Advertisement

Belthangady: ತಾಲೂಕಿನ ಕುತ್ಲೂರಿಗೆ ಅತ್ಯುತ್ತಮ ಪ್ರವಾಸಿ ಹಳ್ಳಿ ಪ್ರಶಸ್ತಿ

01:11 PM Sep 26, 2024 | Team Udayavani |

ಬೆಳ್ತಂಗಡಿ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ವರ್ಷಂಪ್ರತಿ ನಡೆಯುವ ಅತ್ಯುತ್ತಮ ಪ್ರವಾಸಿ ಹಳ್ಳಿಗಳು ಸ್ಪರ್ಧೆಯಲ್ಲಿ ಕುತ್ಲೂರು ಗ್ರಾಮವು ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದೆ.

Advertisement

ಸೆ.27ರಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯುವ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ. ಉಪ ರಾಷ್ಟ್ರಪತಿ ಜಗದೀಪ್‌ ಧನ್ಕರ್‌, ಪ್ರಧಾನಿ ನರೇಂದ್ರ ಮೋದಿ, ಪ್ರವಾಸೋದ್ಯಮ ಇಲಾಖೆಯ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕುತ್ಲೂರು ಗ್ರಾಮಸ್ಥರ ಪರವಾಗಿ ಹರೀಶ್‌ ಡಿ.ಸಾಲ್ಯಾನ್‌ ಮತ್ತು ಶಿವರಾಜ್‌ ಅಂಚನ್‌ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಬೆಸ್ಟ್‌ ಟೂರಿಸಂ ವಿಲೇಜ್‌ ಕಾಂಪಿಟೀಶನ್‌
ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋಧ್ಯಮ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಹೊಂದುತ್ತಿರುವ ಗ್ರಾಮಗಳನ್ನು ಗುರುತಿಸುವ ಸಂಬಂಧ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ (Best Tourism Village Competition-2024) ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಯಡಿ ದ.ಕ.ಜಿಲ್ಲೆಯ (Adventure Tourism Category) ಅಡಿಯಲ್ಲಿ ಕುತ್ಲೂರು ನಿವಾಸಿಗಳಾದ ಹರೀಶ್‌ ಡಿ.ಸಾಲ್ಯಾನ್‌, ಶಿವರಾಜ್‌ ಮತ್ತು ಸಂದೀಪ್‌ ಪೂಜಾರಿ ನಾರಾವಿ ಅವರು ಕುತ್ಲೂರು ಗ್ರಾಮದ ಪ್ರವಾಸಿ ತಾಣಗಳು, ಪರಿಸರ ಹಾಗೂ ಪ್ರಕೃತಿಯ ಸೊಬಗಿನ ಬಗ್ಗೆ ಒಂದು ಡಾಕ್ಯುಮೆಂಟರಿ ಸಿದ್ಧಪಡಿಸಿ ಸ್ಪರ್ಧಾ ನಿಯಮದಂತೆ ಆನ್‌ಲೈನ್‌ನಲ್ಲಿ ಆಪ್‌ಲೋಡ್‌ ಮಾಡಿದ್ದರು. ದೇಶಾದ್ಯಂತ ನಡೆದ ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರವಾಸಿ ಹಳ್ಳಿಗಳು ಸ್ಪರ್ಧೆಯಲ್ಲಿ ಕುತ್ಲೂರು ಗ್ರಾಮ ಆಯ್ಕೆಯಾಗಿದೆ.

ಕುತ್ಲೂರಿನ ಸೌಂದರ್ಯ
ಕುತ್ಲೂರಿನ ಅರ್ಬಿ ಫಾಲ್ಸ್‌, ಕುಕ್ಕುಜೆ ಕ್ರಾಸ್‌, ಪಶ್ಚಿಮಘಟ್ಟ, ಅರ್ಬಿ ಜಲಪಾತ ನೀರು ಸಾಗುವ ದೃಶ್ಯ, ಟ್ರೆಕ್ಕಿಂಗ್‌ ತಾಣವಾಗಿರುವ ಪಂಜಲ್‌ ಗುಡ್ಡ, ಮಡಿಕೆ ರಸ್ತೆ, ಪರುಶಗುಡ್ಡೆ ಜೈನ ಬಸದಿ, ಕುತ್ಲೂರು ಶಾಲೆ, ಕುಕ್ಕುಜೆ ಕ್ರಾಸ್‌ ಹೀಗೆ ವಿಡಿಯೋ ಚಿತ್ರೀಕರಣ ನಡೆಸಲಾಗಿತ್ತು. ಈ ಹಿಂದೆ ಕತ್ಲೂರಿಗಿದ್ದ ನಕ್ಸಲ್‌ ಹಣೆಪಟ್ಟಿ ಕಳಚಿದ ಬಳಿಕ ಇದೀಗ ಸೌಂದರ್ಯ ತಾಣವಾಗಿ ಪ್ರವಾಸಿಗರನ್ನು ಕುತ್ಲೂರಿಗೆ ಕೈಬೀಸಿ ಕೆರೆಯುವಂತ ಕೆಲಸ ಯುವಕರು ಮಾಡಿದ್ದಾರೆ.

ವಿದೇಶಕ್ಕೆ ತೆರಳಿದ ಬಳಿಕ ಚಿಂತನೆ
ಕುತ್ಲೂರು ನಿವಾಸಿಗಳಾದ ಕತಾರ್‌ನಲ್ಲಿ ಉದ್ಯೋಗದಲ್ಲಿರುವ ಸಂದೀಪ್‌ ಪೂಜಾರಿ ಕುತ್ಲೂರು ಮತ್ತು ಎಂಜಿನಿಯರ್‌ ಪದವೀಧರರಾದ ಹರೀಶ್‌ ಡಿ.ಸಾಲ್ಯಾನ್‌, ಶಿವರಾಜ್‌ ವೀಡಿಯೋದ ಪ್ರಮುಖ ರೂವಾರಿಗಳು. ವಿದೇಶಕ್ಕೆ ತೆರಳಿದ್ದ ಸಂದೀಪ್‌ ಅವರಿಗೆ ನಮ್ಮ ಊರಿನ ಸೌಂದರ್ಯವನ್ನು ಎಲ್ಲೆಡೆ ಪಸರಿಸಬೇಕೆಂಬ ಆಸೆ ಹುಟ್ಟಿತ್ತು. ಈ ಉದ್ದೇಶದಿಂದ ಊರಿಗೆ ಬಂದು ವೀಡಿಯೋ ಚಿತ್ರೀಕರಿಸಿದ್ದರು. ಕಳೆದ ವರ್ಷ ಮಾಡಿರುವ ವೀಡಿಯೋ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು. ಈ ವರ್ಷ ರಾಷ್ಟ್ರೀಯ ಪ್ರಶಸ್ತಿ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಕುತ್ಲೂರು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪ್ರಕೃತಿ ಸೌಂದರ್ಯವನ್ನು ಹಾಸುಹೊದ್ದಿದೆ. ಸೌಂದರ್ಯ ಪಸರಿಸುವ ಕೆಲಸ ನಾವು ಮಾಡಿದ್ದೇವೆ. ವಿದೇಶದಲ್ಲಿದ್ದ ನಮಗೆ ಊರಿನ ಮಹತ್ವ ಅರಿವಾಗಿತ್ತು. ಸತತ ಪ್ರಯತ್ನದ ಫಲವಾಗಿ ಈ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ.
-ಸಂದೀಪ್‌ ಪೂಜಾರಿ ಕುತ್ಲೂರು, ತಂಡದ ರುವಾರಿ.

Advertisement

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next