Advertisement

Bengaluru: ನೀರು ಹಾರಿದ್ದಕ್ಕೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ ಆಟೋ ಚಾಲಕ

08:56 AM Jul 22, 2024 | Team Udayavani |

ಬೆಂಗಳೂರು: ಕ್ಯಾಬ್‌ ಹೋಗುವಾಗ ಆಟೋ ಮೇಲೆ ನೀರು ಹಾರಿತು ಎಂಬ ಕಾರಣಕ್ಕೆ ಕೆಲ ಕಿಡಿಗೇಡಿಗಳು ಕ್ಯಾಬ್‌ ತಡೆದು ಕಲ್ಲು ಎತ್ತಿಹಾಕಿ ಪುಂಡಾಟ ಮೆರೆದಿರುವ ಘಟನೆ ಜಾಲಹಳ್ಳಿಯ ಶೆಟ್ಟಿಹಳ್ಳಿ ಸಮೀಪದ ಮಲ್ಲಸಂದ್ರ ಮುಖ್ಯರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ಯಾದಗಿರಿ ಮೂಲದ ಮಲ್ಲಿಕಾರ್ಜುನ್‌ ಎಂಬವರ ಕ್ಯಾಬ್‌ ಘಟನೆಯಲ್ಲಿ ಜಖಂಗೊಂಡಿದೆ.

ಪೊಲೀಸರಿಗೆ ದೂರು ನೀಡಲು ಮಲ್ಲಿಕಾರ್ಜುನ್‌ ಹೆದರಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಿಡಿಗೇಡಿಗಳ ಪುಂಡಾಟದ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ನಗರ ಪೊಲೀಸರಿಗೆ ಟ್ಯಾಗ್‌ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಏನಿದು ಘಟನೆ?: ಚಾಲಕ ಮಲ್ಲಿಕಾರ್ಜುನ್‌ ತಮ್ಮ ಕಾರನ್ನು ಓಲಾ- ಊಬರ್‌ಗೆ ಆಟ್ಯಾಚ್‌ ಮಾಡಿಕೊಂಡು ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ಕೆಲಸ ಮುಗಿಸಿಕೊಂಡು ತಮ್ಮ ಕ್ಯಾಬ್‌ ನಲ್ಲಿ ಮನೆ ಕಡೆಗೆ ಹೊರಟ್ಟಿದ್ದರು.

ಜಾಲಹಳ್ಳಿಯ ಅಯ್ಯಪ್ಪ ದೇವಸ್ಥಾನದ ಬಳಿ ಹೋಗುವಾಗ ರಸ್ತೆಯಲ್ಲಿನ ನೀರು ಆಟೋ ಮೇಲೆ ಹಾರಿದೆ. ಅಷ್ಟಕ್ಕೆ ಆಟೋ ಚಾಲಕ ಹಾಗೂ ಆತನ ಸ್ನೇಹಿತ ಕ್ಯಾಬ್‌ ತಡೆದು ಜಗಳ ಮಾಡಿದ್ದಾರೆ.

Advertisement

ಕ್ಯಾಬ್‌ ಚಾಲಕ ಮಲ್ಲಿಕಾರ್ಜುನ್‌ ಆಟೋ ತೊಳೆದು ಕೊಡುವುದಾಗಿ ಹೇಳಿದರೂ, ಕಿಡಿಗೇಡಿ ಗಳು ದಪ್ಪ ಕಲ್ಲು ಎತ್ತಿ ಕಾರಿನ ಮೇಲೆ ಹಲವು ಬಾರಿ ಹಾಕಿ ಪುಂಡಾಟ ಮೆರೆದಿದ್ದಾರೆ. ಅದರಿಂದ ಕಾರಿನ ಮುಂಭಾಗದ ಗಾಜು ಹಾಗೂ ಬಾನೆಟ್‌ ಹಾನಿಯಾಗಿದೆ.

ಈ ಘಟನೆಯನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ನಗರ ಪೊಲೀಸರಿಗೆ ಟ್ಯಾಗ್‌ ಮಾಡಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next