Advertisement

ಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹ

12:20 AM May 24, 2022 | Team Udayavani |

ಉಡುಪಿ: ಜಿಲ್ಲೆಯ ಬ್ರಹ್ಮಾವರದ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ರವಿವಾರ ಮುಂಜಾನೆ ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಜೋಡಿಯ ಪ್ರಕರಣ ಸಾಕಷ್ಟು ಅನುಮಾನಗಳನ್ನು ಹುಟ್ಟ ಹಾಕುತ್ತಿವೆ. ಯುವ ಜೋಡಿಯ ಮೃತದೇಹವು ಕಾರಿನ ಹಿಂಬದಿ ಸೀಟಿನಲ್ಲಿ ತಬ್ಬಿಕೊಂಡಿದ್ದ ಸ್ಥಿತಿಯಲ್ಲಿತ್ತು ಎಂದು ಹೇಳಲಾಗುತ್ತಿದ್ದು, ಹಲವು ಸಂಶಯಗಳನ್ನು ಮೂಡಿಸಿದೆ.

Advertisement

ಕಾರಿನೊಳಗೆ ಪೆಟ್ರೋಲ್‌ ಸುರಿದುಕೊಂಡು ಯುವ ಜೋಡಿ ಯಶವಂತ್‌ ಯಾದವ್‌ (24) ಹಾಗೂ ಜ್ಯೋತಿ (22)ಸಾವನ್ನಪ್ಪಿದ್ದು, ಅಸಹಜ ಸಾವು ಪ್ರಕರಣವೆಂದು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಲಂಕಷವಾಗಿ ಪ್ರಕರಣದ ತನಿಖೆಗಿಳಿದ ಪೊಲೀಸರಿಗೂ ಕೂಡ ಹಲವು ಅನುಮಾನಗಳು ಮೂಡಿವೆ.

ಕೊಲೆಯ ಶಂಕೆ
ಪ್ರಕರಣದ ಕುರಿತು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಡುಪಿಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಅವರು, ಕೊಲೆ ನಡೆದಿರಬಹುದು ಎನ್ನುವ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಅವರಿಬ್ಬರೂ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು. ರಸ್ತೆಯ ಡೆಡ್‌ ಎಂಡ್‌ನ‌ಲ್ಲಿ ಕಾರು ಸುಡುತ್ತಿತ್ತು. ಸಾಮಾನ್ಯವಾಗಿ ಕಾರಿನ ಒಳಗೆ ಬೆಂಕಿ ಹಾಕಿಕೊಂಡು ಯಾರೂ ಆತ್ಮಹತ್ಯೆ ಮಾಡುವುದಿಲ್ಲ.

ಹೀಗಾಗಿ ಹಲವು ಸಂಶಯಗಳು ಇರುವುದರಿಂದ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ ಎಂದರು.

Advertisement

ಇಂದ್ರಾಳಿಯಲ್ಲಿ ಅಂತ್ಯಕ್ರಿಯೆ
ಜ್ಯೋತಿಯ ಕುಟುಂಬಸ್ಥರಿಗೆ ಸಾವಿನ ಬಗ್ಗೆ ಬಹಳ ಅಸಮಾಧಾನವಿತ್ತು. ವೀಡಿಯೋಗಳನ್ನು, ಸಾಂದರ್ಭಿಕ ಸಾಕ್ಷಿಗಳನ್ನು ನೋಡಿ ಮನವರಿಕೆಯಾಗಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಇಂದ್ರಾಳಿ ಚಿತಾಗಾರದಲ್ಲಿ ಇಬ್ಬರ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದಾರೆ.

ಡೆತ್‌ನೋಟ್‌ ಪತ್ತೆ
ಮಂಗಳೂರಿನ ಬಾಡಿಗೆ ಮನೆಯಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಆ ಡೆತ್‌ನೋಟಿನಲ್ಲೇನಿದೆ ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಯಶವಂತ್‌ ಯಾದವ್‌ ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದು, ಯುವತಿ ಜ್ಯೋತಿ ಪರಿಶಿಷ್ಟ ಜಾತಿಗೆ ಸೇರಿದವರು. ಈ ಕಾರಣಕ್ಕಾಗಿ ಅವರಿಬ್ಬರ ಮದುವೆಗೆ ತೊಂದರೆ ಇದ್ದಿರಬಹುದು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಎರಡೂ ಕುಟುಂಬಗಳಿಗೆ ತಿಳಿದಿತ್ತು. ಜ್ಯೋತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರಿಂದ ಮದುವೆಗೆ ಹುಡುಗನ ಮನೆಯಲ್ಲಿ ಅಸಮಾಧಾನ ಇತ್ತು.

ಮದುವೆಯಾಗಿದೆ ಎಂದು ಸುಳ್ಳು ಹೇಳಿದ್ದರು !
ಯಶವಂತ ಮತ್ತು ಜ್ಯೋತಿಗೆ ಮದುವೆ ಆಗಿರಲಿಲ್ಲ. ಬಾಡಿಗೆ ಮನೆ ಮತ್ತು ಕಾರು ಪಡೆದುಕೊಳ್ಳುವಾಗ ತಾವಿಬ್ಬರು ಗಂಡ-ಹೆಂಡತಿ ಎಂದು ಹೇಳಿಕೊಂಡಿದ್ದಾರೆ. ಭವಿಷ್ಯದ ದೃಷ್ಟಿಯಲ್ಲಿ ಧೈರ್ಯವನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಲೂಬಹುದು. ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇದು ದುಡುಕಿನ ನಿರ್ಧಾರವಾಗಿದೆ. ಇನ್ನೂ 23 ವರ್ಷದವರಾಗಿರುವುದರಿಂದ ಕುಟುಂಬಸ್ಥರು ನೊಂದುಕೊಂಡಿದ್ದಾರೆ ಎಂದು ಎಎಸ್ಪಿಯವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಕಾಡುವ ಪ್ರಶ್ನೆಗಳು
– ಕಾರಿನ ಮುಂಬದಿ ಸೀಟಿನಲ್ಲಿ ಯಾರಾದರೂ ಇದ್ದರೇ ?
– ಸೀಮೆಎಣ್ಣೆ/ಪೆಟ್ರೋಲ್‌ ಎಲ್ಲಿ ಖರೀದಿಸಿದರು?
– 3 ಗಂಟೆ ಮುಂಜಾನೆಯವರೆಗೂ ಸುತ್ತಾಡಿದ್ದೇಕೆ?
-ಸಿಸಿ ಕೆಮರಾದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲೇನಿದೆ?
– ಬಾಡಿಗೆ ಮನೆ ಮಾಡಿಕೊಂಡವರು ದಿಢೀರ್‌ ನಿರ್ಧಾರ ಬದಲಿಸಿದ್ದು ಏಕೆ ?
– ಅವರ ಕಾರನ್ನು ಯಾರಾದರೂ ಫಾಲೋ ಮಾಡಿಕೊಂಡು ಬಂದಿದ್ದರೇ?
– ಕಾರಿನ ಹಿಂಬದಿ ಸೀಟಿನಲ್ಲಿ ಅವರನ್ನು ಕೂಡಿ ಹಾಕಿ ಹೊರಗಿನಿಂದ ಕಾರಿಗೆ ಬೆಂಕಿ ಹಚ್ಚಲಾಯಿತೇ?
– ಇಬ್ಬರೂ ವಾಟ್ಸ್‌ಆ್ಯಪ್‌ ಮೆಸೇಜ್‌ ಮಾಡಿದ್ದರು. ಅದನ್ನು ಅವರೇ ಮಾಡಿದ್ದರೇ?
– ಹೊಸ ಜೀವನ ರೂಪಿಸಿಕೊಳ್ಳಲು ಬಂದವರು ಈ ಕೃತ್ಯ ನಡೆಸಲು ಸಾಧ್ಯವೇ ?
(ಪೊಲೀಸರ ಸಮಗ್ರ ತನಿಖೆಯಿಂದ ಮಾತ್ರ ಇದು ಕೊಲೆಯೋ? ಆತ್ಮಹತ್ಯೆಯೋ? ಎನ್ನುವುದು ತಿಳಿದು ಬರಲಿದೆ)

 

Advertisement

Udayavani is now on Telegram. Click here to join our channel and stay updated with the latest news.

Next