Advertisement

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

07:39 PM Sep 29, 2020 | mahesh |

ಕಾರ್ಕಳ: ರಾಜ್ಯದ ಸುಮಾರು 9 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಅರಣ್ಯವೆಂದು ಪರಿಭಾವಿಸಿದ್ದ ಜಮೀನಿನ ಪೈಕಿ 6 ಸಾವಿರ ಹೆಕ್ಟೇರ್‌ಗಳನ್ನು ಕಂದಾಯ ಇಲಾಖೆಗೆ ಪಡೆಯಲು ರಾಜ್ಯ ಸರಕಾರ ನಿರ್ಧರಿಸಿದ್ದು, ಇದರಿಂದ ಜಿಲ್ಲೆಯ ಸುಮಾರು 30 ಸಾವಿರ ಬಡ ಕೃಷಿಕರಿಗೆ ಲಾಭವಾಗಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಕಾರ್ಕಳ ಪ್ರವಾಸಿ ಮಂದಿರಲ್ಲಿ ಮಂಗಳವಾರ ಮಾಧ್ಯಮ ಸಂವಾದ ನಡೆಸಿದ ಅವರು ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್‌ ಭೂಮಿಯನ್ನು ಡೀಮ್ಡ್ ಫಾರೆಸ್ಟ್‌ನಿಂದ ಕೈ ಬಿಡಬೇಕು ಎಂದು ಹಿಂದಿನ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಡೀಮ್ಡ್ ಫಾರೆಸ್ಟ್‌ ಗುರುತಿಸುವ ವಿಚಾರದಲ್ಲಿದ್ದ ಗೊಂದಲದಿಂದ ಸಾಧ್ಯವಾಗಿರಲಿಲ್ಲ. ಸುಪ್ರೀಂಕೋರ್ಟ್‌ನ ಆದೇಶದಿಂದಲೂ ತೊಂದರೆ ಗಳಾಗಿತ್ತು. ಸರಕಾರದ ಸಚಿವರಾದ ಅಶೋಕ, ಆನಂದ್‌ ಸಿಂಗ್‌ ಅವರು ಸದನದಲ್ಲಿ ಡೀಮ್ಡ್ ಭೂಮಿಯನ್ನು ಪಡೆಯುವ ಮಹತ್ವದ ನಿರ್ಧಾರ ತೆಗೆದುಕೊಂಡಿರುವರು. ಇದರಿಂದ ಅಕ್ರಮ ಸಕ್ರಮ 94ಸಿ ಸಹಿತ ವಿವಿಧ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿದ ಬಡವರಿಗೆ ಅನುಕೂಲವಾಗಲಿದೆ ಎಂದರು.

ಶೀಘ್ರ ಸ್ಪಷ್ಟ ನೀತಿ
ರೈತರಿಗೆ ಕುಮ್ಕಿ ಕಾನೆ ಬಾನೆ, ಗೇರು ತೋಟ ಹಂಚುವ ವಿಚಾರಲ್ಲಿ ಸರಕಾರ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ 5 ಎಕರೆ ನಿಗದಿಪಡಿಸಿ ನೀಡುವ ವಿಚಾರದಲ್ಲಿ ಸರಕಾರ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಯಾವ ರೀತಿ ನೀಡಬೇಕು ಎನ್ನುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಸರಕಾರ ಶೀಘ್ರ ಬರಲಿದೆ ಎಂದರು.

ಮರಳುಗಾರಿಕೆ ಹದ್ದು ಬಸ್ತಿನಲ್ಲಿಡಲು ಸಾಧ್ಯ
ಮರಳುಗಾರಿಕೆ ಸಂಬಂಧ ಸರಕಾರದ ಗೈಡ್‌ಲೈನ್‌ ಇದೆ. ಎರಡು ರೀತಿಯ ಮರಳುಗಾರಿಕೆ ನೀತಿ ಜಾರಿಯಲ್ಲಿದೆ. ಗ್ರಾ.ಪಂಗಳಿಗೆ ಮರಳು ತೆಗೆಯಲು ಅಧಿಕಾರ ನೀಡಲಾಗಿದೆ. ಪಿಡಿಒ ಹಾಗೂ ಗಣಿಗಾರಿಕೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿರುವ ಮರಳಿನ ಮೂಲಕಗಳನ್ನು ಗುರುತಿಸಿ, ಮರಳು ಎತ್ತಲು ಅನುಮತಿ ನೀಡಲಾಗಿದೆ. ಅದನ್ನು ತಾಲೂಕು ಸಮಿತಿ ಮೂಲಕ ವಿತರಣೆ ಮಾಡಲು ಅವಕಾಶವಿದೆ. ಅಗತ್ಯವಿರುವವರು ಸ್ವಂತ ವಾಹನದಲ್ಲಿ ನಿಗದಿತ ದರ ನೀಡಿ ಕೊಂಡುಹೋಗಲು ಅವಕಾಶವಿದೆ. ಸರೋವರ, ನದಿ ಇತ್ಯಾದಿ ದೊಡ್ಡ ಮಟ್ಟದ ಮರಳನ್ನು ಗಣಿಗಾರಿಕೆ ಇಲಾಖೆಯವರು ಜಿಲ್ಲೆಯಲ್ಲಿ ರಚನೆಯಾಗಿರುವ ಎಂಎಸ್‌ಐಎಲ್‌ ಮೂಲಕ ವಿತರಣೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ಈ ಸಂಬಂಧ ಕಾನೂನಿನಡಿ ವಿತರಣೆಗೆ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದರು. ಅಕ್ರಮ ಮರಳುಗಾರಿಕೆಯನ್ನು ಪೂರ್ಣ ವಾಗಿ ತಡೆಲು ಸಾಧ್ಯವಿಲ್ಲ. ತಕ್ಕ ಮಟ್ಟಿಗೆ ಹದ್ದುಬಸ್ತಿನಲ್ಲಿಡಲು ಸಾಧ್ಯವಿದೆ ಎಂದರು.

ಖಾತೆ ಬದಲಾವಣೆ ಸಮಸ್ಯೆ ನಿವಾರಣೆಗೆ ಯತ್ನ
ದ.ಕ ಜಿಲ್ಲೆಗಳಲ್ಲಿ ತುಂಡು ಭೂಮಿಗಳ ಪ್ರಮಾಣ ಹೆಚ್ಚಿರುವುದರಿಂದ ಖಾತೆ ಬದಲಾವಣೆ ವಿಚಾರದಲ್ಲಿ ತೊಂದರೆ ಗಳಾಗಿವೆ. ಬೇರೆ ಜಿಲ್ಲೆಗಳಲ್ಲಿ 9/11 ವಿಚಾರದಲ್ಲಿ ಸಮಸ್ಯೆಗಳಿಲ್ಲ. ಈ ವಿಚಾರವಾಗಿ ಕಾಗೋಡು ತಿಮ್ಮಪ್ಪರವರು ಸಚಿವರಾಗಿದ್ದಾಗ ಗಮನ ಸೆಳೆದಿದ್ದೆ. ಕರಾವಳಿ ಜಿಲ್ಲೆಗೆ ಆಗುತ್ತಿರುವ ತೊಂದರೆ ಬಗ್ಗೆ ಪ್ರಸ್ತಾಪಿಸಿದ್ದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

Advertisement

ಸ್ಥಾನ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ
ಸಂಪುಟ ಪುನಾರಚನೆ ಮತ್ತು ವಿಸ್ತರಣೆಯಾ ಈ ಕುರಿತು ಕೇಂದ್ರ ಹಾಗೂ ರಾಜ್ಯದ ಮುಖಂಡರು ನಿರ್ಧಾರ ಕೈಗೊಳ್ಳುತ್ತಾರೆ. ಮುಖ್ಯಮಂತ್ರಿಗಳ ಮೇಲೆ ಪಕ್ಷದ ಮುಖಂಡರು ಪೂರ್ಣ ವಿಶ್ವಾಸ ಇರಿಸಿದ್ದಾರೆ. ಮಂತ್ರಿ ಮಂಡಲದಲ್ಲಿ ಯಾರು ಇರುತ್ತಾರೆ ಎನ್ನುವುದನ್ನು ರಾಷ್ಟ್ರೀಯ ಮುಖಂಡರು, ರಾಜ್ಯಧ್ಯಕ್ಷರು, ಮುಖ್ಯಮಂತಿಗಳು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪರವರು ಪಕ್ಷವನ್ನಯ ಕಟ್ಟಿ ಬೆಳೆಸುವಲ್ಲಿ ಮುಂಚೂಣಿ ನಾಯಕರು ಎಂದರು.

ದೇವಸ್ಥಾನಗಳಲ್ಲಿ ಗೋಶಾಲೆಗೆ ಜಾಗ ಮೀಸಲು
ಆಯ್ದ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಗೋಶಾಲೆ ತೆರೆಯಲು ಯೋಜನೆ ರೂಪಿಸಲಾಗಿದ್ದು, 5ರಿಂದ 10 ಎಕರೆ ಜಾಗ ಇದ್ದಲ್ಲಿ ಮುಜರಾಯಿ ಇಲಾಖೆಯಿಂದ ಗೋಶಾಲೆ ನಿರ್ಮಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎರಡು ಕಡೆ 10 ಎಕರೆಗೂ ಅಧಿಕ ಸ್ಥಳವನ್ನು ದೇವಸ್ಥಾನದ ವತಿಯಿಂದ ಬೇಲಿ ಹಾಕಲಾಗಿದೆ. ಗೋಮಾಳ ಜಾಗದ ಜತೆಗೆ ಅವಶ್ಯವಿದ್ದಲ್ಲಿ ಸರಕಾರಿ ಜಾಗವನ್ನು ಪಡೆಯಲಾಗುವುದು, ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸೂಚಿಸಲಾಗಿದೆ. ಬೀಡಾಡಿ ಗೋವುಗಳು ಗೊಂದಲವಿಲ್ಲದೆ ಗೋಶಾಲೆಗೆ ಸೇರುವಂತಾಗಬೇಕು ಎಂದು ಸಚಿವರು ಹೇಳಿದರು.

ಶೀಘ್ರ ಪೂರ್ಣ ಪ್ರಮಾಣದ ವ್ಯವಸ್ಥಾಪನ ಸಮಿತಿ
ರಾಜ್ಯದ ಅವಧಿ ಪೂರ್ಣಗೊಂಡ 84 ದೇವಸ್ಥಾನಗಳಿಗೆ ಅರ್ಜಿ ಆಹಾ°ನಿಸಲಾಗಿದೆ. ಪೊಲೀಸ್‌ ಪರಿಶೀಲನೆ ವೇಳೆ ಕೆಲ ದೇವಸ್ಥಾನಗಳ ಸಮಿತಿಗೆ ಅರ್ಜಿಸಲ್ಲಿಸಿದವರಲ್ಲಿ ಅನ್ಯ ರಾಜ್ಯಗಳ ಮಂದಿ ಇರುವುದು ಕಂಡು ಬಂದಿದೆ. ತಮಿಳುನಾಡು, ಕೇರಳ ರಾಜ್ಯದವರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಅವರನ್ನು ನೇಮಕ ಮಾಡಬಾರದು ಅಂತ ಉದ್ದೇಶವಲ್ಲ. ಆದರೇ ಈ ವಿಚಾರವಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗಿ ವಿಳಂಬವಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ರಾಜ್ಯದ 65 ದೇವಸ್ಥಾನಗಳಿಗೆ ಆಡಳಿತ ಸಮಿತಿ ನೇಮಕ ಮಾಡಲಾಗುವುದು. ಜಿಲ್ಲೆಗಳ ಬಿ ಮತ್ತು ಸಿ ದರ್ಜೆ ದೇವಸ್ಥಾನಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ, ಧಾರ್ಮಿಕ ಪರಿಷತ್‌ ಈಗಾಗಲೇ ಸಮಿತಿ ರಚನೆ ಮಾಡಿದೆ. 30 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಪೂರ್ಣವಾಗಿದೆ. ಉಳಿದ ಅವಧಿ ಪೂರ್ಣವಾದ ದೇವಸ್ಥಾನಗಳಿದ್ದಲ್ಲಿ ಶೀಘ್ರ ಅರ್ಜಿ ಆಹ್ವಾನಿಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ವ್ಯವಸ್ಥಾಪನ ಸಮಿತಿಯನ್ನು ಪೂರ್ಣ ಪ್ರಮಾಣದಲ್ಲಿ ನೇಮಕ ಮಾಡಲಾಗುವುದು. ದೇವಸ್ಥಾನಗಳಿಗೆ ಸಿಸಿ ಕೆಮರಾ ಸಹಿತ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ಮಸೂದೆಯಿಂದ ರೈತರಿಗೆ ಲಾಭ
ರೈತ ತಾನು ಬೆಳೆದಿದ್ದನ್ನು ಎಲ್ಲಾದರೂ ಮಾರಾಟ ಮಾಡಬಹುದು. ರೈತನಿಗೆ ಉತ್ತಮ ದರ ದೊರೆತು ಅವರಿಗೆ ಅನುಕೂಲವಾಗುವುದು ಎಪಿಎಂಸಿ ಕಾಯ್ದೆಯ ಉದ್ದೇಶ. ದಲ್ಲಾಳಿಗಳು ಮುಂಗಡ ಹಣ ಕೊಟ್ಟು ದಾರಿ ತಪ್ಪಿಸುತಿದ್ದರು. ರೈತರಿಗೆ ತೊಂದರೆಯಾಗುತ್ತಿತ್ತು. ಕಾಯ್ದೆಯಿಂದ ತೊಂದರೆ ಯಾಗಿರುವುದು ಮಧ್ಯವರ್ತಿಗಳಿಗೆ ಹೊರತು ರೈತರಿಗಲ್ಲ. ರೈತರ ಬದುಕಿಗೆ ಶಕ್ತಿ ಕೊಡುವ ಉದ್ದೇಶ ಕಾಯ್ದೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next