಪುರೋಹಿತರ ಮನೆಗಳಲ್ಲಿ ಪೂಜಾದಿಗಳನ್ನು ಸ್ವೀಕರಿಸಿತು. ನರಸಿಂಹ ಜೋಯಿಸ್‌ ಗಲ್ಲಿ ಮೂಲಕ ಹಾದು ದೇವಾಲಯ ಸೇರಿತು. ಇದೇ ವೇಳೆ ಭಾವೈಕ್ಯತೆಯ ಸಂಗಮವಾದ ಅರಳೇಪೇಟೆಯ “ಮಸ್ತಾನ್‌ ಸಾಬ್‌ ದರ್ಗಾ’ ಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿ ನಂತರ ಕರಗ ಉತ್ಸವ ತೆರಳುವುದು ವಾಡಿಕೆ. ಅದರಂತೆ ಈ ಬಾರಿಯೂ ಶಾಸ್ತ್ರಬದ್ಧವಾಗಿ ನಡೆಯಿತು.

ವಿವಿಧೆ‌ಡೆಯಿಂದ ಬಂದ ಭಕ್ತರ ದಂಡು: ಬೆಂಗಳೂರಿನ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಕರಗ ಕರ್ನಾಟಕ ಮಾತ್ರವಲ್ಲ ಹೊರರಾಜ್ಯಗಳಲ್ಲಿ ಖ್ಯಾತಿ ಪಡೆದಿದೆ. ಆ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಬೆಂಗಳೂರು ಕರಗ ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ , ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್‌, ಸೇಲಂ , ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ನೆರದಿದ್ದರು.

ಧರ್ಮರಾಯಸ್ವಾಮಿ ದೇಗುಲಕ್ಕೆ ಸಿಎಂ ಭೇಟಿ

ಐತಿಹಾಸಿಕ ಬೆಂಗಳೂರು ಕರಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಮಂಗಳವಾರ ರಾತ್ರಿ ತಿಗಳರಪೇಟೆಯ ಶ್ರೀಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ಧತೆಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಕರಗ ಉತ್ಸವದ ಬಗ್ಗೆ  ಸಿದ್ಧತೆ ಕುರಿತು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಿಂದ ಮಾಹಿತಿ ಪಡೆದರು. ಈ ವೇಳೆ ಬಿಡಿಎ ಅಧ್ಯಕ್ಷ ಹ್ಯಾರೀಸ್‌ ಮತ್ತಿತರಿದ್ದರು.

3 ಸಾವಿರ ಕೆ.ಜಿ. ಸೇಲಂ ಮಲ್ಲಿಗೆ ಮೊಗ್ಗು

ಐತಿಹಾಸಿಕ ಕರಗಕ್ಕೆ ಸೇಲಂ ಮಲ್ಲಿಗೆ ಹೂವು ಬಳಕೆ ಮಾಡಲಾಗಿತ್ತು. 4 ಸಾವಿರ ಮಲ್ಲಿಗೆ ಹಾರಗಳು ಸೇರಿದಂತೆ 3 ಸಾವಿರ ಕೆ.ಜಿ. ಸೇಲಂ ಮಲ್ಲಿಗೆ ಹೂವು ಬಳಸಲಾಯಿತು. ಕರಗದಲ್ಲಿ ಪಾಲ್ಗೊಳ್ಳುವ ಸಹಸ್ರಾರು ವೀರಗಾರರಿಗೆ ಕರಗವಸ್ತ್ರ ಮತ್ತು ಪೇಟವನ್ನು ವಿತರಿಸಲಾಯಿತು. ದೀಕ್ಷೆ ಪಡೆದ ಸಾವಿರಾರು ವೀರಕುಮಾರರಿಗೆ ದೀಕ್ಷಾ ಖಡ್ಗಗಳನ್ನೂ ಉಚಿತವಾಗಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next