Advertisement

ಬೆಲ್ ಬಾಟಮ್ ಲೋಕೇಶ್ ಆತ್ಮಹತ್ಯೆ: ಕೋವಿಡ್ ಹೊಡೆತಕ್ಕೆ ಕರಗಿದ ಕಲಾ ನಿರ್ದೇಶಕನ ಬಾಳು!

12:49 PM Jul 04, 2020 | keerthan |

ದೇಶವೀಗ ಕೋವಿಡ್-19 ಸೋಂಕು ಬಾಧೆಯಿಂದ ತತ್ತರಿಸುತ್ತಿದೆ. ದಿನಪ್ರತಿ ಸೋಂಕಿತರ ಸಂಖ್ಯೆ, ಸಾವನ್ನಪ್ಪುತ್ತಿರುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಆದರೆ ಮತ್ತೊಂದು ಕಡೆ ಕೋವಿಡ್ ಸೋಂಕಿನ ಪರೋಕ್ಷ ಹೊಡೆತದಿಂದ ಹಲವರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದೇ ಕಾರಣದಿಂದ ಕೆಲವರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಕನ್ನಡದ ಯುವ ಕಲಾ ನಿರ್ದೇಶಕ ಲೋಕೇಶ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ತೆರೆಯ ಮೇಲೆ ತನ್ನ ಕಲಾ ತಾಕತ್ತು ತೋರಿಸಿ, ತನ್ನ ಬದುಕಿನ ಫ್ರೇಮ್ ಸುಂದರವಾಗಿಸಲು ಗಾಂಧೀನಗರಕ್ಕೆ ಬಂದಾತ ಲೋಕೇಶ್. ಆದರೆ ಕಲಾ ಪ್ರತಿಭೆ ಅರಳುವ ಸಮಯದಲ್ಲೇ ಕೋವಿಡ್ ಹೊಡೆತಕ್ಕೆ ಸಿಲುಕಿ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾರೆ.

ಲೋಕೇಶ್ ಮೂಲತಃ ನಾಗಮಂಗಲದವರು. ಕೆಲ ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡ ಅವರು ಸಹೋದರನ ಜೊತೆ ವಾಸವಿದ್ದರು. ಚಿತ್ರರಂಗದಲ್ಲಿ ದುಡಿಯುತ್ತಾ ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಲ್ ಬಾಟಮ್ ಮತ್ತು ಅವನೇ ಶ್ರೀಮನ್ನಾರಾಯಣ ದಂತಹ ಹಿಟ್ ಚಿತ್ರಗಳಿಗೆ ಲೋಕೇಶ್ ಕಲಾ ನಿರ್ದೇಶನ ಮಾಡಿದ್ದರು.

ಬೆಲ್ ಬಾಟಮ್ ಒಂದು ರೆಟ್ರೋ ಇಮೇಜ್ ಚಿತ್ರ. ಅವನೇ ಶ್ರೀಮನ್ನಾರಾಯಣ ಫ್ಯಾಂಟಸಿ ಟಚ್ ಇರುವ ಚಿತ್ರ. ಮಾಮೂಲಿ ಚಿತ್ರಗಳಿಗಿಂತ ವಿಭಿನ್ನವಾಗಿರುವ ಈ ಎರಡೂ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡುವ ಸವಾಲಿನ ಕೆಲಸವನ್ನು ಲೋಕೇಶ್ ಯಶಸ್ವಿಯಾಗಿ ನಿಭಾಯಿಸಿದ್ದರು. ಮುಂದಿನ ದಿನಗಳಲ್ಲಿ ಬೆಲ್ ಬಾಟಮ್ -2, ಬನಾರಸ್ ಚಿತ್ರಗಳಿಗೆ ಲೋಕೇಶ್ ಕೆಲಸ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ಕೋವಿಡ್ ತನ್ನ ಆಟ ಶುರು ಮಾಡಿತ್ತು.

Advertisement

ಕೋವಿಡ್-19 ಸೋಂಕು ಹರಡಲು ಆರಂಭವಾದ ನಂತರ ಚಿತ್ರೀಕರಣ ಆರಂಭವಾಯಿತು. ಸುಮಾರು ಮೂರು ತಿಂಗಳನಿಂದ ಯಾವುದೇ ಚಿತ್ರೀಕರಣವಿಲ್ಲದೆ ಕುಳಿತಿದ್ದ ಲೋಕೇಶ್ ಗೆ ಆರ್ಥಿಕ ಸಂಕಷ್ಟ ಎದುರಾಯಿತು. ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ಕುಳಿತಾಗ ಒಂಟಿತನ, ಖಿನ್ನತೆ ಸಮಸ್ಯೆ ಎದುರಾಯಿತು. ಸ್ವಾಭಿಮಾನಿ ಲೋಕೇಶ್ ಹಣಕ್ಕಾಗಿ ಅಥವಾ ತನ್ನ ಸಮಸ್ಯೆಗಾಗಿ ಯಾರ ಬಳಿಯೂ ಚರ್ಚಿಸುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಕೊರಗಿಹೋದ ಲೋಕೇಶ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿನಿಮಾ ಲೋಕ ಎಂಬ ಬಣ್ಣದ ಜಗತ್ತಿನಲ್ಲಿ ಲೋಕೇಶ್ ಅಸಹಾಯಕರಾಗಿ ಹೋದರು. ತನ್ನ ಪ್ರತಿಭೆಯ ಪೂರ್ಣ ಅನಾವರಣ ಆಗುವ ಮೊದಲೇ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next