ಬಳ್ಳಾರಿ: ನಗರದ ವಿಮ್ಸ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಶ್ರೇಯಸ್ ಜೋಶಿ (25) ಮಾನಸಿಕ ಖಿನ್ನತೆಯಿಂದ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಮ್ಸ್ ಕಾಲೇಜಿನ ವಸತಿ ನಿಲಯದ ಕೋಣೆಯಲ್ಲಿ ಕತ್ತಿಗೆ ನೇಣು ಬಿಗಿದುಕೊಂಡಿದ್ದ ಶ್ರೇಯಸ್ ಜೋಶಿಯನ್ನು ಸ್ನೇಹಿತರು ಕೂಡಲೇ ಚಿಕಿತ್ಸೆಗೆಂದು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಶನಿವಾರ ಅಸುನೀಗಿದ್ದಾನೆ.
ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕು ರಾಜೇಶ್ವರ ಗ್ರಾಮದವರಾಗಿದ್ದ ಶ್ರೇಯಸ್ ಜೋಶಿ, ಇತ್ತೀಚೆಗಷ್ಟೇ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಯನ್ನು ಬರೆದು ಉತ್ತೀರ್ಣನಾಗಿದ್ದನು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈತ ಬೈಪೋಲಾರ್ ಡಿಸಾರ್ಡರ್ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೇಯಸ್ ಜೋಶಿ ಆತ್ಮಹತ್ಯೆಗೂ ಮುನ್ನ ತನ್ನ ಅಕ್ಕ ಶ್ರದ್ಧಾಳಿಗೆ ದೂರವಾಣಿ ಕರೆ ಮಾಡಿದ್ದನೆಂದು ತಿಳಿದು ಬಂದಿದೆ. ಮೃತನು ಸ್ನೇಹಿತರ ಮುಂದೆ ಹೇಳಿಕೊಂಡಿರುವಂತೆ ಎಂಬಿಬಿಎಸ್ ವ್ಯಾಸಂಗದ ಬಗ್ಗೆ ಒಲವು ಇರಲಿಲ್ಲ. ಇಂಜಿನೀಯರಿಂಗ್ ನಲ್ಲಿ ಆಸಕ್ತಿ ಇತ್ತಂತೆ. ಆದರೆ, ಮನೆಯವರ ಒತ್ತಾಯಕ್ಕೆ ಎಂಬಿಬಿಎಸ್ ಮಾಡಬೇಕಾಯಿತು ಎಂದಿದ್ದನಂತೆ.
ಇದನ್ನೂ ಓದಿ : ಮೂಡಲಗಿ: ಪಂಚಾಮಸಾಲಿ 2ಎ ಮೀಸಲಾತಿಗಾಗಿ ಭುಗಿಲೆದ್ದ ಆಕ್ರೋಶ